ಪ್ರತಿಭಟನೆಗೆ ಮುಂದಾಗಿರುವ ಪೊಲೀಸರಿಂದ ಬಲವಂತದ ಮುಚ್ಚಳಿಕೆ?
ಬೆಂಗಳೂರು, ಜೂ 2: ಇದೇ ಜೂನ್ ನಾಲ್ಕರಂದು ಸಾಮೂಹಿಕ ರಜೆಯ ಮೂಲಕ ಪ್ರತಿಭಟನೆಗೆ ಮುಂದಾಗಿರುವ ರಾಜ್ಯ ಪೊಲೀಸರನ್ನು ಹತ್ತಿಕ್ಕಲು ಹಿರಿಯ ಪೊಲೀಸ್ ಅಧಿಕಾರಿಗಳು ಬಲವಂತದಿಂದ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದಾರೆಂದು ವರದಿಯಾಗಿದೆ.
ದೇಶದ ಇತಿಹಾಸದಲ್ಲೇ ಅಪರೂಪ ಎನ್ನುವಂತಹ ಪೊಲೀಸರ ಪ್ರತಿಭಟನಾ ನಿರ್ಧಾರದಿಂದ ನಿದ್ದೆಗೆಟ್ಟಿರುವ ಸಿಎಂ ಸಿದ್ದರಾಮಯ್ಯ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಬುಧವಾರ (ಜೂ 1) ಮಾತುಕತೆ ನಡೆಸಿದ್ದಾರೆ. (ಪ್ರತಿಭಟನೆಗೆ ಮುಂದಾದ ಪೊಲೀಸರ 31 ಬೇಡಿಕೆಗಳು)
ಪ್ರತಿಭಟನೆ ನಡೆಯಲು ಅವಕಾಶ ನೀಡಲೇ ಬಾರದು ಎನ್ನುವ ನಿರ್ಧಾರಕ್ಕೆ ಬಂದಿರುವ ಸರಕಾರ, ಈಗಾಗಲೇ ಎಸ್ಮಾ ಜಾರಿಗೆಗೊಳಿಸಿದ್ದು, ಕಡ್ಡಾಯವಾಗಿ ಮೂರು ದಿನ ಕರ್ತವ್ಯಕ್ಕೆ ಹಾಜರಾಗಲೇ ಬೇಕು ಎನ್ನುವ ಮೌಕಿಕ ಆದೇಶ ನೀಡಿದೆ.
ಪ್ರತೀ ಠಾಣೆಗೆ ತೆರಳುತ್ತಿರುವ ಹಿರಿಯ ಅಧಿಕಾರಿಗಳು, ಪೊಲೀಸರಿಂದ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಒಂದು ವೇಳೆ ಮುಚ್ಚಳಿಕೆಗೆ ಸಹಿಹಾಕಲು ಹಿಂದೇಟು ಹಾಕಿದರೆ ಸಸ್ಪೆಂಡ್ ಮಾಡಲಾಗುವುದು ಎನ್ನುವ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಬಿಟಿವಿ ವರದಿ ಮಾಡಿದೆ.
ನಾಳೆಯಿಂದ ಬೆಳಗ್ಗೆ 7ಗಂಟೆಗೆ ಬಂದು, ರಾತ್ರಿ 10 ಗಂಟೆಗೆ ಹೋಗಬೇಕೆಂದು ಮೌಖಿಕವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹಾಜರಾತಿ ಪುಸ್ತಕದಲ್ಲಿ ಕಡ್ಡಾಯವಾಗಿ ಮೂರು ದಿನಗಳ ಕಾಲ ಸಹಿ ಮಾಡಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಪಬ್ಲಿಕ್ ಟಿವಿ ಕೂಡಾ ವರದಿ ಮಾಡಿದೆ. (ಮರೆಯಲಾದಿತೇ ಪೊಲೀಸಪ್ಪನವರ ಜೊತೆಗಿನ ಒಡನಾಟ)
ಸಿಎಂ ಸಮ್ಮುಖದಲ್ಲಿ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಗೃಹ ಸಚಿವ ಪರಮೇಶ್ವರ್, ಪ್ರತಿಭಟನೆಗೆ ಮುಂದಾಗಿರುವ ಪೊಲೀಸರಿಗೆ ನೀಡಿದ ಎಚ್ಚರಿಕೆ ಮತ್ತು ಮನವಿ ಏನು? ಸ್ಲೈಡಿನಲ್ಲಿ...
ನಿಮ್ಮ ಬೇಡಿಕೆಗೆ ಸ್ಪಂದಿಸುತ್ತೇವೆ
ನಿಮ್ಮ ಬೇಡಿಕೆ ನಮಗೆ ಅರ್ಥವಾಗಿದೆ, ಅದಕ್ಕೆ ಖಂಡಿತ ಸ್ಪಂದಿಸುತ್ತೇವೆ. ಆದರೆ ಮೊದಲು ಪ್ರತಿಭಟನೆಯ ನಿರ್ಧಾರವನ್ನು ಕೈಬಿಡಿ. ನಿಮ್ಮ ಜೊತೆ ನಾವಿದ್ದೇವೆ, ಮಾತುಕತೆಗೂ ಸಿದ್ದರಿದ್ದೇವೆ ಎಂದು ಗೃಹ ಸಚಿವರು ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆಯ ನಂತರ ಮಾಧ್ಯಮದವರ ಮೂಲಕ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ನೀವು ಶಿಸ್ತಿನ ಸಿಪಾಯಿಗಳು
ಪೊಲೀಸ್ ಇಲಾಖೆ ಎಂದರೆ ಅದು ಶಿಸ್ತಿನ ಇಲಾಖೆ, ಪೊಲೀಸರು ಶಿಸ್ತಿನ ಸಿಪಾಯಿಗಳು. ಅವರೇ ಪ್ರತಿಭಟನೆ ನಡೆಸಿದರೆ ಹೇಗೆ? ಪೊಲೀಸ್ ಕಲ್ಯಾಣಕ್ಕಾಗಿ ಹಿಂದೆ ಸಮಿತಿ ನೀಡಿದ್ದ ವರದಿಯಲ್ಲಿನ ಮೂವತ್ತು ಶಿಫಾರಸುಗಳಲ್ಲಿ ಹತ್ತನ್ನು ಈಗಾಗಲೇ ಕಾರ್ಯರೂಪಕ್ಕೆ ತರಲಾಗಿದೆ - ಪರಮೇಶ್ವರ್.
ಪಟ್ಟಭದ್ರ ಹಿತಾಶಕ್ತಿಗಳು
ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಅಹಿತಕರ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಾ ಪೊಲೀಸ್ ಸಿಬ್ಬಂದಿಗಳು ಮತ್ತು ಅವರ ಕುಟುಂಬಗಳಲ್ಲಿ ನನ್ನ ಪ್ರಾಮಾಣಿಕ ಮನವಿ ಏನೆಂದರೆ ಸುಳ್ಳು ಪ್ರಚಾರಕ್ಕೆ ಕಿವಿಗೊಡಬೇಡಿ. ಒಂದು ವೇಳೆ ಪ್ರತಿಭಟನೆಗೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪರಮೇಶ್ವರ್ ಮನವಿ, ಎಚ್ಚರಿಕೆ ನೀಡಿದ್ದಾರೆ.
1966ರ ಪೊಲೀಸ್ ಕಾಯ್ದೆ
1966ರ ಪೊಲೀಸ್ ಕಾಯ್ದೆಯ ಕಲಂ 3 (ಹಕ್ಕುಗಳ ಪ್ರತಿಭಟನೆಯ ಅನ್ವಯ) ಪೊಲೀಸರು ಸಂಘಟನೆಯನ್ನು ಹೊಂದುವುದು ಮತ್ತು ಪ್ರತಿಭಟನೆ ಮಾಡುವುದರಿಂದ ನಿರ್ಬಂಧಿಸಲಾಗಿದೆ. ನಮ್ಮ ಸರಕಾರ ಪೊಲೀಸ್ ಸಿಬ್ಬಂದಿಗಳ ಜೀವನಶೈಲಿಯನ್ನು ಉನ್ನತೀಕರಿಸಲು ಕಟಿಬದ್ದವಾಗಿದೆ - ಗೃಹ ಸಚಿವ ಪರಮೇಶ್ವರ್.
ಪೇಜಾವರ ಶ್ರೀಗಳು
ಪೊಲೀಸರ ಬೇಡಿಗೆಗಳಿಗೆ ಸರಕಾರ ಸ್ಪಂದಿಸಬೇಕು ಜೊತೆಗೆ ಪೊಲೀಸರು ಕಾನೂನು, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತಾದೃಷ್ಟಿಯಿಂದ ಪ್ರತಿಭಟನೆಯನ್ನು ಕೈಬಿಡಬೇಕೆಂದು ಉಡುಪಿ ಪರ್ಯಾಯ ಪೇಜಾವರ ಶ್ರೀಗಳು ಸರಕಾರಕ್ಕೆ ಮತ್ತು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.