2017ನೇ ಸಾಲಿನ ರಾಜ್ಯ ಮಟ್ಟದ 'ಶ್ರೇಷ್ಠ ಲೇಖಕ' ಪ್ರಶಸ್ತಿ ಪ್ರಕಟ
ಬೆಂಗಳೂರು, ಮೇ 29 : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕೃಷಿ, ವಿಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ರಾಜ್ಯ ಮಟ್ಟದ ಶ್ರೇಷ್ಠ ಲೇಖಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಜನವರಿ 2015 ರಿಂದ ಡಿಸೆಂಬರ್ 2016ರವರೆಗೆ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರು ಒಟ್ಟು 44 ಪುಸ್ತಕಗಳನ್ನು ಸಲ್ಲಿಸಿದ್ದರು. ಈ ಎಲ್ಲಾ ಪುಸ್ತಕಗಳನ್ನು ಪರಿಣಿತರಿಂದ ಮೌಲ್ಯಮಾಪನ ಮಾಡಿಸಲಾಗಿದ್ದು, 2017ನೇ ಸಾಲಿನಲ್ಲಿ ವಿಜ್ಞಾನ ಮತ್ತು ವೈದ್ಯಕೀಯ ವಿಷಯದಲ್ಲಿ ಎರಡು ಪ್ರಶಸ್ತಿಗಳನ್ನು ಹಾಗೂ ಕೃಷಿ ವಿಷಯದಲ್ಲಿ ಒಂದು ಪ್ರಶಸ್ತಿಯನ್ನು ನೀಡಲಾಗಿದೆ.
ತಂತ್ರಜ್ಞಾನ ವಿಷಯದಲ್ಲಿ ಕಡಿಮೆ ಪುಸ್ತಕ ಸಲ್ಲಿಕೆಯಾಗಿದ್ದು, ಈ ವರ್ಷ ಯಾವುದೇ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ. ಆಯ್ಕೆಯಾದ ಲೇಖಕರಿಗೆ ಸನ್ಮಾನದೊಂದಿಗೆ 25000 ರು. ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದಿನ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ವಿಜ್ಞಾನ ವಿಷಯದಲ್ಲಿ: ಡಾ. ಪಾಲಹಳ್ಳಿ ವಿಶ್ವನಾಥ ಅವರ "ಶತಮಾನದ ಪುರುಷ ಐನ್ ಸ್ಟೈನ್" ವಿಶ್ರಾಂತ ಪ್ರಾಧ್ಯಾಪಕರು, ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬಯಿ.
ಹಾಗೂ ಬೆಂಗಳೂರು ವಿಶ್ವೇಶ್ವರ ವಿಜ್ಞಾನ ಕಾಲೇಜು ರಸಾಯನ ವಿಜ್ಞಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್. ವೇಣುಗೋಪಾಲ್ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ರಸಾಯನ ವಿಜ್ಞಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಎಸ್. ಜೈಪ್ರಕಾಶ್ "ರಸಾಯನ ವಿಜ್ಞಾನ ಬೆಳೆದ ಹಾದಿ" ಗೆ ಪ್ರಶಸ್ತಿ ಲಭಿಸಿದೆ.
ಕೃಷಿ : ಶಿವಮೊಗ್ಗ ವಿಶ್ವವಿದ್ಯಾನಿಲಯದ ವಿಶ್ರಾಂತ ಶಿಕ್ಷಣ ನಿರ್ದೇಶಕ ಡಾ. ಎಸ್. ಎಸ್. ಕುಮಾರಸ್ವಾಮಿ ಅವರ "ಅಂತರ್ಜಲ ಬಳಕೆ" ಕೃಷಿ ವಿಷಯದಲ್ಲಿ ಪ್ರಶಸ್ತಿ ದೊರೆತಿದೆ.
ವೈದ್ಯಕೀಯ: ಡಾ. ಶ್ರೀನಿವಾಸ ಕಕ್ಕಿಲ್ಲಾಯ ಬೇವಿಂಜೆ "ಆರೋಗ್ಯ ಆಶಯ" - ಹೆಸರಾಂತ ತಜ್ಞ ವೈದ್ಯರು - ಮಂಗಳೂರು ಹಾಗೂ ಡಾ. ನಾಗೇಶ್ ಕುಮಾರ್ ಜಿ. ರಾವ್ "ನ್ಯಾಯ ವೈದ್ಯಶಾಸ್ತ ಮರಣೋತ್ತರ ಶವಪರೀಕ್ಷೆ" - ವಿಶ್ರಾಂತ ವಿಭಾಗ ಮುಖ್ಯಸ್ಥರು/ನಿರ್ದೇಶಕರು, ಪೊರೆನ್ಸಿಕ್ ಮೆಡಿಸಿನ್ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ, ಮಣಿಪಾಲ ಅವರಿಗೆ ಸಿಕ್ಕಿದೆ.