ಎಸ್ಸೆಸ್ಸೆಲ್ಸಿ, ಪಿಯೂ ಫಲಿತಾಂಶ ದಿನಾಂಕ ದೇವರಿಗ್ಗೊತ್ತು
ಬೆಂಗಳೂರು, ಏ 27 : ಈ ಶೈಕ್ಷಣಿಕ ವರ್ಷದ (2014-15) ಕರ್ನಾಟಕ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಯಾವತ್ತು ಪ್ರಕಟವಾಗತ್ತೆ ಅಂತ ನಿಖರವಾಗಿ ಗೊತ್ತಿಲ್ಲ.
ದ್ವಿತೀಯ ಪಿಯುಸಿ ಫಲಿತಾಂಶ ಮೇ ಮೊದಲನೇ ವಾರದಲ್ಲಿ ಬರತ್ತೆ ಅಂತ ಪಿಯು ಮಂಡಳಿ ಈ ಮುಂಚೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿತ್ತೇನೋ ನಿಜ. ಆದರೆ ಇವತ್ತಿನ ಪರಿಸ್ಥಿತಿ ಗಮನಿಸಿದರೆ ಅದು ನಿಜವಾಗುವ ಹಾಗೆ ಕಾಣಿಸುತ್ತಿಲ್ಲ.
ಯಾಕಂದ್ರೆ, ಏಪ್ರಿಲ್ 29-30ರಂದು ನಡೆಯಬೇಕಿದ್ದ ಕರ್ನಾಟಕ ಸಿಇಟಿ ಪ್ರವೇಶ ಪರೀಕ್ಷೆ ದಿನಾಂಕಗಳನ್ನು ಮುಂದಕ್ಕೆ (ಮೇ 12-13) ಹಾಕಲಾಗಿರುವುದರಿಂದ, ಸಿಇಟಿ ಪರೀಕ್ಷೆಗಿಂತ ಮುಂಚೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಣೆ ಸರಿಯಾಗದು ಎಂಬುದು ಮಂಡಳಿಯ ಚಿಂತನೆ.
ಸಿಇಟಿ ಪರೀಕ್ಷೆ ದಿನಾಂಕ ಮುಂದೂಡಿಕೆಗೆ ಕಾರಣ, ಏಪ್ರಿಲ್ 30ರ ಗುರುವಾರ ಎಲ್ಲಾ ರಾಜ್ಯಗಳ ಸರಕಾರಿ ಬಸ್ ಮುಷ್ಕರ ನಡೆಯೋ ಸಾಧ್ಯತೆ ಇರೋದ್ರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎನ್ನುವುದು ಸಿಇಟಿ ಪರೀಕ್ಷೆ ಆಯೋಜಕರ ಮುಂದಾಲೋಚನೆ.
ಬಸ್ ಮುಷ್ಕರ ಯಾಕಂದರೆ, ಎನ್ ಡಿಎ ಸರಕಾರದ 'ರಸ್ತೆ ಸಾರಿಗೆ ಮತ್ತು ಸುರಕ್ಷತಾ ವಿಧೇಯಕ-2015' ವನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸುವುದಕ್ಕೋಸ್ಕರ, ಹಾಗಂತ ಸಿಐಟಿಯು ಗೌರವಾಧ್ಯಕ್ಷ ಎಸ್. ಪ್ರಸನ್ನಕುಮಾರ್ ಹೇಳಿದ್ದಾರೆ.
ಈ ವಿಧೇಯಕ ಬಂದರೆ ರಸ್ತೆ ಸುರಕ್ಷತಾ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುತ್ತದೆ. ಹೊಸ ನಿಯಮಗಳ ಬಿಸಿ ತಮಗೂ ಮುಟ್ಟುತ್ತದೆ ಅಂತ ಆಟೋ ಚಾಲಕರೂ ಇದೇ ಗುರುವಾರದ ಮುಷ್ಕರಕ್ಕೆ ತಮ್ಮ ಬೆಂಬಲವನ್ನೂ ಕೊಟ್ಟಿದ್ದಾರೆ. ಅಂದರೆ, 30ನೇ ತಾರೀಕು ಗುರುವಾರ ಕರ್ನಾಟಕದಲ್ಲಿ ಅಘೋಷಿತ ಬಂದ್ ಜಾರಿಯಲ್ಲಿರುತ್ತದೆ ಎಂದು ನೀವು ಭಾವಿಸಿಬೇಕು. ರಸ್ತೆ ಸುರಕ್ಷತೆ ದೇಶದ ಜನತೆಗೆ ಬೇಕು, ಆದರೆ ಬಸ್ಸು, ಆಟೋಗಳಿಗೆ ಬೇಡ ಅಂತಾಗುತ್ತೆ.
ಇನ್ನು ದಿನದರ್ಶಿಕೆ ಪ್ರಕಾರ, ಯೋಜಿತ ಮುಷ್ಕರದ ಮಾರನೇ ದಿನ ಶುಕ್ರವಾರ ಮೇ 1 ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ. ಕೆಲವರನ್ನು ಬಿಟ್ಟು ಉಳಿದವರಿಗೆಲ್ಲ ದೇಶವ್ಯಾಪಿ ರಜಾ. ಅದರ ಮಾರನೇ ದಿನ ಶನಿವಾರ, ಜತೆಗೆ ಎಂದಿನಂತೆ ಭಾನುವಾರ.
ಇನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಯಾವತ್ತೂ ಅಂತನೂ ಗೊತ್ತಿಲ್ಲ. ಯಾಕಂದ್ರೆ ಪಿಯೂಸಿ ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ಮುಂಚೆ ಎಸ್ಸೆಸ್ಸೆಲ್ಸಿ ರಿಸಲ್ಟ್ ರಿಲೀಜ್ ಮಾಡುವುದಿಲ್ಲ ಅಂತ ಕರ್ನಾಟಕ ಸೆಕೆಂಡರಿ ಎಜುಕೇಷನ್ ಬೋರ್ಡಿನ ಅಧಿಕಾರಿಗಳು ನಮ್ಮ ವೆಬ್ ಸೈಟ್ ವರದಿಗಾರರಿಗೆ ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎಂಟು ಲಕ್ಷ ವಿದ್ಯಾರ್ಥಿಗಳೂ ಹಾಗೂ ಪಿಯೂಸಿ ಎಕ್ಸಾಂ ಅನ್ನು ಆರು ಲಕ್ಷ ವಿದ್ಯಾರ್ಥಿಗಳೂ ಬರೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ಮತ್ತು ಅವರ ತಂದೆ, ತಾಯಿ, ಪೋಷಕ ವರ್ಗಕ್ಕೆ ನಮ್ಮ ಶುಭಾಶಯಗಳು ಯಾವತ್ತೂ ಇರತ್ತೆ.