ಎಸಿಬಿ ಅಂಗಳ ತಲುಪಿದ ಅನಂತ್ ಕುಮಾರ್, ಯಡಿಯೂರಪ್ಪ ಗುಪ್ತ ಮಾತುಕತೆ
ಯಡಿಯೂರಪ್ಪ- ಅನಂತ ಕುಮಾರ್ ಸಂಭಾಷಣೆಯಿರುವ ಸಿಡಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಈ ಬಗ್ಗೆ ಬುಧವಾರ ಎಸಿಬಿ ದೂರು ನೀಡಿದೆ.
ಬೆಂಗಳೂರು, ಫೆಬ್ರವರಿ. 15 : ಹೈಕಮಾಂಡ್ ಗೆ ಕಪ್ಪ ವಿಷಯಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಸಂಭಾಷಣೆ ಸಿಡಿ ಕುರಿತಂತೆ ಬುಧವಾರ ಕೆಪಿಸಿಸಿ ಕಾನೂನು ಘಟಕ ಎಸಿಬಿಗೆ ದೂರು ನೀಡಿದೆ.
ಮೊದಲು ಸಿದ್ದರಾಮಯ್ಯ ಅವರು ಹೈಕಮಾಂಡ್ ಗೆ ಒಂದು ಸಾವಿರ ಕೋಟಿ ರುಪಾಯಿ ಕಪ್ಪ ನೀಡಿದ್ದಾರೆಂದು ಆರೋಪಿಸಿದ್ದ ಬಿಎಸ್ ವೈಗೆ ಈಗ ಮುಳುವಾಗಿ ಪರಿಣಮಿಸಿದೆ.[ಯಡಿಯೂರಪ್ಪ- ಅನಂತ್ ಮಾತನಾಡಿಕೊಂಡಿದ್ದು ಯಾರ ಬಗ್ಗೆ?]
'ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ನಡುವೆ ನಡೆದ ಸಂಭಾಷಣೆಯ ಪ್ರಕಾರ ಲಂಚರೂಪದಲ್ಲಿ ಹೈಕಮಾಂಡಿಗೆ ಹಣ ನೀಡಿರುತ್ತಾರೆ' ಈ ಕುರಿತು ತನಿಖೆ ನಡೆಸುವಂತೆ ದೂರು ನೀಡಲಾಗಿದೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ತಿಳಿಸಿದ್ದಾರೆ.
'ಯಡಿಯೂರಪ್ಪ ಅನಂತ್ ಕುಮಾರ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ. ಆದ್ದರಿಂದ, ಅವರು ರಾಜೀನಾಮೆ ನೀಡಬೇಕು. ಸರ್ಕಾರ ಬಿಜೆಪಿ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು' ಎಂದು ಧನಂಜಯ್ ಹೇಳಿದರು.[ಕಾಂಗ್ರೆಸ್, ಬಿಜೆಪಿ ಇಬ್ರೂ ಹೈಕಮಾಂಡಿಗೆ ಕಪ್ಪ ನೀಡಿದ್ದಾರೆ -ಹೆಚ್ಡಿಕೆ]
'ಒಂದು ವೇಳೆ ಅವರು ರಾಜೀನಾಮೆ ನೀಡದೇ ಹೋದಲ್ಲಿ ಅವರ ಮುಖವಾಡವನ್ನು ಜನತಾ ನ್ಯಾಯಾಲಯದಲ್ಲಿ ಕಳಚಲಾಗುವುದು. ಅಂದೂ ಭ್ರಷ್ಟರು ಇಂದೂ ಭ್ರಷ್ಟರೂ ಅಂತ ಹೋರಾಟ ಮಾಡುತ್ತೇವೆ' ಎಂದು ಹೇಳಿದರು.
ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವೆ ನಡೆದ ಸಂಭಾಷಣೆಯ ಸಿಡಿಯನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದರು.
ಬಿಎಸ್ ವೈ ಗೆ ತಿರುಮಂತ್ರ
ಸಿಎಂ ಸಿದ್ದರಾಮಯ್ಯ ಅವರು, ಹೈಕಮಾಂಡ್ ಗೆ ಕೋಟಿ ರು. ಹಣ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇತ್ತೀಚೆಗೆ ಬಾಂಬ್ ಸ್ಫೋಟಿಸಿದ್ದರು. ಆ ಬಾಂಬ್ ಗೆ ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಬಿಎಸ್ ವೈ ನಡೆಸಿದ್ದ ಗುಪ್ತ ಮಾತುಕತೆಯನ್ನು ಕಾಂಗ್ರೆಸ್ ನಾಯಕರು ಸಿಡಿ ರೂಪದಲ್ಲಿ ಬಿಡುಗಡೆ ಮಾಡಿ ಪ್ರತ್ಯುತ್ತರ ನೀಡಿದ್ದಾರೆ.
ಈ ಗುಪ್ತ ಮಾತು ನಡೆದಿದ್ದೇಲ್ಲಿ?
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭಾನುವಾರದಂದು ಕಾರ್ಯಕಾರಿಣಿ ಸಭೆ ನಡೆಯಿತು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಭಾಷಣ ಮಾಡುತ್ತಿರುವಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವಿನ ಸಂಭಾಷಣೆ ನಡೆದಿತ್ತು. ಈ ಸಂಭಾಷಣೆಯೇ ಕಾಂಗ್ರೆಸ್ ಸಿಡಿ ರೂಪದಲ್ಲಿ ಬಿಡುಗಡೆ ಮಾಡಿದೆ.
ಯಡಿಯೂರಪ್ಪ ಮೊದಲು ಆರೋಪಿಸಿದ್ದೇನು?
ಸಿದ್ದರಾಮಯ್ಯ ಅವರು, ಹೈಕಮಾಂಡ್ ಗೆ 1000 ಕೋಟಿ ರು. ನೀಡಿದ್ದಾರೆಂಬ ವಿಚಾರವನ್ನು ತಮ್ಮ ಡೈರಿಯಲ್ಲಿರುವುದಾಗಿ ಯಡಿಯೂರಪ್ಪ ಹೇಳಿ ಹೊಸ ಬಾಂಬ್ ಸಿಡಿಸಿದ್ದರು.
ತಿರುಗಿ ಬಿದ್ದ ಎಂಎಲ್ ಸಿ ಗೋವಿಂದ್ ರಾಜ್
ಸಿದ್ದರಾಮಯ್ಯ ಹೈಕಮಾಂಡ್ ಗೆ 1000 ಕೋಟಿ ರು. ನೀಡಿದ್ದಾರೆಂಬ ವಿಚಾರವನ್ನು ತಮ್ಮ ಡೈರಿಯಲ್ಲಿರುವುದಾಗಿ ಹೇಳಿರುವ ಯಡಿಯೂರಪ್ಪ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವಿಧಾನ ಪರಿಷತ್ ನಾಯಕ ಗೋವಿಂದ ರಾಜು ಗುಡುಗಿದ್ದಾರೆ.