ಪ್ಲಾಸ್ಟಿಕ್ ನಿಷೇಧ ಅಧಿಕೃತ, ನಿಯಮ ಮುರಿದರೆ ಜೈಲೂಟ
ಬೆಂಗಳೂರು, ಮಾರ್ಚ್, 15: ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಮಾನ್ಯ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಅಧಿಕೃತ ಆದೇಶವನ್ನು ಹೊರಡಿಸಿದೆ. ರಾಜ್ಯ ಸರ್ಕಾರ ಈ ಅಧಿಸೂಚನೆಯಿಂದಾಗಿ ಇನ್ನು ಮುಂದೆ ಅಂಗಡಿ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು, ಮಾರಾಟಗಾರರು, ಹಾಗೂ ಸಗಟು ಮಾರಾಟಗಾರರು ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವಂತೆ ಇಲ್ಲ.
ನಿಯಮ ಉಲ್ಲಂಘನೆ ಕಂಡುಬಂದರೆ ಪರಿಸರ ಸಂರಕ್ಷಣೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದಾಗಿದೆ. 5 ಸಾವಿರದಿಂದ 1 ಒಂದು ಲಕ್ಷದವರೆಗೂ ದಂಡ ಮತ್ತು 3 ರಿಂದ 6 ತಿಂಗಳವರೆಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.[ಯಾಕಾಗಿ ಪ್ಲಾಸ್ಟಿಕ್ ನಿಷೇಧ]
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ ಇನ್ನು ಮುಂದೆ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಲೋಟ, ತಟ್ಟೆ, ಚಮಚ, ಊಟದ ಮೇಲಿನ ಪಾರ್ಸಲ್ ಕವರ್ ಗಳು, ಭಿತ್ತಿಪತ್ರ, ಮನೆ ಹಾಗೂ ಸಮಾರಂಭಗಳಲ್ಲಿ ಹಾಕಲಾಗುವ ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಧ್ವಜ ಹಾಗೂ ಥರ್ಮೋಕೋಲ್ ಮತ್ತು ಬಟ್ಟೆಗಳಿಗೆ ಉಪಯೋಗಿಸುವ ಗುಂಡಿಗಳು, ಪ್ಲಾಸ್ಟಿಕ್ ನಿಂದ ತಯಾರಾದಂತಹ ಮತ್ಯಾವುದೇ ವಸ್ತುಗಳನ್ನು ಬಳಸುವಂತಿಲ್ಲ.[ಪ್ಲಾಸ್ಟಿಕ್ ರಾಷ್ಟ್ರಧ್ವಜದ ಬಳಕೆ ನಿಷೇಧಿಸಿದ ಸರ್ಕಾರ]
ಸರ್ಕಾರ ಅಂತಿಮವಾಗಿ ಕೆಎಂಫ್ ಹಾಲಿನ ಕವರ್ ಗೆ ಮಾತ್ರ ವಿನಾಯಿತಿ ನೀಡಿದೆ. ನರ್ಸರಿಗಳಲ್ಲಿ ಬಳಕೆ ಮಾಡುವ ಪ್ಲಾಸ್ಟಿಕ್ ಚೀಲ ಮತ್ತು ಹಾಳೆಗಳು, ಪ್ಯಾಕಿಂಗ್ ಸಂದರ್ಭದಲ್ಲಿ ಸೀಲ್ ಮಾಡಲು ಉಪಯೋಗಿಸುವ ಪ್ಲಾಸ್ಟಿಕ್ ಬ್ಯಾಗ್ಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.
ಹಿಂದೆಯೂ ಸರ್ಕಾರ ಇಂಥ ಕೆಲ ನಿಯಮಗಳನ್ನು ಜಾರಿ ಮಾಡಿ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗದೇ ಜನರ ಕೈಯಿಂದ ಬೈಸಿಕೊಂಡಿದ್ದನ್ನು ಕಂಡಿದ್ದೇವೆ. ಈ ನಿಯಮ ಮಧ್ಯಮ ವರ್ಗದವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವುದರಲ್ಲಿ ಅನುಮಾನವಿಲ್ಲ.