ಮೌಲ್ಯಮಾಪನ ಭಾಗ್ಯಕ್ಕೆ ಕಾದಿವೆ ಪಿಯು ಉತ್ತರ ಪತ್ರಿಕೆಗಳು
ಬೆಂಗಳೂರು, ಏಪ್ರಿಲ್, 07: ಪಿಯುಸಿ ವಿದ್ಯಾರ್ಥಿಗಳ ಸಂಕಷ್ಟ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಿಯು ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಇದರ ಪರಿಣಾಮ ಫಲಿತಾಂಶದ ಮೇಲೆ ಬೀಳಲಿದೆ.
ಇನ್ನೊಂದೆಡೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಗುರುವಾರ ಪಿಯು ಉಪನ್ಯಾಸಕರ ಜೊತೆ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಆದರೆ ಇನ್ನೂ ಒಂದು ಹಂತದ ಮಾತುಕತೆ ಬಾಕಿ ಇದ್ದು, ಶುಕ್ರವಾರ 12ಗಂಟೆಯೊಳಗೆ ಸರ್ಕಾರ ತನ್ನ ಅಂತಿಮ ತೀರ್ಮಾನ ತಿಳಿಸಲಿದೆ.[ಪತ್ರಿಕೆ ಹಗರಣ : ಇಬ್ಬರು ಶಿಕ್ಷಕರು 9 ದಿನಗಳ ಕಾಲ ಸಿಐಡಿ ವಶಕ್ಕೆ]
ಪಿಯು ಉಪನ್ಯಾಸಕರ ವೇತನ ಪರಿಷ್ಕರಣೆಗೆಂದು ರಚಿಸಿದ್ದ ಕುಮಾರ್ ನಾಯಕ್ ಅವರ ಸಮಿತಿ 2001ರಲ್ಲಿ ಸಲ್ಲಿಕೆ ಮಾಡಿರುವ ವರದಿ ಜಾರಿಯಾಗಬೇಕು ಅಲ್ಲಿಯವರೆಗೂ ಪತ್ರಿಕೆ ಮೌಲ್ಯ ಮಾಪನ ಮಾಡುವುದಿಲ್ಲ ಎಂದು ಉಪನ್ಯಾಸಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಉಪನ್ಯಸಕರು ಧರಣಿ ಕುಳಿತಿದ್ದಾರೆ.[ವಾಟ್ಸಪ್ ಬ್ಯಾನ್ ಮಾಡ್ತೀರಾ? ಮಾಡ್ಕೊಳ್ಳಿ ನಮಗೇನಂತೆ!]
ಉಪನ್ಯಾಸಕರ ಹೋರಾಟದಲ್ಲಿ ಗುರುವಾರ ಮಾಜಿ ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ, ಕೃಷ್ಣ ಭಟ್, ರಾಮಚಂದ್ರೇಗೌಡ ಸೇರಿದಂತೆ ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.
ಮೊದಲು ನೀವು ಮೌಲ್ಯಮಾಪನ ಆರಂಭಿಸಿ, ನಿಗದಿತ ಸಮಯದಲ್ಲಿ ಫಲಿತಾಂಶ ಪ್ರಕಟವಾಗುವಂತೆ ನೋಡಿಕೊಳ್ಳಿ. ನಂತರ ನಿಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಕಿಮ್ಮನೆ ಭರವಸೆ ನೀಡಿದ್ದರೂ ಉಪನ್ಯಾಸಕರು ಮಣಿದಿಲ್ಲ.