'ಕಳೆದ ವರ್ಷಕ್ಕಿಂತ ಭೀಕರವಾಗಿದೆ ರಾಜ್ಯದ ಪ್ರಮುಖ ಜಲಾಶಯಗಳ ಸ್ಥಿತಿ'
ಬೆಂಗಳೂರು, ಜುಲೈ 18: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕರ್ನಾಟಕದ ಪರಿಸ್ಥಿತಿ ಮತ್ತೂ ಭೀಕರವಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನೈರುತ್ಯ ಮುಂಗಾರಿನ ಸ್ಥಿತಿ ಬಗ್ಗೆ ಹೇಳಿದ್ದಾರೆ.
ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಕೆ ಆರ್ ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯದ ನೀರಿನ ಪ್ರಮಾಣ ಅರ್ಧದಷ್ಟಿದೆ. ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿ ಇದಕ್ಕಿಂತ ಸ್ವಲ್ಪ ಪರವಾಗಿಲ್ಲ ಅಷ್ಟೇ ಎಂದು ಸಚಿವರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಜೂನ್ 1ರಿಂದ ತಮಿಳುನಾಡಿಗೆ 2.2ಟಿಎಂಸಿ ನೀರು ಹರಿಸಿದ ಕರ್ನಾಟಕ
"ಕಳೆದ ವರ್ಷದ ಬರಗಾಲ ಇತ್ತಲ್ಲಾ, ಅದು ನಲವತ್ತು ವರ್ಷಗಳಲ್ಲೇ ಭೀಕರವಾದದ್ದು. ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳಲ್ಲೂ ಸೇರಿ, ಕಳೆದ ವರ್ಷದ ಇದೇ ದಿನ 57.89 ಟಿಎಂಸಿ ಅಡಿ ನೀರಿತ್ತು. ಆದರೆ ಈಗ ಈ ಎಲ್ಲ ಜಲಾಶಯಗಳೂ ಸೇರಿ 26 ಟಿಎಂಸಿ ಅಡಿ ನೀರಿದೆ. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಅದರ ಅರ್ಧದಷ್ಟು ಮಾತ್ರ ನೀರಿದೆ.
ಈ ಜಲಾಶಯಗಳಲ್ಲಿ ಪರಿಸ್ಥಿತಿ ಸುಧಾರಿಸುವವರೆಗೆ ಕೃಷಿ ಚಟುವಟಿಕೆಗೆ ನೀರು ಬಿಡಲು ಸಾಧ್ಯವಿಲ್ಲ. ಏಕೆಂದರೆ, ಬೆಂಗಳೂರಿಗೆ ಕುಡಿಯುವ ನೀರು ಬೇಕಿದೆ. ಇನ್ನು ಕಾವೇರಿ ಜಲವಿವಾದ ನ್ಯಾಯಮಂಡಳಿ ತಮಿಳುನಾಡಿಗೆ ನಲವತ್ನಾಲ್ಕು ಟಿಎಂಸಿ ಅಡಿ ನೀರನ್ನು ಜೂನ್, ಜುಲೈನಲ್ಲಿ ಹರಿಸುವಂತೆ ಕಡ್ಡಾಯ ಮಾಡಿದ್ದು, ಆ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನೆರಡು ವಾರದಲ್ಲಿ ಪರಿಸ್ಥಿತಿ ಸುಧಾರಿಸಲಿಲ್ಲ ಅಂದರೆ ಮೋಡಬಿತ್ತನೆ ಬಗ್ಗೆ ಸರಕಾರ ಚಿಂತಿಸುವುದಾಗಿ ಅವರು ಹೇಳಿದ್ದಾರೆ.