ಜೂ 4, ಪೊಲೀಸ್ ಸಾಮೂಹಿಕ ರಜೆ: ನಾನ್ ಬೇಲ್ ಪ್ರಕರಣ, ಎಚ್ಚರಿಕೆ
ಬೆಂಗಳೂರು, ಮೇ 28: ಜೂನ್ ನಾಲ್ಕರಂದು ' ರಜೆ ಬೇಕು' ಎಂದು ಪೊಲೀಸರು ಸಲ್ಲಿಸುವ ರಜಾ ಅರ್ಜಿಗಳನ್ನು ಸಾರಾಸಗಾಟ ತಿರಸ್ಕರಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಸಂಬಂಧಪಟ್ಟ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಮತ್ತು ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ.
ಇತರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ಪೊಲೀಸರಿಗೆ ಹೆಚ್ಚಿನ ಸೌಲಭ್ಯ, ಸವಲತ್ತುಗಳಿವೆ, ಅದನ್ನು ಮೊದಲು ಎಲ್ಲರೂ ತಿಳಿದುಕೊಳ್ಳಬೇಕು.
ಯಾರೋ ಎತ್ತಿಕಟ್ಟಿದ್ದಾರೆಂದು ಅವರ ಮಾತನ್ನು ಕೇಳಬಾರದು ಎಂದು ಸಾಮೂಹಿಕ ರಜೆಯ ಮೂಲಕ ಪ್ರತಿಭಟನೆ ಸಲ್ಲಿಸಲು ಮುಂದಾಗಿರುವ ಪೊಲೀಸರಿಗೆ, ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ. (ಸಾಮೂಹಿಕ ರಜೆಗೆ 50 ಸಾವಿರ ಪೊಲೀಸರ ನಿರ್ಧಾರ)
ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಆಸ್ತಿ ಕಾಪಾಡುವುದು ಪೊಲೀಸರ ಕರ್ತವ್ಯ. ಅದನ್ನು ಬಿಟ್ಟು ಪ್ರತಿಭಟನೆ ನಡೆಸಿದರೆ, ಅಂತಹ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೇ, ಜಾಮೀನುರಹಿತ ಪ್ರಕರಣ ದಾಖಲಿಸಲಾಗುವುದು ಎಂದು ಓಂ ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.
ಮೊದಲು ಪೊಲೀಸರು ಪ್ರತಿಭಟನೆ ನಿರ್ಧಾರ ಹಿಂದಕ್ಕೆ ಪಡೆದುಕೊಳ್ಳಲಿ, ಆಮೇಲೆ ಚರ್ಚಿಸೋಣ ಎಂದು ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಭರವಸೆ ನೀಡಿದ್ದಾರೆ.
ಹಾಗಾಗಿ ಪೊಲೀಸರು ಜೂನ್ ನಾಲ್ಕರಂದು ಸಾಮೂಹಿಕ ರಜೆ ಹಾಕಬಾರದು ಎಂದು ಪೊಲೀಸ್ ನಿರ್ದೇಶಕರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಜೂನ್ ನಾಲ್ಕರ ಪ್ರತಿಭಟನೆಯಲ್ಲಿ ಸಿವಿಲ್ ಪೊಲೀಸರು ಮಾತ್ರ ಭಾಗಿಯಾಗುತ್ತಿದ್ದಾರೆ. ಮೀಸಲು ಪಡೆ, ನಗರ ಮೀಸಲು ಪಡೆ, ಜಿಲ್ಲಾ ಮೀಸಲು ಸಿಬ್ಬಂದಿ ಪ್ರತಿಭಟನೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಈಗಾಗಲೇ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಯ ರೂಪುರೇಷೆಯ ಬಗ್ಗೆ ಚರ್ಚಿಸಲಾಗಿದೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಸರ್ಕಾರಕ್ಕೆ ನೀಡಿದೆ. (ಜೂನ್ 2ಕ್ಕೆ ಸರ್ಕಾರಿ ನೌಕರರ ಮುಷ್ಕರ)
ವೇತನ ತಾರತಮ್ಯ, ರಜೆ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ ಜೂನ್ 4ರಂದು ಪ್ರತಿಭಟನೆ ನಡೆಸಲು ಮುಂದಾಗಿದೆ.
ಪೊಲೀಸ್ ಮಹಾ ನಿರ್ದೇಶಕರ ಸೂಚನೆಯನ್ನು ಮೀರಿ ಪೊಲೀಸರು ಪ್ರತಿಭಟನೆ ನಡೆಸಿದರೆ ಅವರ ವಿರುದ್ಧ ಕೈಗೊಳ್ಳಬಹುದಾದ ಶಿಸ್ತು ಕ್ರಮಗಳನ್ನು ವಿವರಿಸುವ ಕೈಪಿಡಿಯ ಪ್ರತಿಯನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಿಕೊಡಲಾಗಿದೆ.