ಜಾರ್ಜ್ ರಾಜೀನಾಮೆ, ಕನ್ನಡ ಪತ್ರಿಕೆಗಳ ಹಣೆಬರಹಗಳು
ಬೆಂಗಳೂರು, ಜುಲೈ 19 : ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಮೂಲದ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೂಲತಃ ಕೊಡಗಿನವರಾದ ಜಾರ್ಜ್ ಅವರಿಗೆ ತವರು ಜಿಲ್ಲೆಯ ಪ್ರಕರಣವೇ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದೆ.
ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ವಿರುದ್ಧ ಎಫ್ಐಆರ್ ದಾಖಲು ಮಾಡಿ ಎಂದು ಮಡಿಕೇರಿ ಜೆಎಂಎಫ್ಸಿ ಕೋರ್ಟ್ ಸೋಮವಾರ ಸಂಜೆ ಆದೇಶ ನೀಡಿತು. ಕೋರ್ಟ್ ಆದೇಶ ಹೊರಬಿದ್ದ ಬಳಿಕ ಕೆ.ಜೆ.ಜಾರ್ಜ್ ಅವರು ಸಚಿವ ಸ್ಥಾನಕ್ಕೆ (ಬೆಂಗಳೂರು ನಗರಾಭಿವೃದ್ಧಿ) ರಾಜೀನಾಮೆ ನೀಡಿದರು. [ಜಾರ್ಜ್ ಕಾಡಿದ 5 ಪ್ರಮುಖ ವಿವಾದಗಳು]
ಜಾರ್ಜ್ ರಾಜೀನಾಮೆಯಿಂದಾಗಿ ಜುಲೈ 8ರಿಂದ ನಡೆಯುತ್ತಿದ್ದ ಪ್ರತಿಪಕ್ಷಗಳು, ವಿವಿಧ ಸಂಘಟನೆಗಳ ಹೋರಾಟಕ್ಕೆ ಪ್ರಾಥಮಿಕ ಜಯ ಸಿಕ್ಕಂತಾಗಿದೆ. ಇನ್ನು ಮುಂದೆ ಏನಿದ್ದರೂ ಕಾನೂನು ಹೋರಾಟ. ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಿಐಡಿ ತನಿಖೆ ಮುಂದುವರೆದಿದ್ದು, 15 ದಿನಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ. ['ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ' : ಕೆಜೆ ಜಾರ್ಜ್]
ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೆ.ಜೆ.ಜಾರ್ಜ್ ಮತ್ತು ಇತರ ಇಬ್ಬರು ಐಪಿಎಸ್ ಅಧಿಕಾರಿಗಳ ಹೆಸರು ಹೇಳಿದ್ದರು. ಅಂದಿನಿಂದಲೂ ಕನ್ನಡ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಗಳು ಈ ಕುರಿತು ಹಲವು ಸುದ್ದಿಗಳನ್ನು ಪ್ರಕಟಿಸಿದ್ದವು. ಜಾರ್ಜ್ ರಾಜೀನಾಮೆ ಬಳಿಕ ಕನ್ನಡ ಪತ್ರಿಕೆಗಳ ಶೀರ್ಷಿಕೆ ಹೇಗಿವೆ ಚಿತ್ರಗಳಲ್ಲಿ ನೋಡಿ.........[ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline]
ಚಾರ್ಜ್ ಕಳೆದುಕೊಂಡ ಜಾರ್ಜ್
ಕೆ.ಜೆ.ಜಾರ್ಜ್ ಸಚಿವ ಸ್ಥಾನ ಕಳೆದುಕೊಂಡಿದ್ದನ್ನು 'ಚಾರ್ಜ್ ಕಳೆದುಕೊಂಡ ಜಾರ್ಜ್' ಎಂದು ವಿಜಯವಾಣಿ ಹೇಳಿದೆ. ಸದನಲ್ಲಿ ಗಂಭೀರವಾಗಿ ಆಲೋಚನೆ ಮಾಡುತ್ತಿರುವ ಚಿತ್ರವನ್ನು ಮುಖಪುಟದಲ್ಲಿ ಹಾಕಿರುವ ವಿಜಯವಾಣಿ, ಮಡಿಕೇರಿ ಕೋರ್ಟ್ ಆದೇಶದಿಂದ ರಾಜೀನಾಮೆಯ ಸುದ್ದಿಯನ್ನು ವಿವರವಾಗಿ ಪ್ರಕಟಿಸಿದೆ
ಜಾರ್ಜ್ ಡಿಸ್ ಚಾರ್ಜ್
ಕೆ.ಜೆ.ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿಯನ್ನು ವಿಜಯ ಕರ್ನಾಟಕ 'ಜಾರ್ಜ್ ಡಿಸ್ ಚಾರ್ಜ್' ಎಂಬ ಶೀರ್ಷಿಕೆಯಡಿ ಪ್ರಕಟಿಸಿದೆ. ಜಾರ್ಜ್ ಸದನದಲ್ಲಿ ಏನೋ ಬರೆಯತ್ತಿರುವ ಫೋಟೋ ಮುಖಪುಟ ಅಲಂಕರಿಸಿದೆ. ಎಂ.ಕೆ.ಗಣಪತಿ ಪತ್ನಿ ಮತ್ತು ಪುತ್ರರ ಹೇಳಿಕೆಯನ್ನು ಮುಖಪುಟದಲ್ಲಿ ದಾಖಲಿಸಿದೆ.
ಕೊನೆಗೂ ಡಿಸ್ ಜಾರ್ಜ್!
