ಬೀದರಿನಲ್ಲಿ ಕರ್ನಾಟಕ ಮುಕ್ತ ವಿವಿ ಶಾಶ್ವತವಾಗಿ ಮುಚ್ಚಲಿದೆಯೇ?
ಬೀದರ್, ಫೆಬ್ರವರಿ 8: ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಬೀದರ್ ಪ್ರಾದೇಶಿಕ ಕೇಂದ್ರದ ಬಾಗಿಲು ಇದೇ ಫೆಬ್ರವರಿ ಅಂತ್ಯಕ್ಕೆ ಶಾಶ್ವತವಾಗಿ ಬಂದ್ ಆಗಲಿದೆ.
ವಿಶ್ವವಿದ್ಯಾಲಯದ ಕುಲಸಚಿವರು ಬೀದರ್ ವಿವಿ ಕೇಂದ್ರವನ್ನು ರದ್ದುಗೊಳಿಸಿ ಆದೇಶವನ್ನು ಹೊರಸಿದ್ದಾರೆ. ರಾಜ್ಯದ 21 ಜಿಲ್ಲೆಗಳಲ್ಲಿ ಪ್ರಾದೇಶಿಕ ಕೇಂದ್ರ ಹೊಂದಿರುವ ಮುಕ್ತ ವಿವಿ ಆರ್ಥಿಕ ಮುಗ್ಗಟ್ಟಿನಿಂದಾಗಿ ನಾಲ್ಕು ಜಿಲ್ಲೆಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಪ್ರಾದೇಶಿಕ ಕೇಂದ್ರಗಳನ್ನು ಮಾತ್ರ ಮುಚ್ಚಲು ಆದೇಶ ಹೊರಡಿಸಿದೆ. ಫೆಬ್ರುವರಿ 28ರೊಳಗೆ ಬೀದರ್ ಕಚೇರಿಯಲ್ಲಿರುವ ಎಲ್ಲ ಸಾಮಗ್ರಿಗಳನ್ನು ಕಲಬುರ್ಗಿ ಕಚೇರಿಗೆ ಸ್ಥಳಾಂತರ ಮಾಡುವಂತೆ ಸೂಚಿಸಿದ್ದಾರೆ.[ಕೆಎಸ್ಒಯು ಕುಲಸಚಿವ ಪ್ರೊ. ಪಿ.ಎಸ್. ನಾಯಕ್ ಅಮಾನತು]
ಬೀದರ್ನಲ್ಲಿ ಪ್ರಾದೇಶಿಕ ಕೇಂದ್ರದಲ್ಲಿ ನಿರ್ದೇಶಕರು ಹಾಗೂ ಕಚೇರಿ ಅಧೀಕ್ಷಕರು ಮಾತ್ರ ಇದ್ದರು. ಕಳೆದ ವರ್ಷ ನಿರ್ದೇಶಕರನ್ನು ಉತ್ತರ ಕನ್ನಡ ಜಿಲ್ಲೆಗೆ ವರ್ಗ ಮಾಡಲಾಗಿದೆ. ಕಚೇರಿಯಲ್ಲಿ ಅಧೀಕ್ಷಕರು ಬಿಟ್ಟರೆ ಬೇರೆ ಸಿಬ್ಬಂದಿ ಇಲ್ಲ. ಹೀಗಾಗಿ ಒಂದು ಕಟ್ಟಡ ವಿಲ್ಲ ಮತ್ತೊಂದೆಡೆ ನಿರ್ದೇಶಕರ ವರ್ಗ ವಾಗಿರುವ ಕಾರಣ ವಿವಿ ಕೇಂದ್ರವನ್ನು ಮುಚ್ಚಲಾಗುತ್ತಿದೆ.
ಈ ಹಿಂದೆ. ಪ್ರಾದೇಶಿಕ ಕೇಂದ್ರಕ್ಕೆ ನಿವೇಶನ ಮಂಜೂರು ಮಾಡುವಂತೆ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಜಿಲ್ಲಾ ಆಡಳಿತಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಉಮಾಶ್ರೀ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೂ ಅನೇಕ ಬಾರಿ ಮನವಿ ಮಾಡಿದ್ದರು. ನಾಲ್ಕು ವರ್ಷ ಕಳೆದರೂ ಜಾಗ ಸಿಗದ ಕಾರಣ ಹಾಗೂ ಬಾಡಿಗೆ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಮುಕ್ತ ವಿವಿ ಈ ನಿರ್ಣಯವನ್ನು ಕೈಗೊಂಡಿದೆ.