ದಾಳಿಂಬೆ ಕೈಕೊಟ್ಟು ಕೆಆರ್ ಪೇಟೆ ರೈತ ನೇಣಿಗೆ ಶರಣು
ಮಂಡ್ಯ, ಜೂನ್ 15 : ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿರುವ ಕರ್ನಾಟಕದ ರೈತರ ಸಂಖ್ಯೆಗೆ ಲೆಕ್ಕವೇ ಇಲ್ಲದಂತಾಗಿದೆ. ಇಂಥದೇ ಹೃದಯ ಹಿಂಡುವ ಘಟನೆಯೊಂದು ಕೆ.ಆರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ಬುಧವಾರ ನಡೆದಿದೆ.
ವಳಗೆರೆಮೆಣಸ ಗ್ರಾಮದ ಲಕ್ಕೇಗೌಡ ಅವರ ಪುತ್ರ ಕೃಷ್ಣೇಗೌಡ(52) ಮೃತಪಟ್ಟ ರೈತ. ಕೃಷ್ಣೇಗೌಡ ಅವರು ಗ್ರಾಮದ 4 ಎಕರೆ 20 ಗುಂಟೆ ಜಮೀನಿನ ಪೈಕಿ 2 ಎಕರೆಯಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದರು. ಇದಕ್ಕಾಗಿ ಕೆ.ಆರ್.ಪೇಟೆ ಪಟ್ಟಣದ ವಿಜಯಾ ಬ್ಯಾಂಕಿನಲ್ಲಿ 1 ಲಕ್ಷ ರು., ಅಗ್ರಹಾರಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 30 ಸಾವಿರ ರೂ ಸಾಲ, ಜೊತೆಗೆ ಮನೆಯಲ್ಲಿದ್ದ 200 ಗ್ರಾಂ ಚಿನ್ನವನ್ನು ಖಾಸಗಿ ಗಿರವಿ ಅಂಗಡಿಯಲ್ಲಿಟ್ಟು ಸಾಲ ಪಡೆದುಕೊಂಡಿದ್ದರು.
ಇಷ್ಟೇ ಅಲ್ಲದೆ ಖಾಸಗಿ ವ್ಯಕ್ತಿಗಳಿಂದಲೂ 10ರಿಂದ 12 ಲಕ್ಷ ರು. ಸಾಲ ಮಾಡಿದ್ದರು. ಕೃಷ್ಣೇಗೌಡ ಅವರು ದಾಳಿಂಬೆ ಬೆಳೆಯಿಂದ ಬಂದ ಆದಾಯದಲ್ಲಿ ಸಾಲ ತೀರಿಸುವ ಯೋಜನೆ ರೂಪಿಸಿದ್ದರು. ದಾಳಿಂಬೆ ಬೆಳೆ ಮತ್ತು ಉಳಿದ ಎರಡು ಎಕರೆ ಜಮೀನಿನಲ್ಲಿ ಕಬ್ಬು, ಭತ್ತ ಇತರೆ ಬೆಳೆಗಳನ್ನು ಬೆಳೆಯಲು ಸುಮಾರು 10 ಬೋರ್ವೆಲ್ಗಳನ್ನು ಕೊರೆಯಿಸಿದ್ದರು. [ವಿದ್ಯುತ್ ಕತ್ತರಿಸಿದ ಅಧಿಕಾರಿಯೆದುರೇ ವಿಷ ಕುಡಿದ ರೈತ]
ಆದರೆ ಇದ್ಯಾವುದೂ ಅವರಿಗೆ ಫಲ ನೀಡಿರಲಿಲ್ಲ. ಮತ್ತೆ ಎರಡು ಬೋರ್ವೆಲ್ಗಳಲ್ಲಿ ಅಲ್ಪಸ್ವಲ್ಪ ನೀರು ಬಂದಿತ್ತು. ಮಳೆ ಇಲ್ಲದ ಕಾರಣ ಅವುಗಳಲ್ಲಿಯೂ ಅಂತರ್ಜಲ ಕುಸಿದಿತ್ತು. ದಾಳಿಂಬೆ ಬೆಳೆಯು ನೀರಿಲ್ಲದೆ ಸರಿಯಾಗಿ ಫಲ ಬಿಟ್ಟಿರಲಿಲ್ಲ. ಇದರಿಂದ ನೊಂದ ಕೃಷ್ಣೇಗೌಡ ತಮ್ಮ ದಾಳಿಂಬೆ ತೋಟದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಇಹಲೋಕ ತ್ಯಜಿಸಿದ್ದಾರೆ.
ಮೃತ ರೈತನಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಪಟ್ಟಣ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಎಚ್.ಎನ್.ವಿನಯ್ ಮತ್ತಿತರರು ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೈತನ ಆತ್ಮಕ್ಕೆ ಶಾಂತಿ ಸಿಗಲಿ, ರೈತನ ಕುಟುಂಬಕ್ಕೆ ಸರಕಾರ ಪರಿಹಾರ ದೊರಕಿಸಿಕೊಡಲಿ. [ಮುದ್ದೇಗೌಡನದೊಡ್ಡಿ ಗ್ರಾಮದ ರೈತ ಪುಟ್ಟಸ್ವಾಮಿ ಆತ್ಮಹತ್ಯೆ]