ಮತ್ತೆ ದೆಹಲಿಗೆ: ಪರಮೇಶ್ವರ್ ಆಸೆ ಈಡೇರ್ಸಿ ಬಿಡ್ರಪ್ಪಾ ಅತ್ಲಾಗೆ
ರಾಜಕೀಯ ಎಂದ ಮೇಲೆ ಮುಖಂಡರು ಸ್ಥಾನಮಾನ ಬಯಸುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವುದು, ಅತಿರೇಕ ಎನ್ನುವ ಮಟ್ಟಿಗೆ ಚರ್ಚೆಯ ವಿಷಯವಾಗುತ್ತಿದೆ.
ಡಿಸಿಎಂ ಹುದ್ದೆ ಬೇಕೆಂದು ಪರಮೇಶ್ವರ್ ಅದೆಷ್ಟು ಬಾರಿ ಫೈಲುಗಳನ್ನು/ದೂರು ದುಮ್ಮಾನಗಳನ್ನು ತೆಗೆದುಕೊಂಡು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್ ಬಾಗಿಲು ಬಡಿದಿದ್ದಾರೆ ಎನ್ನುವ ಇತಿಹಾಸ ರಾಜ್ಯದ ಜನತೆಯ ಮುಂದಿದೆ.
ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ, ಪರಮೇಶ್ವರ್ ತಮ್ಮ 'ಡಿಸಿಎಂ' ಕನಸನ್ನು ನನಸು ಮಾಡಿಕೊಳ್ಳಲು 'ಬ್ಯಾಂಗಲೋರ್ ಟು ಡೆಲ್ಲಿ ಆಂಡ್ ಬ್ಯಾಕ್' ವಿಮಾನಯಾನದ ಖರ್ಚಿಗೆ ವ್ಯಯಿಸಿದ ದುಂದುವೆಚ್ಚ ನೋಡಿದರೆ ಜನಸಾಮಾನ್ಯರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವುದಂತೂ ಖಾತ್ರಿ. (ಪರಮೇಶ್ವರ್ ಸಿಎಂ ಮಾಡಲು ದಲಿತ ಸಂಘಟನೆಗಳ ಗಡುವು)
ಎಐಸಿಸಿಯಲ್ಲಿ ಯಾವುದೂ ಸುಲಭವಾಗಿ ದಕ್ಕುವುದಿಲ್ಲ ಎನ್ನುವುದನ್ನು ಚೆನ್ನಾಗಿ ಅರಿತಿರುವ ನಿಷ್ಠಾವಂತ ಕಾಂಗ್ರೆಸ್ಸಿಗ ಪರಮೇಶ್ವರ್, ಪ್ರಯತ್ನ ತನ್ನದು ಫಲಿತಾಂಶ ಸೋನಿಯಾದ್ದು ಎಂದು ತನ್ನ ಭಗೀರಥ ಪ್ರಯತ್ನವನ್ನು ಮುಂದುವರಿಸಿಕೊಂಡು ಬರುತ್ತಲೇ ಇದ್ದಾರೆ.
ಆದರೆ, ಈ ಹಿಂದೆ ಹತ್ತು ಹಲವು ಬಾರಿ ತಾನು ನೀಡಿದ್ದ ಹೇಳಿಕೆಗೆ ಬದ್ದರಾಗದ ಪರಮೇಶ್ವರ್, ನಾನು ಡಿಸಿಎಂ ಹುದ್ದೆಯ ಆಕಾಂಕ್ಷಿ ಅಲ್ಲವೇ ಅಲ್ಲ , ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಎರಡು ದಿನಗಳ ಹಿಂದೆ ಹೇಳಿರುವುದನ್ನು ಮಾತ್ರ ದೇವರೂ ಮೆಚ್ಚಲಾರ.
ಸ್ಥಾನಮಾನ/ನಿಗಮ ಮಂಡಳಿ/ಸಂಪುಟ ವಿಸ್ತರಣೆ ವಿಚಾರದಲ್ಲಿ ಅದೆಷ್ಟೋ ಬಾರಿ ಪರಮೇಶ್ವರ್ ಮತ್ತು ಸಿಎಂ ನಡುವೆ ಮನಸ್ತಾಪ ಉಂಟಾಗಿದ್ದು ಗುಪ್ತವಾಗಿ ಉಳಿದಿಲ್ಲ. ಹಲವು ಬಾರಿ ಈ ವಿಚಾರದಿಂದ ಪಕ್ಷಕ್ಕೆ ಮತ್ತು ಸರಕಾರಕ್ಕೆ ಮುಜುಗರ ಉಂಟಾದ ಉದಾಹರಣೆಗಳೂ ಇವೆ.
ಬುಧವಾರ (ಫೆ 18) ಪರಮೇಶ್ವರ್ ಮತ್ತೆ ದೆಹಲಿಯತ್ತ ಹೊರಟಿದ್ದಾರೆ. ಆದರೆ ಈ ಬಾರಿ ಡಿಸಿಎಂ ಪಟ್ಟಕ್ಕಾಗಿ ಅಲ್ಲ, ಬೇರೆ ಕನಸಿನೊಂದಿಗೆ. ಮುಂದೆ ಓದಿ..
ಜನಾಂದೋಲನ ಕ್ರಿಯಾ ಸಮಿತಿ
ದಲಿತರೊಬ್ಬರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕೆನ್ನುವ ಉದ್ದೇಶದೊಂದಿಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ದಲಿತ ಸಂಘಟನೆಗಳು ಜನಾಂದೋಲನ ಕ್ರಿಯಾ ಸಮಿತಿ ಎನ್ನುವ ಹೊಸ ಸಮಿತಿಯನ್ನು ಹುಟ್ಟುಹಾಕಿವೆ. ಕಾಂಗ್ರೆಸ್ ಸರಕಾರದ ಇನ್ನುಳಿದ ಅಧಿಕಾರದ ಅವಧಿಯಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕೆನ್ನುವುದು ಸಮಿತಿಯ ಒಕ್ಕೂರಿಲಿನ ಆಗ್ರಹ.
ಯಾರು ಸಿಎಂ ಆಗಬೇಕು
ಈ ಸಮಿತಿ ಯಾರನ್ನು ಸಿಎಂ ಮಾಡಲು ಒತ್ತಾಯಿಸುತ್ತಿದೆ ಎನ್ನುವುದು ಇಲ್ಲಿ ಸ್ಪಷ್ಟ. ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ, ಆಂಜನೇಯ, ಮಹಾದೇವ ಪ್ರಸಾದ್ ಮುಂತಾದ ಹಿರಿಯ ನಾಯಕರಿದ್ದರೂ ದಲಿತ ಸಮಿತಿಯ ಆಯ್ಕೆ none other than ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್. ಈಗ ಸಮಿತಿಯ ಒಕ್ಕೂರಿಲಿನ ಒತ್ತಾಯವನ್ನು ಪತ್ರ/ದಾಖಲೆ ಸಮೇತ ಹೈಕಮಾಂಡಿಗೆ ತಲುಪಿಸುವ ಕೆಲಸ ಮಾಡಲು ಪರಮೇಶ್ವರ್ ದೆಹಲಿ ವಿಮಾನ ಹತ್ತಿದ್ದಾರೆ.
ಅಹಿಂದ ಮತಗಳು
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಹಿಂದ ಮತಗಳೂ ಕಾರಣ. ಪರಮೇಶ್ವರ್ ಸ್ವಪಕ್ಷೀಯರ ಕುತಂತ್ರದಿಂದಲೇ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಪರಮೇಶ್ವರ್ ಅವರ ಸೇವೆಯನ್ನು ನಾವು ಮರೆಯುವಂತಿಲ್ಲ. ಈಗ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿದರೆ ಪರಮೇಶ್ವರ್ ಮುಖ್ಯಮಂತ್ರಿ ಆಗಬಹುದು. ಪರಮೇಶ್ವರ್ ಸಿಎಂ ಆಗುವುದಕ್ಕೆ ಖರ್ಗೆ ಮುಂತಾದ ದಲಿತ ಮುಖಂಡರು ತಕರಾರು ಎತ್ತುವುದಿಲ್ಲ ಎನ್ನುವುದು ದಲಿತ ಸಮಿತಿಯ ಆಗ್ರಹ.
ಸಿದ್ದುಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ
ಪರಮೇಶ್ವರ್ ಅವರಿಗೆ ಸಿಎಂ ಮತ್ತು ಸಿದ್ದರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಬಹುದು ಎಂದ ದಲಿತ ಸಮಿತಿ ಒತ್ತಾಯಿಸಿದೆ. ಈ ನಡುವೆ, ಪರಮೇಶ್ವರ್ ದೆಹಲಿಗೆ ಹೋಗುತ್ತಿದ್ದರೆ, ರಾಜ್ಯದ ಉಸ್ತುವಾರಿ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಬರುತ್ತಿದ್ದಾರೆ. ಪರಮೇಶ್ವರ್ ಅವರ ಬೇಡಿಕೆ ಹೊಸದೇನಲ್ಲ, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಉತ್ತರಿಸಬೇಕೆಂದು ದಿಗ್ವಿಜಯ್ ಸಿಂಗ್ ಉತ್ತರಿಸಿ ಈ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ.
ಮರಳಿ ಪ್ರಯತ್ನವ ಮಾಡು
ಮರಳಿ ಪ್ರಯತ್ನವ ಮಾಡು ಎನ್ನುವ ಮಾತಿಗೆ ಮೊರೆಹೋದಂತಿರುವ ಪರಮೇಶ್ವರ್ ಮತ್ತೆ ದಾಖಲೆ ಸಮೇತ ಸೋನಿಯಾ/ರಾಹುಲ್ ಗಾಂಧಿ ಭೇಟಿ ಮಾಡಲು ದೆಹಲಿಗೆ ಪ್ರಯಾಣಿಸುತ್ತಿದ್ದಾರೆ. ಆದರೆ ಈ ಬಾರಿ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿಯಲ್ಲ, ಸಿಎಂ ಹುದ್ದೆಯ ಆಕಾಂಕ್ಷಿಯಾಗಿ. ಹೇಗೂ, ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿ ಆಗಬೇಕೆನ್ನುವ ಟಾಕ್ ನಡೆಯುತ್ತಿರುವುದರಿಂದ ಪರಮೇಶ್ವರ್ ಹೊಸ ಉತ್ಸಾಹದೊಂದಿಗೆ ದೆಹಲಿಗೆ ಹೊರಟಿದ್ದಾರೆ.
ಆದರೆ, ಕಾಂಗ್ರೆಸ್ ಹೈಕಮಾಂಡ್
ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಸರಕಾರ ಸುಸೂತ್ರವಾಗಿ ನಡೆಯುತ್ತಿರುವುದು ಎನ್ನುವುದನ್ನು ಚೆನ್ನಾಗಿ ಅರಿತಿರುವ ಹೈಕಮಾಂಡ್, ದಲಿತ ಸಂಘಟನೆಯ ಮೂಲಕ ಪರಮೇಶ್ವರ್ ಅವರ ಬೇಡಿಕೆಗೆ ಮಣೆಹಾಕುತ್ತಾ? ಸದ್ಯದ ಪರಿಸ್ಥಿತಿಯಲ್ಲಿ ಇಂತಹ ರಿಸ್ಕ್ ತೆಗೆದುಕೊಳ್ಳಲು ಹೈಕಮಾಂಡ್ ಸಿದ್ದವಿದೆಯಾ? ಸಿದ್ದರಾಮಯ್ಯ ಆಡಳಿತದ ಮೇಲೆ ಸಾರ್ವಜನಿಕರು ಸಿಟ್ಟಾಗಿ ಇಲ್ಲದೇ ಇರುವುದರಿಂದ ಪರಮೇಶ್ವರ್ ಬೇಡಿಕೆಗೆ ಒಪ್ಪಿಕೊಳ್ಳುವುದು ಕಷ್ಟ..ಕಷ್ಟ..