ಕೋಡಿಶ್ರೀಗಳು ನುಡಿದ ಭವಿಷ್ಯವೇನು: ಕುಮಾರಸ್ವಾಮಿ ಮುಂದಿನ ಸಿಎಂ?
ಕೋಡಿಮಠ ಸಂಸ್ಥಾನದ ಶ್ರೀಗಳು ಹಾಸನದಲ್ಲಿ ಮುಂದಿನ ಅಸೆಂಬ್ಲಿ ಚುನಾವಣೆಯ ಬಗ್ಗೆ ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಾರೆ. ಬಿತ್ತಿದ ಬೆಳಸು ಪರರು ಕೊಯ್ದಾರು ಎನ್ನುವ ಶ್ರೀಗಳ ಭವಿಷ್ಯದ ಪ್ರಕಾರ ಕುಮಾರಸ್ವಾಮಿ ಮುಂದಿನ ಸಿಎಂ ಆಗುತ್ತಾರಾ ಎನ್ನುವುದು ಪ
ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರು ಹಾಸನದಲ್ಲಿ ಶನಿವಾರ (ಜು 1) ಮುಂದಿನ ಅಸೆಂಬ್ಲಿ ಚುನಾವಣೆಯ ಬಗ್ಗೆ ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಾರೆ.
ಮುಂದಿನ ಚುನಾವಣೆಯವರೆಗೂ ಈಗಿನ ಅರಸರಿಗೆ ಏನೂ ತೊಂದರೆಯಿಲ್ಲ ಎಂದು ಕೋಡಿಶ್ರೀಗಳು ಹೇಳುವ ಮೂಲಕ, ಇನ್ನುಳಿದ ಕೆಲವು ತಿಂಗಳ ಅವಧಿಯಲ್ಲಿ ಸಿದ್ದರಾಮಯ್ಯ ಕುರ್ಚಿ ಭದ್ರ ಎಂದು ಪರೋಕ್ಷವಾಗಿ ನುಡಿದಿದ್ದಾರೆ.
ಕೋವಿಂದ್ ಬಗ್ಗೆ 2016ರಲ್ಲೇ ಭವಿಷ್ಯ ನುಡಿದಿದ್ದ ನಿತೀಕ್ಷ್
ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು, ಕಾರ್ಯಾಂಗ ವ್ಯವಸ್ಥೆ ಹದೆಗೆಡುತ್ತದೆ ಎಂದು ಹೇಳಿದ್ದರು. ಅದೇ ರೀತಿ, ರಾಜ್ಯವನ್ನು ತೀವ್ರವಾಗಿ ಕಾವೇರಿ ಸಮಸ್ಯೆ ಕಾಡಿತ್ತು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶ್ರೀಗಳು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆ ಎಂದು ಹೇಳಿದ್ದಾರೆ.
ಈ ಹಿಂದೆ ತನ್ನ ಹಿಂದಿನ ಭವಿಷ್ಯವನ್ನು ಉಲ್ಲೇಖಿಸಿದ್ದ ಶ್ರೀಗಳು, ರಾಜ್ಯದ ದೊರೆ ಕಣ್ಣೀರಿಡಲಿದ್ದಾರೆಂದು ನುಡಿದಿದ್ದೆ, ಅದರಂತೇ ಮುಖ್ಯಮಂತ್ರಿಗಳು ಪುತ್ರನನ್ನು ಕಳೆದುಕೊಂಡು ಕಣ್ಣೀರು ಹಾಕುವಂತಾಯಿತು ಎಂದು ಕೋಡಿಶ್ರೀಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಕೋಡಿಶ್ರೀಗಳ ಭವಿಷ್ಯ ಪ್ರಕಾರ ಕುಮಾರಸ್ವಾಮಿ ಮುಂದಿನ ಸಿಎಂ?
ಕೋಡಿಶ್ರೀಗಳ ಭವಿಷ್ಯ
ತಾಳೇಗರಿ ಆಧಾರಿತ ಭವಿಷ್ಯ ನುಡಿಯುವ ಕೋಡಿಶ್ರೀಗಳು, "ಬಿತ್ತಿದ ಬೆಳಸು ಪರರು ಕೊಯ್ದಾರು" ಎಂದು ಶ್ರೀಗಳು ಹೇಳಿದ್ದಾರೆ. ಬಿತ್ತಿದ ಬೀಜ, ಬೆಳೆದು ಬಂದ ಪೈರು ಇದು ಮುಂದಿನ ಅಸೆಂಬ್ಲಿ ಚುನಾವಣೆಯ ಭವಿಷ್ಯ ಎಂದು ಶ್ರೀಗಳು ಹೇಳಿದ್ದಾರೆ.
ನಾಯಕರಿಗೆ ಪರಿಶ್ರಮದ ಲಾಭ ಸಿಗುವುದಿಲ್ಲ
ರಾಜ್ಯ ಮತ್ತು ರಾಷ್ಟ್ರದಲ್ಲಿ ಸದ್ಯ ಅಸ್ಥಿರತೆಯ ಪರಿಸ್ಥಿತಿಯಿಲ್ಲ. ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಜಯಕ್ಕಾಗಿ ಎಷ್ಟು ದುಡಿದರೂ, ಅದರ ಲಾಭವನ್ನು ಅವರು ಪಡೆದುಕೊಳ್ಳುವ ಸಾಧ್ಯತೆ ಕಮ್ಮಿ - ಕೋಡಿಶ್ರೀ.
ಬೇಕಾದ ಜಾಗದಲ್ಲಿ ಮಳೆ ಬೀಳುವುದಿಲ್ಲ
ಬೇಕಾದ ಜಾಗದಲ್ಲಿ ಮಳೆ ಬರದೇ, ಮಳೆಯ ತೀವ್ರ ಅವಶ್ಯಕತೆಯಿಲ್ಲದ ಪ್ರದೇಶದಲ್ಲಿ ಮಳೆಬರಲಿದೆ. ಹೀಗಾಗಿ, ಅನ್ನ, ನೀರಿಗಾಗಿ ಪರಿತಪಿಸುವ ದಿನಗಳು ಬರಬಹುದು ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಗೆ ಶಾಕ್ ಆಗುವ ಸುದ್ದಿ
ಮುಂದಿನ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆ ಎನ್ನುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಗೆ ಶಾಕ್ ಆಗುವ ಸುದ್ದಿಯನ್ನು ಕೋಡಿಶ್ರೀಗಳು ನುಡಿದಿದ್ದಾರೆ. ಈ ಪಕ್ಷಗಳ ಯಾವ ಕಾರ್ಯತಂತ್ರವೂ ಫಲಿಸುವ ಸಾಧ್ಯತೆ ಇಲ್ಲ - ಕೋಡಿಶ್ರೀ.
ಕುಮಾರಸ್ವಾಮಿ ಮುಂದಿನ ಸಿಎಂ ಎನ್ನುವ ಪ್ರಶ್ನೆ
ಪ್ರಮುಖ ಪಕ್ಷದ ರಾಜಕೀಯ ನಾಯಕ ಸಿಎಂ ಆಗುವುದಿಲ್ಲ, ಅನಿರೀಕ್ಷಿತ ವ್ಯಕ್ತಿ ರಾಜ್ಯದ ಅರಸನಾಗಲಿದ್ದಾನೆಂದು ಕೋಡಿಶ್ರೀಗಳು ಹೇಳಿದ್ದಾರೆ. ಪ್ರಮುಖ ಪಕ್ಷದ ರಾಜಕೀಯ ನಾಯಕ ಅಂದರೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಎಂದು ಅರ್ಥೈಸಿಕೊಂಡರೆ, ಅನಿರೀಕ್ಷಿತ ವ್ಯಕ್ತಿ ಸಿಎಂ ಆಗುತ್ತಾರೆಂದರೆ ಅದು ಎಚ್ ಡಿ ಕುಮಾರಸ್ವಾಮಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.