ಮಂಡ್ಯ: ಚಾಲಕನ ನಿರ್ಲಕ್ಷ್ಯದಿಂದ ಕೆಎಸ್ಸಾರ್ಟಿಸಿ ಬಸ್ ನದಿಗೆ ಬಿತ್ತೇ?
ಮಂಡ್ಯ, ಜನವರಿ,29: ಮಂಡ್ಯ ಜಿಲ್ಲೆಯ ಶಿಂಷಾ ನದಿ ಬಳಿ ಗುರುವಾರ ನಡೆದ ಕೆಎಸ್ಆರ್ ಟಿಸಿ ಬಸ್ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಗಾಯಗೊಂಡ ಮಂದಿ, ಮೃತನ ಕುಟುಂಬ ಸಂಬಂಧಿಕರು ದೂರಿದ್ದು, ಇವರ ಆಕ್ರಂದನ ಮನಕಲುಕುವಂತಿತ್ತು.
ಬೆಂಗಳೂರಿನಿಂದ ತಮ್ಮ ತಮ್ಮ ಊರಿಗೆ ತಲುಪಲು ಶ್ರವಣಬೆಳಗೊಳಕ್ಕೆ ತೆರಳುವ ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಕರು ಹೊರಟಿದ್ದರು. ಆದರೆ ಮದ್ದೂರಿನ ಶಿವಪುರ ಸಮೀಪ ಶಿಂಷಾನದಿಗೆ ಬಸ್ ಉರುಳಿದ್ದರಿಂದ ಒಬ್ಬರು ಇಹಲೋಕ ತ್ಯಜಿಸಿದರೆ, 38 ಮಂದಿ ಗಂಭೀರ ಗಾಯಗೊಂಡು ಮನೆ ಸೇರುವ ಬದಲು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾಸನ ಜಿಲ್ಲೆಯ ರಾಮನಾಥಪುರ ಡಿಪೋಗೆ ಸೇರಿದ ಬಸ್ (ಕೆ.ಎ.12 ಎಫ್-1944) ಅಪಘಾತಕ್ಕೆ ಈಡಾಗಿದ್ದು, ಅದೃಷ್ಟಾವಶಾತ್ ನದಿಯಲ್ಲಿ ಹೆಚ್ಚಿನ ನೀರು ಇಲ್ಲದೆ, ಕೆಸರು ತುಂಬಿದ್ದರಿಂದ ಸಾವಿನ ಸಂಖ್ಯೆ ಕಡಿಮೆಯಾಗಿದೆ.
ಜಿಲ್ಲಾಧಿಕಾರಿ ಡಾ.ಅಜಯನಾಗಭೂಷಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ಕುಮಾರ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.[ಶಿಂಷಾ ನದಿಗೆ ಬಿದ್ದ ಕೆಎಸ್ಆರ್ ಟಿಸಿ ಬಸ್, 1 ಸಾವು]
ಅಪಘಾತ ನಡೆದ ಸ್ಥಳಕ್ಕೆ ಸಂಸದ ಸಿ.ಎಸ್.ಪುಟ್ಟರಾಜು ಹಾಗೂ ಶಾಸಕ ಡಿ.ಸಿ.ತಮ್ಮಣ್ಣ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು. ಮೃತನ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇನ್ನಿತರ ಮಾಹಿತಿ ಇಲ್ಲಿವೆ.
ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ?
ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬ ದೂರುಗಳು ಜನರಿಂದ ಕೇಳಿ ಬಂದಿವೆ.ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಸುತ್ತಮುತ್ತಲಿನ ಜನ ಜಮಾಯಿಸಿದ್ದರಿಂದ ಸಂಚಾರಕ್ಕೆ ಅಡಚಣೆ ಆಗಿದ್ದು, ಕಾರ್ಯಾಚರಣೆಗೂ ತೊಂದರೆಯಾಯಿತು. ಬಳಿಕ ಕ್ರೇನ್ ಮೂಲಕ ಬಸ್ಸನ್ನು ಮೇಲೆತ್ತಲಾಯಿತು.
ಅಪಘಾತದಲ್ಲಿ ಸಾವನ್ನಪ್ಪಿದ್ದು ಯಾರು?
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮದ್ದೂರು ತಾಲೂಕಿನ ಹೆಬ್ಬೆರಳು ಗ್ರಾಮದ ಎಚ್.ಎಂ.ರಾಮಕೃಷ್ಣ (47) ಎಂಬುವರು ಮೃತಪಟ್ಟಿದ್ದಾರೆ. ಇವರು ರಾಮನಗರಕ್ಕೆ ರೇಷ್ಮೇ ಗೂಡು ಮಾರಲು ತೆರಳಿದ್ದರು. ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
ಗಾಯಗೊಂಡವರು ಯಾರು?
ಬಸ್ ಚಾಲಕ ವಿರೂಪಾಕ್ಷ, ನಿರ್ವಾಹಕ ಗೋವಿಂದ್, ಪ್ರಯಾಣಿಕರಾದ ಮೈಸೂರಿನ ನಿವಾಸಿಗಳಾದ ಮಧುಶ್ರೀ, ರಾಘವೇಂದ್ರ, ಬುದ್ಧದೇವ, ಮಂಡ್ಯ ತಾಲೂಕು ಕೆರಗೋಡು ದಿವ್ಯಶ್ರೀ, ನಂಜಾಪುರದ ಪುಟ್ಟಸ್ವಾಮಿ, ಪಾಂಡವಪುರದ ಮಂಗಳಮ್ಮ, ಉಮೇಶ್, ಮಹದೇವಯ್ಯ, ರಘುಕುಮಾರ್, ದಿವ್ಯ, ದಿವ್ಯಶ್ರೀ, ಶಿವಲಿಂಗಯ್ಯ, ಎಚ್.ಎಂ.ಮಂಚೇಗೌಡ, ಇಂದಿರಮ್ಮ, ಬೋರೇಗೌಡ, ಅಸ್ಲಂ, ಸಂತೋಷ್, ರಾಮಕೃಷ್ಣ, ಈರಯ್ಯ, ಶಿವಲಿಂಗು, ಭಾಗ್ಯಮ್ಮ, ಶಿವಣ್ಣ, ಈಶ್ವರಚಾರಿ ಸೇರಿದಂತೆ 38ಮಂದಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಮದ್ದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಬಸ್ಸು ಎಷ್ಟು ಅಡಿಯಿಂದ ಕೆಳಕ್ಕೆ ಬಿದ್ದಿದೆ?
ಕೆಎಸ್ಆರ್ ಟಿಸಿ ಬಸ್ ಮಂಡ್ಯ ಜಿಲ್ಲೆಯ ಶಿಂಷಾ ನದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಸುಮಾರು 50 ಅಡಿ ಎತ್ತರದಿಂದ ನದಿಗೆ ಬಿದ್ದಿದೆ. ಬಸ್ ಉರುಳಿ ಬಿದ್ದ ತಕ್ಷಣವೇ ಸ್ಥಳೀಯರು ನದಿಗೆ ಇಳಿದು ಬಸ್ಸಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಹ ಸಕಾಲಕ್ಕೆ ಆಗಮಿಸಿ, ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದರು.