ಸದನದ ಅಹೋರಾತ್ರಿ ಧರಣಿ: ಮಟನ್ ನಿಂದ ಅನ್ನಾಸಾಂಬರ್ ವರೆಗೆ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕೇಸನ್ನು ಸಿಬಿಐಗೆ ವಹಿಸಬೇಕು, ಸಚಿವ ಕೆ ಜೆ ಜಾರ್ಜ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಬುಧವಾರ (ಜುಲೈ 13) ಆಷಾಢ ಶುದ್ದ ನವಮಿಯಂದು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿವೆ.
ಅಹೋರಾತ್ರಿ ಧರಣಿಯ ವೇಳೆ ಶಾಸಕರು ರಾತ್ರಿ ಮಲಗುವ ಮೊದಲು ಸಿನಿಮಾ ಗೀತೆಗಳನ್ನು ಹಾಡಿದ್ದಾರೆ. ಮತ್ತೆ ಕೆಲವರು ಭಕ್ತಿಗೀತೆಗಳನ್ನು ಹಾಡಿ ಧರಣಿಯಲ್ಲೂ ದೇವರನ್ನು ಕಂಡಿದ್ದಾರೆ. ಇನ್ನು ಕೆಲವರು ಏಕಪಾತ್ರಾಭಿನಯದ ಡೈಲಾಗ್ ಹೇಳಿ ತಮ್ಮ ಕಲಾಶಕ್ತಿಯನ್ನು ಪ್ರದರ್ಶಿಸಿದ್ದಾರೆ, ವರನಟ ಡಾ. ರಾಜಕುಮಾರ್ ಅವರನ್ನೂ ಸ್ಮರಿಸಿಕೊಂಡಿದ್ದಾರೆ. (ದಿನವೊಂದರ ಕಲಾಪಕ್ಕೆ ಲಕ್ಷ ಲಕ್ಷ, ಚರ್ಚೆ ಶೂನ್ಯ)
ಇವೆಲ್ಲದರ ನಡುವೆ ಗೃಹ ಸಚಿವ ಪರಮೇಶ್ವರ್, ಧರಣಿ ನಿರತ ವಿರೋಧ ಪಕ್ಷದ ಶಾಸಕರನ್ನು ಭೇಟಿ ಮಾಡಿ, ಹಿಂದೆ ನಾವು ಮಾಡಿದ್ದೆವು, ಈಗ ನೀವು ಧರಣಿ ಕೂರ್ತಿದ್ದೀರಾ, ಮಾಡಿ.. ಮಾಡಿ. ಒಳ್ಳೆದಾಗಲಿ ಎಂದು ವ್ಯಂಗ್ಯ ಮಿಶ್ರಿತ ದಾಟಿಯಲ್ಲಿ 'ಅಲ್ ದಿ ಬೆಸ್ಟ್' ಹೇಳಿ ಹೋಗಿದ್ದಾರೆ.
ಈ ಅಹೋರಾತ್ರಿ ಧರಣಿ ಎನ್ನುವುದು ರಾಜ್ಯ ರಾಜಕಾರಣದಲ್ಲಿ ಹೊಸದೇನಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿ ಮತ್ತು ಜೆಡಿಎಸ್ ಆಡಳಿತ ಪಕ್ಷದ ವಿರುದ್ದ ಅಹೋರಾತ್ರಿ ನಡೆಸಿವೆ.
ಹಿಂದೆ ನಡೆದಿದ್ದ ಧರಣಿ, ನಿನ್ನೆ ನಡೆದ ಧರಣಿ ಎರಡರಲ್ಲೂ ರಾಜಕೀಯದ ವಾಸನೆ ಇರುವುದು ಸಾಮಾನ್ಯವಾಗಿದ್ದರೂ, ಧರಣಿಯ ವೇಳೆ ಪೂರೈಸಲಾದ ಆಹಾರ ಪದ್ದತಿಯ ವಾಸನೆಯಲ್ಲಿ ಭಾರೀ ವ್ಯತ್ಯಾಸವಿದ್ದದ್ದು 'ಪಾಯಿಂಟ್ ಟು ಬಿ ನೋಟೆಡ್' ಎನ್ನುವಂತಿತ್ತು. (ಮುರಿದು ಬಿದ್ದ ಸ್ಫೀಕರ್ ಸಂಧಾನ ಸಭೆ)
ಐಎಎಸ್ ಅಧಿಕಾರಿ ಡಿ ಕೆ ರವಿ ನಿಗೂಢ ಸಾವು ಕುರಿತು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಮಾರ್ಚ್ 2015ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಅಹೋರಾತ್ರಿ ಧರಣಿ ನಡೆಸಿತ್ತು. ರವಿ ಕೇಸಿನಲ್ಲೂ ಸಚಿವ ಜಾರ್ಜ್ ಹೆಸರು ಕೇಳಿ ಬರುತ್ತಿತ್ತು. ಪ್ರತಿಪಕ್ಷಗಳ ತೀವ್ರ ಒತ್ತಡಕ್ಕೆ ಮಣಿದಿದ್ದ ಸರಕಾರ ಕೇಸನ್ನು ಸಿಬಿಐಗೆ ವರ್ಗಾಯಿಸಿತ್ತು. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಡಿ ಕೆ ರವಿ ಕೇಸ್ ಸಿಬಿಐಗೆ ವಹಿಸಲು ಅಹೋರಾತ್ರಿ ಧರಣಿ
ಮಾರ್ಚ್ 2015ರಲ್ಲಿ ನಡೆದ ಅಹೋರಾತ್ರಿ ಧರಣಿಯ ವೇಳೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಪ್ಪಟ ಸಸ್ಯಾಹಾರಿ ಊಟವನ್ನೇ ಸದನದಲ್ಲಿ ಮಾಡಿದ್ದರು. ಇದಾದ ನಂತರ ನವೆಂಬರ್ 2013ರಲ್ಲಿ ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ವರ್ಗಗಳಿಗೂ ವಿಸ್ತರಿಸುವಂತೆ ಆಗ್ರಹಿಸಿ ಕೆಜೆಪಿ ಮುಖ್ಯಸ್ಥರಾಗಿದ್ದ ಯಡಿಯೂರಪ್ಪ ಅಹೋರಾತ್ರಿ ಧರಣಿ ನಡೆಸಿದ್ದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.
