ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆಯಾಚಿಸಿದ ಡಿ ಕೆ ಶಿವಕುಮಾರ್
ಆದಾಯ ತೆರಿಗೆ ದಾಳಿಯ ವೇಳೆ ನನ್ನ ತಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಬಗ್ಗೆ, ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರಿಂದ ಮುಖ್ಯಮಂತ್ರಿಗಳ ಕ್ಷಮೆಯಾಚನೆ.
ಬೆಂಗಳೂರು, ಆ 5: ಆದಾಯ ತೆರಿಗೆ ದಾಳಿಯ ವೇಳೆ ತಮ್ಮ ತಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಬಗ್ಗೆ, ಇಂಧನ ಸಚಿವ ಡಿ ಕೆ ಶಿವಕುಮಾರ್, ಮುಖ್ಯಮಂತ್ರಿಗಳ ಕ್ಷಮೆಯಾಚಿಸಿದ್ದಾರೆ.
ಶನಿವಾರ (ಆ 5) ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಡಿಕೆಶಿ, ಕೋಡಿಹಳ್ಳಿಯ ತೋಟದ ಮನೆಯಲ್ಲಿ ನನ್ನ ತಾಯಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ, ಪುತ್ರ ಸಹಜ ವಾತ್ಸಲ್ಯದಿಂದ ಮುಖ್ಯಮಂತ್ರಿಗಳ ಬಗ್ಗೆ ಆಡಿರುವ ಮಾತಿಗೆ ನಾನು ಬಹಿರಂಗ ಕ್ಷಮೆಯಾಚಿಸುತ್ತೇನೆಂದು ಹೇಳಿದ್ದಾರೆ. (ಐಟಿ ದಾಳಿ ಮುಗಿಯುತ್ತಿದ್ದಂತೇ ಅಖಾಡಕ್ಕಿಳಿದ ಡಿಕೆಶಿ)
ನನ್ನ ವೃದ್ದ ತಾಯಿ ವಿದ್ಯಾವಂತರಲ್ಲ, ಆದಾಯ ತೆರಿಗೆ ಯಾರ ಅಧೀನದ ಇಲಾಖೆಗೆ ಬರುತ್ತದೆ ಎನ್ನುವ ಅರಿವಿಲ್ಲದೇ, ಒತ್ತಡಕ್ಕೊಳಗಾಗಿ ನೀಡಿರುವ ಹೇಳಿಕೆಯನ್ನು ಕೆಲವು ಮಾಧ್ಯಮಗಳು ದುರುಪಯೋಗ ಪಡಿಸಿಕೊಂಡು ಸಿಎಂ ವಿರುದ್ದ ಹೇಳಿಕೆ ನೀಡುವಂತೆ ಪ್ರಚೋದಿಸಿವೆ.
ನನ್ನ ತಾಯಿಯ ಹೇಳಿಕೆ ಉದ್ದೇಶಪೂರ್ವಕವಾದದಲ್ಲ, ನನ್ನ ತಾಯಿಯ ಹೇಳಿಕೆಗೆ ನಾನು ರಾಜ್ಯದ ಮತ್ತು ಮುಖ್ಯಮಂತ್ರಿಗಳ ಕ್ಷಮೆಯಾಚಿಸುತ್ತೇನೆ. ಮುಖ್ಯಮಂತ್ರಿಗಳು ಕಷ್ಟಕಾಲದಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದಾರೆಂದು ಡಿ ಕೆ ಶಿವಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನನ್ನ ಮಗನ ಇಂದಿನ ಪರಿಸ್ಥಿತಿಗೆ ಸಿದ್ದರಾಮಯ್ಯನೇ ಕಾರಣ, ನನ್ನ ಮಕ್ಕಳು ಕಾಂಗ್ರೆಸ್ ಪಕ್ಷಕ್ಕಾಗಿ ಎಷ್ಟೆಲ್ಲಾ ದುಡಿದರು, ಈಗ ಅವರನ್ನು ಬೆಂಬಲಿಸುವವರು ಯಾರೂ ಇಲ್ಲ.
ಸಿದ್ದರಾಮಯ್ಯನಿಗೆ ಹೆಗಲಿಗೆ ಹೆಗಲು ಕೊಟ್ಟು ನನ್ನ ಮಕ್ಕಳು ಕೆಲಸ ಮಾಡಿದರು, ಈಗ ನನ್ನ ಮಕ್ಕಳನ್ನು ದೂರ ಮಾಡಲಾಗುತ್ತಿದೆ ಎಂದು ಡಿಕೆಶಿ ತಾಯಿ ಗೌರಮ್ಮ, ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದರು.
ಡಿ ಕೆ ಶಿವಕುಮಾರ್ ತಾಯಿ ಸಿದ್ದರಾಮಯ್ಯ ವಿರುದ್ದ ನೀಡಿದ್ದ ಹೇಳಿಕೆಯನ್ನು ಪ್ರಧಾನಿ ಮೋದಿ ವಿರುದ್ದ ನೀಡಿದ ಹೇಳಿಕೆಯೆಂದು ಡಿ ಕೆ ಶಿವಕುಮಾರ್ ಫೇಸ್ ಬುಕ್ ಪೇಜಿನಲ್ಲಿ ಬರೆಯಲಾಗಿತ್ತು ಮತ್ತು ಡಿಕೆಶಿ ಸಹೋದರ ಡಿ ಕೆ ಸುರೇಶ್, ನನ್ನ ತಾಯಿ ಮೋದಿ ವಿರುದ್ದವೇ ಹೇಳಿದ್ದು ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಡಿ ಕೆ ಶಿವಕುಮಾರ್ ತಾಯಿ, ಇಲ್ಲ ನಾನು ಹೇಳಿದ್ದು ಸಿದ್ದರಾಮಯ್ಯ ವಿರುದ್ದವೇ ಎಂದು ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.