ಉದಯವಾಣಿ 'ಕೊನೆಗೂ ಡಿಸ್ ಜಾರ್ಜ್' ಎಂಬ ಶೀರ್ಷಿಕೆಯಡಿ ಜಾರ್ಜ್ ರಾಜೀನಾಮೆ ಸುದ್ದಿಯನ್ನು ಪ್ರಕಟಿಸಿದೆ. ರಾಜೀನಾಮೆ ನೀಡಿದ ಬಳಿಕ ಜಾರ್ಜ್ ನೀಡಿದ ಹೇಳಿಕೆಯನ್ನು ಮುಖಪುಟದಲ್ಲಿ ಹಾಕಿದೆ. ಗಲ್ಲದ ಮೇಲೆ ಕೈಯಿಟ್ಟು ಗಂಭೀರ ಆಲೋಚನೆಯಲ್ಲಿ ತೊಡಗಿರುವ ಚಿತ್ರ ಗಮನ ಸೆಳೆಯುತ್ತಿದೆ.
ಅಪರಾಧಿ ನಾನಲ್ಲ, ಅಪವಾಧ ಇದೆಯಲ್ಲ!
'ನಾನು ಅಪರಾಧಿ ಅಲ್ಲ' ಎಂದು ಕೆಜೆ ಜಾರ್ಜ್ ಅವರು ವಿಧಾನಸೌಧದಲ್ಲಿ ಸೋಮವಾರ ಹೇಳಿದ ಮಾತನ್ನು ಕನ್ನಡ ಪ್ರಭ ಶೀರ್ಷಿಕೆಯಾಗಿ ಕೊಟ್ಟಿದೆ. 'ಅಪರಾಧಿ ನಾನಲ್ಲ, ಅಪವಾಧ ಇದೆಯಲ್ಲ!' ಎಂಬ ಹೆಡ್ಲೈನ್ ಅಡಿ ಜಾರ್ಜ್ ರಾಜೀನಾಮೆ ಸುದ್ದಿ ಅಚ್ಚಾಗಿದೆ. ಸದನದಲ್ಲಿ ಜಾರ್ಜ್ ಕೈ ಮುಗಿಯುತ್ತಿರುವ ಚಿತ್ರ ಮುಖಪುಟದ ಅಂದ ಹೆಚ್ಚಿಸಿದೆ.
ಕೊನೆಗೂ ಜಾರ್ಜ್ ತಲೆದಂಡ
ಸದನದಲ್ಲಿ ಜಾರ್ಜ್ ಅವರ ವಿವಿಧ ಭಂಗಿಗಳ ಮೂರು ಚಿತ್ರಗಳನ್ನು ಮುಖಪುಟದಲ್ಲಿ ಹಾಕಿರುವ ಪ್ರಜಾವಾಣಿ 'ಕೊನೆಗೂ ಜಾರ್ಜ್ ತಲೆದಂಡ' ಎಂಬ ಶೀರ್ಷಿಕೆಯಡಿ ರಾಜೀನಾಮೆ ಸುದ್ದಿಯನ್ನು ಪ್ರಕಟಿಸಿದೆ.
ಸಚಿವ ಜಾರ್ಜ್ ತಲೆದಂಡ
ಹೊಸದಿಗಂತ ಪತ್ರಿಕೆ 'ಸಚಿವ ಜಾರ್ಜ್ ತಲೆದಂಡ' ಎಂಬ ಹೆಡ್ಲೈನ್ ಅಡಿ ರಾಜೀನಾಮೆ ಸುದ್ದಿಯನ್ನು ಪ್ರಕಟಿಸಿದೆ. ಜಾರ್ಜ್, ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಅವರ ಫೋಟೊಗಳು ಮುಖಪುಟದಲ್ಲಿವೆ.
ಜಾರ್ಜರಿತ!
'ಜಾರ್ಜರಿತ!' ಎಂಬ ಶೀರ್ಷಿಕೆ ಕೊಟ್ಟಿರುವ ವಿಶ್ವವಾಣಿ ಅದರಡಿ ಸಚಿವ ಜಾರ್ಜ್ ರಾಜೀನಾಮೆ ಸುದ್ದಿಯನ್ನು ಪ್ರಕಟಿಸಿದೆ. ಜಾರ್ಜ್ ಸದನದಲ್ಲಿ ಖುರ್ಚಿ ಬಿಟ್ಟೇಳುತ್ತಿರುವ ಚಿತ್ರ ಗಮನ ಸೆಳೆಯುತ್ತಿದೆ.
ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ
'ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ' ಎಂಬ ಶೀರ್ಷಿಕೆಯಡಿ ವಾರ್ತಾ ಭಾರತಿ ರಾಜೀನಾಮೆ ಸುದ್ದಿಯನ್ನು ಪ್ರಕಟಿಸಿದೆ.
'ಜಾರ್ಜ್ ತಲೆದಂಡ'
ಸಂಯುಕ್ತ ಕರ್ನಾಟಕ 'ಜಾರ್ಜ್ ತಲೆದಂಡ' ಎಂಬ ಶೀರ್ಷಿಕೆಯಡಿ ಜಾರ್ಜ್ ರಾಜೀನಾಮೆ ಸುದ್ದಿಯನ್ನು ಪ್ರಕಟಿಸಿದೆ. ಮುಖಪುಟದಲ್ಲಿ ಬಿಜೆಪಿ ನಾಯಕರ ರಾಜಭನವ ಚಲೋ ಚಿತ್ರವಿದೆ.