‘ಸಾಗರಮಾಲಾ’ ಯೋಜನೆಗೆ ಕರ್ನಾಟಕದ 8 ಹೆದ್ದಾರಿಗಳು ಆಯ್ಕೆ
ನವದೆಹಲಿ, ಆಗಸ್ಟ್ 01 : ಪ್ರಮುಖ ನಗರಗಳು ಹಾಗೂ ಬಂದರುಗಳ ನಡುವೆ ಸುಗಮ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ 'ಸಾಗರಮಾಲಾ' ಯೋಜನೆ ಅಡಿ ಕರ್ನಾಟಕದ 8 ಹೆದ್ದಾರಿಗಳು ಆಯ್ಕೆಯಾಗಿವೆ.
ಬಂದರುಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯದ ಒಟ್ಟು 8 ಹೆದ್ದಾರಿಗಳು ಸೇರಿದಂತೆ ರಾಷ್ಟ್ರದ 79 ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಸಾರಿಗೆ ಇಲಾಖೆಯ ರಾಜ್ಯ ಸಚಿವ ಮನಸುಖಲಾಲ್ ಮಾಂಡವಿಯಾ ರಾಜ್ಯಸಭೆಗೆ ತಿಳಿಸಿದರು.
ಹುಬ್ಬಳ್ಳಿ- ಅಂಕೋಲಾ ಹೆದ್ದಾರಿಯ ಷಟ್ಪಥ ಕಾಮಗಾರಿ, ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿನ ಶಿರಾಡಿ ಘಾಟ್ ಬಳಿ ಕಾಂಕ್ರೀಟ್ ಕಾಮಗಾರಿ, ತುಮಕೂರು- ಹೊನ್ನಾವರ ಹೆದ್ದಾರಿಯ ಚತುಷ್ಪಥ ಕಾಮಗಾರಿ, ಬೆಳಗಾವಿ- ಪಣಜಿ, ಮಂಗಳೂರು- ಮೂಡುಬಿದಿರೆ ಹೆದ್ದಾರಿಗಳ ಚತುಷ್ಪಥ ಕಾಮಗಾರಿ, ಹಾವೇರಿ- ಬೇಲೆಕೆರೆ ಹೆದ್ದಾರಿ ಅಭಿವೃದ್ಧಿ, ವೈಟ್ಫೀಲ್ಡ್ ಕೈಗಾರಿಕಾ ಕ್ಲಸ್ಟರ್ನಿಂದ ಚೆನ್ನೈ ಮತ್ತು ಈನ್ಯಂ ಬಂದರುವರೆಗೆ ಎಕ್ಸ್ಪ್ರೆಸ್ ವೇ ನಿರ್ಮಾಣ ಹಾಗೂ ಬಳ್ಳಾರಿ- ಕೃಷ್ಣಪಟ್ಟಣಂ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೇಂದ್ರ ಸರ್ಕಾರ ಯೋಜನೆ ಅಡಿ ಕೈಗೆತ್ತಿಕೊಳ್ಳಲಿದೆ.
ರಾಷ್ಟ್ರದ ಪ್ರಮುಖ ಕೈಗಾರಿಕಾ ಪ್ರದೇಶಗಳಿಗೆ ಹೊಂದಿಕೊಂಡ ನಗರಗಳ ಅಭಿವೃದ್ಧಿಯನ್ನೂ ಈ ಯೋಜನೆ ಒಳಗೊಂಡಿದೆ.