ಇದರಲ್ಲಿ ನಿಮ್ಮ ಊರಿನ, ತಾಲೂಕಿನ ಸುದ್ದಿ ಇದೆಯಾ ನೋಡಿಕೊಳ್ಳಿ
ಪ್ರತಿನಿತ್ಯ ರಾಜ್ಯ, ದೇಶಾದ್ಯಂತ ಹಲವಾರು ಸಾವು, ಕಳ್ಳತನ, ಅಪಘಾತ, ಅತ್ಯಾಚಾರ, ಪ್ರತಿಭಟನೆ, ಆತ್ಮಹತ್ಯೆ ಹೀಗೆ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಸುದ್ದಿಗಳ ಪಕ್ಷಿ ನೋಟ ಇಲ್ಲಿದೆ.
ಕಲಬುರಗಿ ಮುತ್ತೂಟ್ ಫಿನ್ ಕಾರ್ಪಿನಲ್ಲಿ ದರೋಡೆ
ಕಲಬುರಗಿ,ಮಾರ್ಚ್,02: ಮುತ್ತೂಟ್ ಫಿನ್ ಕಾರ್ಪ್ ಗೆ ನುಗ್ಗಿದ ನಾಲ್ವರು ದರೋಡೆಕೋರರು ಪಿಸ್ತೂಲು, ಮಾರಕಾಸ್ತ್ರ ಪ್ರದರ್ಶಿಸಿ ಹಣ, ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ಕಲಬುರಗಿಯ ಜಯನಗರ ಕಚೇರಿಯಲ್ಲಿ ನಡೆದಿದೆ.
ಮುತ್ತೂಟ್ ಫಿನ್ ಕಾರ್ಪಿನಲ್ಲಿ ನಡೆದ ದರೋಡೆ ವಿಚಾರ ತಿಳಿದ ಈಶಾನ್ಯ ವಲಯ ಐಜಿಪಿ ಬಿ. ಶಿವಕುಮಾರ್ ಹಾಗೂ ಎಸ್ ಪಿ ಅಮಿತ್ ಸಿಂಗ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಎಂ.ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ತಪಾಸಣೆ ನಡೆಯುತ್ತಿದೆ.[ಕೊಲ್ಲೂರು ಮೂಕಾಂಬಿಕೆ ದೇವಿಯ ಒಡವೆ ಕದ್ದ 5 ಮಂದಿಯ ಬಂಧನ]
ಆಟೋ ಕಾರು ಡಿಕ್ಕಿ, ಆಟೋ ಚಾಲಕ ಸ್ಥಳದಲ್ಲೇ ಸಾವು
ಬೆಂಗಳೂರು: ಆಟೋಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಪೆಪ್ಸಿ ಗೇಟ್ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ. ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾದ ಪರಿಣಾಮ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುತ್ ತಗುಲಿ ರೈತ ಸಾವು
ತುಮಕೂರು: ಅಡಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಘಟನೆ ತುಮಕೂರಿನ ಕೊಮ್ಮನಹಳ್ಳಿಯಲ್ಲಿ ನಡೆದಿದೆ. ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದ ವ್ಯಕ್ತಿಯನ್ನು ಕೊಮ್ಮನ ಹಳ್ಳಿಯ ಮಹದೇವಯ್ಯ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡಸಿದ ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಪ್ಪನಿಂದಲೇ ಮಗಳ ಮೇಲೆ ಅತ್ಯಾಚಾರ
ಕೋಲಾರ: ಯುವತಿಯೊಬ್ಬಳು ಸ್ವಂತ ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೆ ಒಳಗಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದೆ. ತೀರಾ ಅಸ್ವಸ್ಥಗೊಂಡ ಯುವತಿಯನ್ನು ಚಿಕಿತ್ಸೆಗಾಗಿ ಮಾಲೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.[ಅಪ್ರಾಪ್ತೆ ಮೇಲೆ ರೇಪ್, ಕೇರಳದ ಪಾದ್ರಿಗೆ 40 ವರ್ಷ ಜೈಲು]
ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಕೋಲಾರ: ಜೀವನದಲ್ಲಿ ಜಿಗುಪ್ಸೆ ಹೊಂದಿದ ಮಹಿಳೆಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಬೆಮಲ್ ನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಜ್ಯೋತಿ ಎಂದು ಗುರುತಿಸಲಾಗಿದೆ.[ಉತ್ತರಾದಿಮಠದ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ]