ಸರಕಾರ ಇದುವರೆಗೆ ಸಿಬಿಐಗೆ ವಹಿಸಿದ್ದ ಕೇಸುಗಳು ಏನಾಯಿತು?
ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಕೇಂದ್ರ ತನಿಖಾ ದಳ (Central Bureau of Investigation) ಅಸ್ತಿತ್ವಕ್ಕೆ ಬಂದಿದ್ದು ಏಪ್ರಿಲ್ 1, 1963ರಂದು.
ಕೇಂದ್ರ ಮತ್ತು ರಾಜ್ಯ ಸರಕಾರ ಇದುವರೆಗೆ ಬೋಫೋರ್ಸ್ ಹಗರಣ, ಭೋಪಾಲ್ ಅನಿಲ ದುರಂತ, ಇಸ್ರೋ ಬೇಹುಗಾರಿಕೆ, ದಾವೂದ್ ಪ್ರಕರಣ, ಹವಾಲ ದಂಧೆ ಸೇರಿದಂತೆ ಹಲವಾರು ಕೇಸನ್ನು ಸಿಬಿಐಗೆ ವರ್ಗಾಯಿಸಿದ ಉದಾಹರಣೆಗಳಿವೆ.
ಭ್ರಷ್ಟಾಚಾರ, ವಂಚನೆ, ಹಣ ದುರುಪಯೋಗಕ್ಕೆ ಸಂಬಂಧ ಪಟ್ಟ ಕೇಸನ್ನು ಹೆಚ್ಚಾಗಿ ತನಿಖೆ ನಡೆಸುತ್ತಿದ್ದ ಸಿಬಿಐಗೆ ನಂತರದ ದಿನಗಳಲ್ಲಿ ಅಸಹಜ ಸಾವು/ಕೊಲೆ ಪ್ರಕರಣದ ವಿಲೇವಾರಿಯ ಜವಾಬ್ದಾರಿಯೂ ಹೆಗಲ ಮೇಲೆಬಿತ್ತು. (ಡಿಕೆ ರವಿ ಸಾವು:ತನಿಖೆ ಸಿಬಿಐಗೆ)
ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಮತ್ತು ಯುಪಿಎ ಸರಕಾರ ಕೇಂದ್ರದಲ್ಲಿ ಹೆಚ್ಚಾಗಿ ಅಧಿಕಾರ ನಡೆಸುತ್ತಿದ್ದ ವೇಳೆ ಸರಕಾರದ ಕೈಗೊಂಬೆಯಂತೆ ಸಿಬಿಐ ಕಾರ್ಯನಿರ್ವಹಿಸುತ್ತಿತ್ತು ಎನ್ನುವ ಆರೋಪವೂ ವಿರೋಧ ಪಕ್ಷದಿಂದ ಕೇಳಿಬರುತ್ತಿತ್ತು.
ಇದುವರೆಗೆ ರಾಜ್ಯದ ನಾಲ್ಕು ಅಸಹಜ ಸಾವು/ಕೊಲೆ ಪ್ರಕರಣ ಸಿಬಿಐಗೆ ವರ್ಗಾಯಿಸಲಾಗಿಸಲಾಗಿದೆ. ಆ ನಾಲ್ಕು ಕೇಸುಗಳು ಯಾವುವು, ಅದರ ತನಿಖೆ ಎಲ್ಲಿ ತನಕ ಬಂತು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. (ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್)
ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಕೊಲೆ ಕೇಸುಗಳು
ಪ್ರಿಯದರ್ಶಿನಿ ಮಟ್ಟೂ ಕೊಲೆ ಪ್ರಕರಣ, ನಿಥಾರಿ ಡಜನ್ ಮಕ್ಕಳ ಕೊಲೆಗಳು, ಸಿಸ್ಟರ್ ಅಭಯಾ ಕೊಲೆ ಪ್ರಕರಣ, ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣಗಳನ್ನು ಸಿಬಿಐ ಸುಪರ್ದಿಗೆ ವಹಿಸಲಾಗಿತ್ತು. (ಚಿತ್ರದಲ್ಲಿ ಸಿಸ್ಟರ್ ಅಭಯಾ)
ರಾಮಕೃಷ್ಣ ಹೆಗಡೆ ಕಾಲಾವಧಿಯಲ್ಲಿ
1987ರಲ್ಲಿ ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದ ವೇಳೆಯಲ್ಲಿ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕೇರಳ ಮೂಲದ ವಕೀಲ ಎಚ್ ಅಬ್ದುಲ್ ರಷೀದ್ ಪ್ರಕರಣವನ್ನು ಹೆಗಡೆ ಸಿಬಿಐಗೆ ವಹಿಸಿದ್ದರು. ಈ ಕೇಸಿನಲ್ಲಿ ಸಚಿವರಾಗಿದ್ದ ಆರ್ ಎಲ್ ಜಾಲಪ್ಪ ಸೇರಿದಂತೆ, ಬೆಂಗಳೂರು ಹೈಗ್ರೌಂಡ್ಸ್ ಠಾಣೆಯ ಹಲವು ಐಪಿಎಸ್ ಅಧಿಕಾರಿಗಳು ಶಾಮೀಲಾಗಿದ್ದರು ಎಂದು ಸಿಬಿಐ ವರದಿ ನೀಡಿತ್ತು. ನಂತರ ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆಯಿಂದ ಎಲ್ಲರನ್ನೂ ನಿರ್ದೋಷಿಗಳೆಂದು ತೀರ್ಪು ಪ್ರಕಟಿಸಿತ್ತು.(ಚಿತ್ರದಲ್ಲಿ ಆರ್ ಎಲ್ ಜಾಲಪ್ಪ)
