ಶಬರಿಮಲೆ ಯಾತ್ರೆ ಈ ಬಾರಿ ಭಾರೀ ದುಬಾರಿ: ಸ್ವಾಮಿ ಶರಣಂ!
ಕೇರಳದ ಸರಕಾರದ ಹೊಸ ಸಾರಿಗೆ ನೀತಿಯಿಂದಾಗಿ ಈ ಬಾರಿಯ ಶಬರಿಮಲೆ ಯಾತ್ರೆ ಈ ಬಾರಿ ದುಬಾರಿಯಾಗಲಿದೆ.
ಬೆಂಗಳೂರು, ಡಿ 17: ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತಾದಿಗಳಿಗೆ ಕಹಿಸುದ್ದಿಯೊಂದು ಕಾದಿದೆ. ಕೇರಳದ ಸರಕಾರದ ಹೊಸ ಸಾರಿಗೆ ನೀತಿಯಿಂದಾಗಿ, ಶಬರಿಮಲೆ ಪ್ರವಾಸ ಈ ಬಾರಿ ದುಬಾರಿಯಾಗಲಿದೆ.
ಕೇರಳದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಎಡಸರಕಾರ, ಕೇರಳ ಪ್ರವೇಶಿಸುವ ಹೊರ ರಾಜ್ಯದ ವಾಹನಗಳಿಗೆ ಸಿಕ್ಕಾಪಟ್ಟೆ ತೆರಿಗೆ ಜಡಾಯಿಸಲು ನಿರ್ಧರಿಸಿರುವುದರಿಂದ ಪರ್ಮಿಟ್ ಬೆಲೆಯಲ್ಲಿ ಹೆಚ್ಚಳವಾಗಿದೆ. (ಶಬರಿಮಲೆ ಸ್ವಾಮಿಗೆ ಇ-ಹುಂಡಿ ಮೂಲಕ ಕಾಣಿಕೆ ಹಾಕಿ)
ಶಬರಿಮಲೆ ಯಾತ್ರೆಗೆ ತೆರಳುವ ಭಕ್ತಾದಿಗಳಲ್ಲಿ ಕರ್ನಾಟಕ ರಾಜ್ಯದ್ದೇ ಸಿಂಹಪಾಲು, ಹಾಗಾಗಿ ರಾಜ್ಯದ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಕೇರಳ ಸರಕಾರವನ್ನು ಈಗಾಗಲೇ ಕೋರಲಾಗಿದೆ ಎಂದು ರಾಜ್ಯ ಸಾರಿಗೆ ಇಲಾಖೆಯ ಆಯುಕ್ತ ಎಂ ಕೆ ಅಯ್ಯಪ್ಪ ತಿಳಿಸಿದ್ದಾರೆ.
ದಸರಾ ವೇಳೆ ಕೇರಳ ನೊಂದಣಿಯ ವಾಹನಗಳಿಗೆ ರಾಜ್ಯ ಸರಕಾರ ವಿನಾಯಿತಿ ನೀಡುತ್ತಿರುವುದರಿಂದ, ಶಬರಿಮಲೆಯಲ್ಲಿ ನಡೆಯುವ 'ಮಂಡಲ ಪೂಜೆ' ಮತ್ತು 'ಮಕರ ಜ್ಯೋತಿ'ಯ ವೇಳೆ ಕರ್ನಾಟಕದ ವಾಹನಗಳಿಗೂ ವಿನಾಯಿತಿ ನೀಡಬೇಕೆಂದು ಕೇರಳ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ತ್ರೈಮಾಸಿಕವಾಗಿ ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ಕಾರುಗಳು 17ರಿಂದ 26 ಸಾವಿರ ಮತ್ತು ಟಿಟಿ, ಸ್ವರಾಜ್ ಮಜ್ಡಾ ಮುಂತಾದ ವಾಹನಗಳು 40 ರಿಂದ 45 ಸಾವಿರ ರೂಪಾಯಿ ಪಾವತಿಸಬೇಕಾಗಿದೆ. ಇದರಿಂದ ಪ್ರಯಾಣ ದರದಲ್ಲಿ ಭಾರೀ ಹೆಚ್ಚಳವಾಗಲಿದೆ.
ರಾಜ್ಯ ಸರಕಾರ ಸಲ್ಲಿಸಿರುವ ಮನವಿಗೆ ಕೇರಳ ಸರಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬರದಿರುವ ಹಿನ್ನಲೆಯಲ್ಲಿ ಈ ಬಾರಿಯ ಮಂಡಲ ಪೂಜೆ ಮತ್ತು ಜ್ಯೋತಿಗೆ ತೆರಳುವ ಅಯ್ಯಪ್ಪ ಮಾಲಾಧಾರಿಗಳಿಗೆ ತೆರಿಗೆಯ ಬಿಸಿ ಕಾಡುವ ಸಾಧ್ಯತೆ ಹೆಚ್ಚು.