ಭಟ್ಕಳದಲ್ಲಿ ನಡೆಯಲಿದೆ ರಾಜ್ಯದ ಮೊದಲ ‘ಘರ್ ವಾಪಸಿ'!
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಭಟ್ಕಳದಲ್ಲಿ ಏಪ್ರಿಲ್ 23ರಂದು ಹಿಂದೂ ಧರ್ಮದಿಂದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ 18 ಕುಟುಂಬಗಳನ್ನು ಮರಳಿ ಕರೆತರುವ 'ಘರ್ ವಾಪಸಿ' ಕಾರ್ಯಕ್ರಮ ಆಯೋಜಿಸಲಾಗಿದೆ.
ಮಂಗಳೂರು, ಮಾರ್ಚ್ 28: ಹಿಂದುತ್ವ ದೇಶದ ನಿರ್ಮಾಣದ ಮಂತ್ರ ಜಪಿಸುತ್ತಿರುವ ಶ್ರೀರಾಮಸೇನೆ ಇದೀಗ ಮತ್ತೆ 'ಮತಾಂತರ' ದ ಅಸ್ತ್ರ ಹಿಡಿದು ಹೊರಟಿದೆ.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಭಟ್ಕಳದಲ್ಲಿ ಏಪ್ರಿಲ್ 23ರಂದು ಹಿಂದೂ ಧರ್ಮದಿಂದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ 18 ಕುಟುಂಬಗಳನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವ 'ಘರ್ ವಾಪಸಿ' ಕಾರ್ಯಕ್ರಮವನ್ನು ಶ್ರೀರಾಮಸೇನೆ ಆಯೋಜಿಸಿದೆ.[ಬಂಧಿತ ಶಾರ್ಪ್ ಶೂಟರ್ಸ್ ಗಳಿಂದ ಶ್ರೀರಾಮ ಸೇನೆ ಮುಖ್ಯಸ್ಥನ ಹತ್ಯೆಗೆ ಸಂಚು?]
ಈ ಕುರಿತು ಸ್ವತಃ ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಸಾದ ಅತ್ತಾವರ ಹೇಳಿಕೆ ನೀಡಿದ್ದು ಹೀಗೆ, 'ಭಾರತ ದೇಶದಲ್ಲಿದ್ದ ಪ್ರತಿಯೊಬ್ಬರೂ ಹಿಂದೂಗಳೇ ಆಗಿದ್ದರು. ಬ್ರಿಟಿಷರು ಮತ್ತು ಮೊಘಲರು ದೇಶದ ಮೇಲೆ ಆಕ್ರಮಣ ಮಾಡಿದ ನಂತರ ಇಲ್ಲಿನ ಹಿಂದೂಗಳನ್ನು ಮತಾಂತರ ಮಾಡಿದ್ದರು. ಮತಾಂತರಗೊಂಡಿದ್ದ ಭಟ್ಕಳ ಹಾಗೂ ಉತ್ತರ ಕನ್ನಡ ಜಿಲ್ಲೆಯ 18 ಕುಟುಂಬಗಳ 50 ಜನರನ್ನು 'ಘರ್ ವಾಪಸಿ,' ಕಾರ್ಯಕ್ರಮದಲ್ಲಿ ಹಿಂದೂ ಧರ್ಮಕ್ಕೆ ಕರೆತರಲಾಗುವುದು' ಎಂದಿದ್ದಾರೆ.
ಇವುಗಳಲ್ಲಿ 12 ಮುಸ್ಲಿಂ ಹಾಗೂ 6 ಕ್ರಿಶ್ಚಿಯನ್ ಕುಟುಂಬಗಳು ಸೇರಿವೆ. ಇವರನ್ನು ಕಾನೂನು ಚೌಕಟ್ಟಿನಲ್ಲಿಯೇ ಹಿಂದೂ ಧರ್ಮಕ್ಕೆ ಕರೆತರಲಾಗುತ್ತಿದೆಯಂತೆ. ಅವರಿಗೆ ಮುಂದೆ ಸೂಕ್ತ ಭದ್ರತೆಯನ್ನು ನೀಡಿ ಧರ್ಮದ ಮತ್ತು ಮಾನವೀಯತೆಯ ನೆಲೆಯಲ್ಲಿ ಅವರು ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡುವುದು ಶ್ರೀರಾಮಸೇನೆಯ ಗುರಿ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಸ್ವಾಮಿಗಳು, ಹಿಂದೂಪರ ಸಂಘಟನೆಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಭಟ್ಕಳ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಹೆಸರುಗಳನ್ನು ಗೌಪ್ಯವಾಗಿಡಲಾಗಿದೆ.