ದಾಂಡೇಲಿ ಕವಳ ಗುಹೆ ಕಾರ್ಪೋರೇಟ್ ಸಂಸ್ಥೆಗೆ ದತ್ತು
ಬೆಂಗಳೂರು, ಆಗಸ್ಟ್. 07: ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿರುವ ರಾಜ್ಯ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳ ಸಹಭಾಗಿತ್ವವನ್ನು ಪಡೆದುಕೊಳ್ಳುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಕವಳ ಗುಹೆಗಳ ಪ್ರದೇಶ ನಿರ್ವಹಣೆ ಜವಾಬ್ದಾರಿಯನ್ನು ಬೆಂಗಳೂರಿನ ಮೆ. ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್, ಲಿಮಿಟೆಡ್ ಕಂಪನಿಗೆ 5 ವರ್ಷಗಳ ಅವಧಿಗೆ ದತ್ತು ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.[ರಾಜ್ಯದ ಪ್ರವಾಸಿ ತಾಣಗಳಿಗೆ ಕಾರ್ಪೊರೇಟ್ ಶ್ರೀರಕ್ಷೆ]
ಈ ದತ್ತು ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಕವಳ ಗುಹೆ ಪ್ರವಾಸಿ ತಾಣಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ, ಬದಲಾಗಿ ಸದರಿ ಪ್ರವಾಸಿ ತಾಣದಲ್ಲಿ ಪ್ರವಾಸಿಗರಿಗೆ ಅವಶ್ಯಕವಾಗಿರುವ ಸೌಲಭ್ಯಗಳನ್ನು ಒದಗಿಸುವುದು ಮಾತ್ರ ಈ ಯೋಜನೆಯ ಉದ್ದೇಶವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.[ದಾಂಡೇಲಿ ಕುರಿತು ಸಮಗ್ರ ಮಾಹಿತಿ]
ಕರಾರು ಏನು ಹೇಳುತ್ತದೆ?
* ಕಾರ್ಪೊರೇಟ್ ಸಂಸ್ಥೆಗಳು ರಾಜ್ಯದ ಪ್ರವಾಸಿ ತಾಣಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ನಿರ್ವಹಿಸಲಿವೆ.
* ಕರಾರಿನ ಅನ್ವಯ ದತ್ತು ಪಡೆದ ಸಂಸ್ಥೆಯು ದತ್ತು ಪಡೆದ ಪ್ರದೇಶದಲ್ಲಿ ಸಫಾರಿ ಸ್ವಾಗತ ಕಮಾನು, ಮಾರ್ಗಸೂಚಿ ಫಲಕಗಳು, ನಾಲ್ಕು ಪ್ರವೇಶ ದ್ವಾರಗಳ ರಸ್ತೆಗಳಲ್ಲಿ ಕಮಾನು ನಿರ್ಮಾಣ, ಅಡಿಟೋರಿಯಂ ಅಭಿವೃದ್ಧಿ ಮಾಡಬೇಕು
* ವಿದ್ಯಾರ್ಥಿಗಳಿಗೆ ಅರಿವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಹಾಗೂ ನಿರ್ವಹಿಸುವುದಕ್ಕೂ ಒತ್ತು ನೀಡಬೇಕು
* ದತ್ತು ಪಡೆದ ಸಂಸ್ಥೆಯು ಆ ಪ್ರದೇಶದಲ್ಲಿ ಯಾವುದೇ ಹೆಚ್ಚುವರಿ ಕಟ್ಟಡಗಳನ್ನು ಅಥವಾ ಗುಹೆಗಳಿಗೆ ಧಕ್ಕೆ ತರುವಂತಹ ಯಾವುದೇ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ.
* ಯಾವುದೇ ಚಟುವಟಿಕೆಗಳನ್ನು ನಡೆಸಬೇಕಾದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು.