ಎರಡು ಕಂತಿನಲ್ಲಿ, 2 ಭಾಗವಾಗಿ ಪಠ್ಯಪುಸ್ತಕ ವಿತರಿಸಲು ಸರಕಾರದ ನಿರ್ಧಾರ
ಪಠ್ಯಪುಸ್ತಕ ಮುದ್ರಣಕ್ಕೆ ತಡವಾಗಬಾರದು ಎಂಬ ಕಾರಣಕ್ಕೆ ಕರ್ನಾಟಕ ಸರಕಾರ ಎರಡು ಕಂತುಗಳಲ್ಲಿ, ಎರಡು ಭಾಗಗಳಾಗಿ ವಿತರಿಸಲು ಮುಂದಾಗಿದೆ. ಹೀಗಂದರೆ ಏನು, ಹೀಗೆ ಮಾಡುವುದರಿಂದ ಆಗುವ ಪ್ರಯೋಜನ ಏನು ಎಂಬ ಮಾಹಿತಿ ಇಲ್ಲಿದೆ
ಬೆಂಗಳೂರು, ಏಪ್ರಿಲ್ 14: ರಾಜ್ಯ ಸರಕಾರವು ಪಠ್ಯಪುಸ್ತಕ ವಿತರಣೆ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಹೊಸ ಆಲೋಚನೆಯೊಂದನ್ನು ಮಾಡಿದೆ. ಒಂದರಿಂದ ಹತ್ತನೇ ತರಗತಿ ಪಠ್ಯಪುಸ್ತಕವನ್ನು ಎರಡು ಕಂತುಗಳಲ್ಲಿ ವಿತರಿಸುವುದಕ್ಕೆ ಸಿದ್ಧತೆ ನಡೆಸಿದೆ. ಆ ಪ್ರಕಾರ 2017-18ನೇ ಸಾಲಿಗೆ ಎಲ್ಲ ವಿಷಯಗಳ ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಿ, ವಿತರಿಸಲು ಚಿಂತಿಸಿದೆ.
"ಆರು ಕೋಟಿ ಪಠ್ಯಪುಸ್ತಕ ಮುದ್ರಣವಾಗಬೇಕು. ಅದಕ್ಕಾಗಿ ಬೇಕಾದ ಕಚ್ಚಾ ವಸ್ತುಗಳಿಗಾಗಿ ಕಾದೆವು. ಆನಂತರ ಆದ್ದರಿಂದ ಎರಡು ಭಾಗಗಳಾಗಿ ಪಠ್ಯಪುಸ್ತಕವನ್ನು ಮುದ್ರಿಸಲು ನಿರ್ಧಾರ ಮಾಡಿದೆವು" ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.[SSLC ಪರೀಕ್ಷೆ ಮುಕ್ತಾಯ, ಏ 20ರಿಂದ ಮೌಲ್ಯಮಾಪನ ಶುರು]
ಮೊದಲ ಬ್ಯಾಚ್ ನ ಪಠ್ಯಪುಸ್ತಕದಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಕಲಿಸಬೇಕಾದ ವಿಷಯಗಳನ್ನು ಹಾಗೂ ಎರಡನೇ ಭಾಗದಲ್ಲಿ ನವೆಂಬರ್ ನಿಂದ ಮಾರ್ಚ್ ನವರೆಗೆ ಕಲಿಸುವ ವಿಷಯಗಳು ಒಳಗೊಂಡಿರುತ್ತವೆ. "ಹೀಗೆ ಮಾಡುವುದರಿಂದ ಮಕ್ಕಳು ಹೊರುವ ಎರಡರಿಂದ ಮೂರು ಕೆ.ಜಿ. ಭಾರವನ್ನೂ ಕಡಿಮೆ ಮಾಡಿದಂತಾಗುತ್ತದೆ. ಜೂನ್ ಕೊನೆಗೆ ಎರಡನೇ ಬ್ಯಾಚ್ ಪಠ್ಯಪುಸ್ತಕಕ್ಕೆ ಬೇಕಾದ ವಸ್ತುಗಳ ಖರೀದಿ ಮಾಡಲಾಗುತ್ತದೆ.
ಒಂದು ಪಠ್ಯಪುಸ್ತಕದ ಬೆಲೆ ಎಷ್ಟಾಗುತ್ತಿತ್ತೋ ಎರಡು ಕಂತಿನ ಪುಸ್ತಕಕ್ಕೆ ಸೇರಿ ಅಷ್ಟೇ ಬೆಲೆಯಾಗುತ್ತದೆ. ಪಠ್ಯಪುಸ್ತಕಗಳು ಸಾಧಾರಣವಾಗಿ ನೂರರಿಂದ ನೂರೈವತ್ತು ಪುಟ ಇರುತ್ತದೆ. ಗಣಿತ, ವಿಜ್ಞಾನವಾದರೆ ಕೆಲವು ಸಲ ಮೂನ್ನೂರು ಪುಟವೂ ಆಗುತ್ತದೆ. ಬೈಂಡಿಂಗ್ ನಿಂದ ತೂಕವು ಮತ್ತೂ ಹೆಚ್ಚಾಗುತ್ತದೆ.[SSLC ಪರೀಕ್ಷೆಗೆ ಇಂದು ಮಂಗಳ, ಕಾಲೇಜಿಗೆ ದಾರಿ ಯಾವುದಯ್ಯ]
ಇದರಿಂದ ಪುಸ್ತಕಗಳ ಸರಾಸರಿ ತೂಕ 250 ಗ್ರಾಮ್ ಆಗುತ್ತದೆ. ವಿದ್ಯಾರ್ಥಿಗಳು ಪ್ರತಿ ದಿನ ಏಳು ಕೆಜಿ ಭಾರ ಹೊರುವಂತಾಗುತ್ತದೆ ಎಂದು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಂದ್ರ ಕುಮಾರ್ ಹೇಳಿದ್ದಾರೆ.
ಹಿರಿಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಮುದ್ರಣಕ್ಕಾಗಿ ಮೀಸಲಿಟ್ಟಿರುವ 165 ಕೋಟಿ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.[ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು]
ಎಂಟು ಭಾಷೆಯಲ್ಲಿ 511 ಪಠ್ಯಪುಸ್ತಕಗಳನ್ನು ಮುದ್ರಣ ಮಾಡಬೇಕು. ಈ ಬಾರಿ ಆ ಸಂಖ್ಯೆ ಎರಡರಷ್ಟಾಗುತ್ತದೆ. ಇದರಿಂದ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಹೊರೆಯಾಗುತ್ತದೆ ಎಂದು ಮುದ್ರಕರು ಹೇಳಿದ್ದು, ಈ ಬಗ್ಗೆ ಮುದ್ರಕರ ಜತೆ ಮಾತನಾಡಿ ಎಲ್ಲ ಸರಿಪಡಿಸುತ್ತೇವೆ ಎಂದು ಸರಕಾರ ಜವಾಬ್ದಾರಿ ವಹಿಸಿಕೊಂಡಿದೆ.