ಶನಿವಾರದ ಕರ್ನಾಟಕದ ಸಂಕ್ಷಿಪ್ತ ಸುದ್ದಿಗಳು
ಬೆಂಗಳೂರು, ಅ. 25 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 3 ಗಂಟೆ : ಆಸ್ತಿ ಕಲಹದ ಹಿನ್ನಲೆಯಲ್ಲಿ ಅಣ್ಣನ ಮಗನ ಮೇಲೆ ಚಿಕ್ಕಪ್ಪ ಗುಂಡಿನ ದಾಳಿ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡ ಶಿವನಗೌಡ ಅವರಿಗೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಮಯ 2 ಗಂಟೆ : ಆರ್ಕಿಡ್ಸ್ ಶಾಲಾ ಸಮೂಹ ಕಾರ್ಯದರ್ಶಿ ಕೆ.ಆರ್.ಕೆ.ರೆಡ್ಡಿ ಅವರನ್ನು ನ.5ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
ಸಮಯ 1 ಗಂಟೆ : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಹೈಕಮಾಂಡ್ಗೆ ಪತ್ರ ಬರೆಯುವಂತೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಒತ್ತಾಯಿಸಿದ್ದಾರೆ. ಶಿವಕುಮಾರ್ ಈಗಾಗಲೇ ಹಲವರು ಆರೋಪಗಳಲ್ಲಿ ಭಾಗಿಯಾಗಿದ್ದಾರೆ. ಇದರ ಸಮಗ್ರ ಮಾಹಿತಿ ನೀಡಿದ್ದರೂ ಮುಖ್ಯಮಂತ್ರಿಗಳು ಸಚಿವ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ನೀಡಿರುವುದು ತಪ್ಪು ಎಂದು ಹಿರೇಮಠ ಹೇಳಿದರು.
ಸಮಯ 12 ಗಂಟೆ : ಆರೋಗ್ಯ ಇಲಾಖೆ ನಿಭಾಯಿಸುವಲ್ಲಿ ಸಚಿವ ಯು.ಟಿ.ಖಾದರ್ ಅಸಮರ್ಥರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. [ವೈದ್ಯರ ಸಮಸ್ಯೆಗಳಿಗೆ ರಾಜೀನಾಮೆ ಪರಿಹಾರವಲ್ಲ]
ಸಮಯ 11 ಗಂಟೆ : 59ನೇ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಕುರಿತು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ಮಹತ್ವದ ಸಭೆ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಬಯಸಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು 59 ಸಾಧಕರಿಗೆ ಪ್ರಶಸ್ತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಸಮಯ 10.30 : ಕುಣಿಗಲ್ ತಾಲೂಕಿನ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ದೇವಾಲಯದ ಪ್ರಸಾದ ವಿತರಣೆಯಲ್ಲಿ ಮೋಸವಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ. ಕಳೆಪೆ ಗುಣಮಟ್ಟದ ಪ್ರಸಾದವನ್ನು ಭಕ್ತರಿಗೆ ಹಂಚಿರುವ ಆರೋಪಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ.