ಪ್ರಾಣಿಗಳ ಮೂತ್ರ ವಾಸನೆ ಬಂದೆಡೆ ಆನೆಗಳು ಸುಳಿಯುವುದಿಲ್ಲವಂತೆ!
ಮಡಿಕೇರಿ, ನವೆಂಬರ್, 25 : ಅರಣ್ಯದಿಂದ ನಾಡಿನತ್ತ ಬರುವ ಕಾಡಾನೆಗಳನ್ನು ಪಟಾಕಿ ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಓಡಿಸುವುದನ್ನು ನೋಡಿದ್ದೀರಾ. ಆದರೆ ಕೊಡಗಿನ ರೈತರೊಬ್ಬರು ಆನೆಗಳ ಉಪಟಳ ತಡೆಗಟ್ಟಲು 'ಹುಲಿ ಮೂತ್ರ'ದ ಮೂಲಕ ಹೊಸದೊಂದು ಪ್ರಯೋಗ ಕೈಗೊಂಡಿದ್ದಾರೆ.
ಕೊಡಗಿನ ಚೆಟ್ಟಳ್ಳಿಯ ರೈತ ಕೊಂಗೇಟಿರ ಆಶಿಕ್ ಹುಲಿ ಮೂತ್ರ ಉಪಾಯವನ್ನು ಕಂಡುಕೊಂಡಿರುವ ರೈತ. ಇವರು ಮೈಸೂರು ಮೃಗಾಲಯದ ನಿರ್ದೇಶಕರನ್ನು ಸಂಪರ್ಕಿಸಿ ಅವರ ಸಹಕಾರದ ಮೇರೆಗೆ ಈ ವಿಭಿನ್ನ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.[ಆನೆ ಹಿಂಡು ದಾಳಿ ಮಾಡಿದಾಗ ಆತ ಏನು ಮಾಡಿದ?]
ಆನೆಗಳ ಹಾವಳಿ ತಡೆಗಟ್ಟಲು ಆಶಿಕ್ ಏನು ಮಾಡಿದರು?
ಇತ್ತೀಚೆಗೆ ಆನೆಗಳು ಕಾಫಿ ತೋಟಗಳಿಗೆ, ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿದ್ದು, ಇದರಿಂದ ಬೆಳೆಗಳು ಸಾಕಷ್ಟು ಹಾಳಾಗುತ್ತಿವೆ. ಬೆಳೆದ ಬೆಳೆಯನ್ನು ಆನೆಗಳ ಹಾವಳಿಯಿಂದ ಕಾಪಾಡಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ.
ಆಗ ಅವರಿಗೆ ಹೊಳೆದದ್ದೇ ಹುಲಿ ಮೂತ್ರ ಪ್ರಯೋಗ. ಆನೆಗಳು ಕೆಲವೊಂದು ಪ್ರಾಣಿಗಳ ಮೂತ್ರದ ವಾಸನೆ ಬಂದ ಕಡೆ ಸುಳಿಯುವುದಿಲ್ಲ ಎಂದು ತಿಳಿದುಕೊಂಡ ಆಶಿಕ್ ಮೈಸೂರು ಮೃಗಾಲಯದ ನಿರ್ದೇಶಕರನ್ನು ಸಂಪರ್ಕಿಸಿ 'ಕೊಡಗಿನಲ್ಲಿ ಆನೆಗಳ ಹಾವಳಿ ನಿರಂತರವಾಗಿದ್ದು, ಅದನ್ನು ನಿಯಂತ್ರಿಸಲು ನಾನು ಒಂದು ಹೊಸ ಪ್ರಯೋಗಕ್ಕೆ ಕೈಹಾಕಿದ್ದೇನೆ. ಅದಕ್ಕೆ ತಾವು ಸಹಕರಿಸಿ ಹುಲಿಯ ಮೂತ್ರವನ್ನು ನೀಡಬೇಕೆಂದು ಈ ಮೇಲ್ ಮೂಲಕ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಹುಲಿಯ ಮೂತ್ರವನ್ನು ಅವರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]
ಹುಲಿಮೂತ್ರ ಪ್ರಯೋಗ ಹೇಗೆ ಮಾಡುತ್ತಿದ್ದಾರೆ?
ಕಳೆದ ಕೆಲ ದಿನಗಳಿಂದ ಭತ್ತದ ಗದ್ದೆಗಳಲ್ಲಿ ಹುಲಿ ಮೂತ್ರದ ಪ್ರಯೋಗ ಮಾಡಿರುವ ಆಶಿಕ್ ಒಂದು ಬದಿಯಲ್ಲಿ ಸಣ್ಣ ಕಂಬಗಳಿಗೆ ಗೋಣಿ ಚೀಲದ ತುಂಡನ್ನು ತೂಗು ಹಾಕಿ ಅದಕ್ಕೆ ಹುಲಿಯ ಮೂತ್ರವನ್ನು ಹಾಕಿದ್ದಾರೆ. ಮತ್ತೆ ಕೆಲವೆಡೆ ಗೋಣಿಚೀಲದ ಮೇಲೆ ಹುಲಿ ಮೂತ್ರ ತುಂಬಿದ ಪ್ಲಾಸ್ಟಿಕ್ ಬಾಟಲ್ ಗಳಿಟ್ಟು, ಅದಕ್ಕೆ ರಂಧ್ರ ಮಾಡಿ ಮೂತ್ರವು ಸೋರಿ ಗೋಣಿಚೀಲ ಒದ್ದೆಯಾಗುವಂತೆ ಮಾಡಿದ್ದಾರೆ.[ರೈತರ ಸಮಸ್ಯೆ ನಿವಾರಣೆಗೊಂದು 'ಯೂ ಫಾರ್ಮ್']
ಇನ್ನೊಂದೆಡೆ ಪ್ಲಾಸ್ಟಿಕ್ ಬಾಟಲ್ ನಲ್ಲಿ ಹುಲಿಯ ಮೂತ್ರವನ್ನು ತುಂಬಿ ಬಾಟಲನ್ನು ಕತ್ತರಿಸಿ ಅದರ ವಾಸನೆ ಸುತ್ತಲೂ ಹರಡುವಂತೆ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆಶಿಕ್ ಅವರು ತುತ್ತೂರಿ ಊದುವ ಮೂಲಕವೂ ಆನೆಗಳನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಆನೆಗಳ ಹಾವಳಿ ತಪ್ಪಿಸುವುದು ಇವರ ಪ್ರಮುಖ ಉದ್ದೇಶವಾಗಿದೆ.