ಭಟ್ಕಳ ಬಿಜೆಪಿ ಶಾಸಕ
ಅಲ್ಪಸಂಖ್ಯಾತ ಪ್ರಾಭಲ್ಯದ ಉತ್ತರಕನ್ನಡ ಜಿಲ್ಲೆ ಭಟ್ಕಳದ ಜನಪ್ರಿಯ ಬಿಜೆಪಿ ಶಾಸಕರಾಗಿದ್ದ ಡಾ. ಚಿತ್ತರಂಜನ್ ಅವರನ್ನು ಬರ್ಭರವಾಗಿ ಏಪ್ರಿಲ್ 10, 1996ರಲ್ಲಿ ದುಷ್ಕರ್ಮಿಗಳು ಅವರ ಮನೆಯಲ್ಲೇ ಹತ್ಯೆಗೈದಿದ್ದರು. ಆಗ ರಾಜ್ಯವನ್ನು ಆಳುತ್ತಿದ್ದ ದೇವೇಗೌಡ್ರು ಕೇಸನ್ನು ಸಿಬಿಐಗೆ ಹಸ್ತಾಂತರಿಸಿದ್ದರು. ಇದುವರೆಗೂ ಕೊಲೆಗಡುಕರ ಯಾವುದೇ ಮಾಹಿತಿ/ಸುಳಿವು ಲಭ್ಯವಾಗದೇ ಫೈಲ್ ಸಿಬಿಐ ಕೊಠಡಿಯಲ್ಲಿ ದೂಳು ಹಿಡಿದು ಕೂತಿದೆ. ಸಿಬಿಐ, ಕೇಸನ್ನು ಕ್ಲೋಸ್ ಮಾಡುವಂತೆ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ, ಕೋರ್ಟ್ ಸಿಬಿಐ ಅರ್ಜಿಯನ್ನು ತಿರಸ್ಕರಿಸಿ ಕೇಸಿಗೆ ಸಂಬಂಧಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕುವಂತೆ ಆದೇಶ ನೀಡಿತ್ತು.
ಧರ್ಮಸ್ಥಳದ ಸೌಜನ್ಯ
ಕರಾವಳಿ ವ್ಯಾಪ್ತಿಯಲ್ಲಿ ಮತ್ತು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ ದಕ್ಷಿಣ ಕನ್ನಡ ಜಿಲ್ಲೆ ಉಜಿರೆ ಎಸ್ಡಿಎಂ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ/ಕೊಲೆ ಪ್ರಕರಣದ ಕೇಸನ್ನು ಭಾರೀ ಒತ್ತಡದ ನಂತರ ಸಿಎಂ ಸಿದ್ದರಾಮಯ್ಯ ನವೆಂಬರ್ 2013ರಲ್ಲಿ ಸಿಬಿಐಗೆ ಸುಪರ್ದಿಗೆ ವಹಿಸಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ ಕುಟುಂಬದ ಸದಸ್ಯರೊಬ್ಬರು ಈ ಅತ್ಯಾಚಾರ/ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿತ್ತು. ಕೇಸನ್ನು ಸಿಬಿಐಗೆ ಹಸ್ತಾಂತರಿಸಿ ಹದಿನಾರು ತಿಂಗಳಾದರೂ ಸಿಬಿಐನಿಂದ ಈ ಕೇಸಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎನ್ನುವುದು ನಮ್ಮ ಮುಂದಿರುವ ಸತ್ಯ.
ಡಿ ಕೆ ರವಿ
ದಕ್ಷ IAS ಅಧಿಕಾರಿ, ಕೋಲಾರದ ಮಾಜಿ ಜಿಲ್ಲಾಧಿಕಾರಿ ಡಿ ಕೆ ರವಿ ಅಸಹಜ ಸಾವಿನ ಕೇಸನ್ನು ತೀವ್ರ ಒತ್ತಡದ ನಂತರ ಸಿದ್ದರಾಮಯ್ಯ ಸರಕಾರ ಸೋಮವಾರ (ಮಾ 23) ಸಿಬಿಐಗೆ ಹಸ್ತಾಂತರಿಸಿದೆ. ಸಿಬಿಐ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರುವ ಜನತೆ ಸತ್ಯ ಹೊರಬರಲಿ ಎನ್ನುವುದನ್ನೇ ಕಾಯುತ್ತಿದೆ. ಸತ್ಯಮೇವ ಜಯತೆ..