ಕೆಎಸ್ಆರ್ ಟಿಸಿ ಬಸ್ ಗಳ ಅಪಘಾತಕ್ಕೆ ಪ್ರೇತಬಾಧೆ ಕಾರಣ?
ಕಾಸರಗೋಡು,ನವೆಂಬರ್, 26 : ಪ್ರೇತಬಾಧೆ ಇದೆ ಎಂಬ ನಂಬಿಕೆಯಿಂದ ಕೆಎಸ್ಆರ್ ಟಿಸಿ ಅಧಿಕಾರಿಗಳ ಸಮ್ಮುಖದಲ್ಲೇ ಡಿಪೋದಲ್ಲಿ ಮಧ್ಯರಾತ್ರಿ ಹೋಮ ನಡೆದಿದೆ. ಇದು ಕೆಎಸ್ಆರ್ ಟಿಸಿ ಸಂಸ್ಥೆಯಲ್ಲಿ ವಿವಾದ ಹುಟ್ಟಿದ್ದು, ಜ್ಯೋತಿಷ್ಯರನ್ನು ಕರೆಸಿ ಹೋಮ ನಡೆಸಲು ಕಾರಣ ಏನೆಂಬುದು ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ.
ಹೌದು..ಈ ಘಟನೆ ನಡೆದಿದ್ದು ಅಕ್ಟೋಬರ್ 22ರ ಗುರುವಾರ, ಆದರೆ ಒಂದು ತಿಂಗಳ ನಂತರ ಹೋಮ ನಡೆದಿದೆ. ಕೆಎಸ್ಆರ್ ಟಿಸಿ ಬಸ್ ಗಳು ಅಪಘಾತ ಆಗುತ್ತಿರುವುದು ಪ್ರೇತಬಾಧೆಯಿಂದ ಎಂದು ತಿಳಿದು ಮಧ್ಯರಾತ್ರಿಯಲ್ಲಿ ನಡೆಸಿರುವ ಹೋಮ ಎಲ್ಲರನ್ನು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಕರ್ನಾಟಕ ಗಡಿ ಪ್ರದೇಶದ ಜ್ಯೋತಿಷಿಯೊಬ್ಬರ ನೇತೃತ್ವದಲ್ಲಿ ಈ ಪೂಜೆ ನಡೆದಿದೆ.[ಕೆಎಸ್ ಆರ್ ಟಿಸಿ ಯಮಕಿಂಕರ ಡ್ರೈವರ್ ಗಳಿಂದ ಕಾಪಾಡಿ]
ಸುತ್ತಮುತ್ತಲೂ ಹಬ್ಬಿರುವ ಸಂಶಯಗಳಿಗೆ ಸ್ಪಷ್ಟನೆ ನೀಡಿರುವ ಕೆಎಸ್ ಆರ್ ಟಿಸಿ ಅಧಿಕಾರಿಗಳು, 'ಆಯುಧ ಪೂಜೆಯ ಅಂಗವಾಗಿ ಗಣಪತಿ ಪೂಜೆ ಮಾತ್ರ ನಡೆದಿರುವುದಾಗಿ ಹೇಳಿದ್ದಾರೆ. ಆದರೆ ಈ ಘಟನೆ ರಾಜ್ಯದಲ್ಲೇ ಹೊಸ ವಿವಾದ ಸೃಷ್ಟಿಸಿದ್ದು, ತನಿಖೆಗೂ ಆದೇಶಿಸಲಾಗಿದೆ.[ಕೆಎಸ್ ಆರ್ ಟಿಸಿ ಮಾಸಿಕ ಪಾಸು ದರ ಹೆಚ್ಚಳ]
ಕೆಎಸ್ ಆರ್ ಟಿಸಿ ಬಸ್ಗಳು ಆಗಾಗ ಅಪಘಾತಕ್ಕೆ ಒಳಗಾಗುತ್ತಿರುವ ಬಗ್ಗೆ ಕೆಲ ಚಾಲಕರು ಜ್ಯೋತಿಷ್ಯರಲ್ಲಿಗೆ ತೆರಳಿದ್ದಾರೆ. ಆಗ ಜ್ಯೋತಿಷಿಗಳು ಡಿಪೋ ಕಾರ್ಯಾಚರಿಸುತ್ತಿರುವ ಸ್ಥಳದಲ್ಲಿ ಪ್ರೇತ ಬಾಧೆ ಇದ್ದು , ಇದರಿಂದ ಮುಕ್ತಿ ಲಭಿಸಿದ್ದಲ್ಲಿ ಮಾತ್ರ ಅಪಘಾತ ತಡೆಗಟ್ಟಲು ಸಾಧ್ಯ ಎಂದು ಜ್ಯೋತಿಷಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಯೋತಿಷಿಯ ನೇತೃತ್ವದಲ್ಲಿ ಪೂಜೆ ನಡೆದಿದೆ ಎನ್ನಲಾಗಿದೆ. ಹಣವನ್ನು ಚಾಲಕರು ಒಟ್ಟು ಗೂಡಿಸಿದ್ದಾಗಿಯೂ ತಿಳಿದುಬಂದಿದೆ.