ಹಾಲೀ ಅಧಿವೇಶನ
ಬಿಎಸ್ವೈ ಆ ವೇಳೆ ಯಾವ ಪದ್ದತಿಯ ಊಟವನ್ನು ಮಾಡಿದ್ದರು ಎನ್ನುವುದನ್ನು ಮತ್ತೆ ವಿವರಿಸಬೇಕಾಗಿಲ್ಲ. ಹಾಲೀ ಅಧಿವೇಶನದ ವೇಳೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯ ವಿಚಾರದಲ್ಲಿ ವಿಪಕ್ಷಗಳ ಸದಸ್ಯರಿಗೆ ಅಹೋರಾತ್ರಿಯ ಧರಣಿಯ ವೇಳೆ ಚಪಾತಿ, ಅನ್ನ ಸಾಂಬರ್, ರೈಸ್ ಬಾತ್, ಉಪ್ಪಿಟ್ಟು ಪೂರೈಸಲಾಗಿತ್ತು.
ಅಕ್ರಮ ಗಣಿಗಾರಿಕೆ
ಹಿಂದೆ ಕಾಂಗ್ರೆಸ್ ನಡೆಸಿದ್ದ ಅಹೋರಾತ್ರಿ ಧರಣಿಯ ಘಟನೆಯನ್ನು ನೆನಪಿಸಿಕೊಳ್ಳುವುದಾದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಜುಲೈ 2010ರಲ್ಲಿ ಅಕ್ರಮ ಗಣಿಗಾರಿಕೆ ಸಿಬಿಐಗೆ ವಹಿಸಲು ಆಗ್ರಹಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು.
ಮಾಂಸಹಾರ ಸೇವನೆ
ಧರಣಿಯ ವೇಳೆ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಚಿಕನ್, ಮಟನ್ ಸೇವಿಸಿದ್ದು ಬಹಳ ಸುದ್ದಿಯಾಗಿತ್ತು. ಪವಿತ್ರವಾದ ಸ್ಥಳದಲ್ಲಿ ಮಾಂಸಾಹಾರಿ ಸೇವಿಸಿ ಸದನದ ಪಾವಿತ್ರ್ಯತೆಯನ್ನು ಕಾಂಗ್ರೆಸ್ ಹಾಳು ಮಾಡಿತು ಎಂದು ಬಿಜೆಪಿ ಬೊಬ್ಬೆ ಹೊಡೆಯಲಾರಂಭಿಸಿತು. ಸದನಕ್ಕೆ ಪುಣ್ಯಾರ್ಚನೆ ಮಾಡಿಸಬೇಕೆಂದು ಕೆಲವರು ವಾದ ಮಂಡಿಸಿದ್ದೂ ಆಗಿತ್ತು.
ಜನರಿಗೆ ಮನೋರಂಜನೆ
ವಿಪರ್ಯಾಸ ಎನ್ನುವಂತೆ ಅಂದು ವಿಪಕ್ಷಗಳ ಅಹೋರಾತ್ರಿ ಧರಣಿಯ ಉದ್ದೇಶ ಬೇರೆ ದಾರಿಗೆ ಸಾಗಿ ಮಾಂಸಾಹಾರ ಸೇವನೆಯ ಘಟನೆಯ ಸುತ್ತ ವಾಗ್ಯುದ್ದ ಉಂಟಾಗಿ ಜನರಿಗೆ ಪುಕ್ಸಟೆ ಮನೋರಂಜನೆ ಲಭಿಸಿತ್ತು.
ಒಟ್ಟಾರೆ ಅಹೋರಾತ್ರಿ ಧರಣಿ ಎನ್ನುವ ರಾಜಕೀಯ ಪ್ರಹಸನ
ಒಟ್ಟಿನಲ್ಲಿ 2010ರಿಂದ ಇದುವರೆಗಿನ ಅಹೋರಾತ್ರಿ ಧರಣಿ ಎನ್ನುವ ರಾಜಕೀಯ ಪ್ರಹಸನದಲ್ಲಿ, ಊಟದ ವಿಚಾರಕ್ಕೂ ಅಷ್ಟೇ ಮಹತ್ವ ಲಭಿಸುತ್ತಿದೆ. ರಾಜಕೀಯ ಹೋರಾಟದ ಹೆಸರಿನಲ್ಲಿ ಸಾರ್ವಜನಿಕರಿಗೆ ಮನೋರಂಜನೆ ಇಲ್ಲಿ 24X7.