ಕರ್ನಾಟಕದ ಗುರುವಾರದ ತುಣುಕು ಸುದ್ದಿಗಳು
ಬೆಂಗಳೂರು, ಅ. 15 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 1 ಗಂಟೆ : ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಗಳು ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಮಂಗಳವಾರ ಸ್ವಾಮೀಜಿಗಳನ್ನು 6 ಗಂಟೆಗಳ ಕಾಳ ವಿಚಾರಣೆ ಮಾಡಲಾಗಿತ್ತು. ಇಂದು ಪುನಃ ವಿಚಾರಣೆ ನಡೆಯುತ್ತಿದೆ.
ಸಮಯ 12 ಗಂಟೆ : ಚೆಕ್ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಗೋಪಾಲಕೃಷ್ಣ ಶರ್ಮಾ ಅವರನ್ನು ಮಲ್ಲೇಶ್ವರಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸಮಯ 11 ಗಂಟೆ : ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದು, ಸಿಎಂ ಸಿದ್ದರಾಮಯ್ಯ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಅವರನ್ನು ಭೇಟಿ ಮಾಡಿ ನಿಗಮ ಮಂಡಳಿ ನೇಮಕ ಮತ್ತು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಹ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ.
ಸಮಯ 10 ಗಂಟೆ : ಹಾಸನ ಜಿಲ್ಲೆಯ ಪುರಾಣ ಪ್ರಸಿದ್ಧ ಹಾಸನಾಂಬ ಜಾತ್ರೆ ಗುರುವಾರ ಆರಂಭವಾಗಿದೆ. ಜಿಲ್ಲಾಡಳಿತ ದೇವಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಸಕಲ ವ್ಯವಸ್ಥೆಗಳನ್ನು ಮಾಡಿದೆ. ಈ ಬಾರಿ ಎಂಟು ದಿನ ಮಾತ್ರ ಹಾಸನಾಂಬೆ ದೇವಾಲಯದ ಬಾಗಿಲು ತೆರೆದಿರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ.
ಸಮಯ 9 ಗಂಟೆ : ಮೈಸೂರಿನಲ್ಲಿ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಜನರನ್ನು ಬಂಧಿಸಲಾಗಿದೆ ಮತ್ತು ನಜಾರಾಬಾದ್ ಠಾಣೆ ಎಸ್ಐ ನರೇಂದ್ರ ಅವರನ್ನು ಅಮಾನತು ಮಾಡಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ. ಬುಧವಾರ ಸಂಜೆ ರಶ್ಮಿ ಮಹೇಶ್ ಮೇಲೆ ಹಲ್ಲೆ ನಡೆದಿತ್ತು. [ರಶ್ಮಿ ಮಹೇಶ್ ಮೇಲೆ ಮೈಸೂರಿನಲ್ಲಿ ಹಲ್ಲೆ]
ಸಮಯ 8 ಗಂಟೆ : ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿಚಾರಣೆ ಇಂದು ಎರಡನೇ ಬಾರಿ ಸಿಐಡಿ ಕಚೇರಿಯಲ್ಲಿ ನಡೆಯಲಿದೆ. ಶ್ರೀಗಳ ವೈದ್ಯಕೀಯ ಪರೀಕ್ಷೆಯೂ ಇಂದು ನಡೆಯುವ ಸಾಧ್ಯತೆ ಇದೆ. ಅತ್ತ ಶ್ರೀಗಳ ಜಾಮೀನು ಅರ್ಜಿ ವಜಾ ಕೋರಿ ಹೈಕೋರ್ಟ್ಗೆ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಸೆಷೆನ್ಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ. [ಆರು ತಾಸು ಶ್ರೀಗಳ ವಿಚಾರಣೆ]
ಸಮಯ 7.30 : ದಾವಣಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರಾವತಿ ಎಂಬುವವರಿಗೆ ಬುಧವಾರ ಸಂಜೆ ಹೆರಿಗೆಯಾಗಿತ್ತು. ಆದರೆ, ಅವರಿಗೆ ಸರಿಯಾದ ಹಾಸಿಗೆ ಸೌಲಭ್ಯವನ್ನು ಆಸ್ಪತ್ರೆ ಸಿಬ್ಬಂದಿ ಒದಗಿಸಿರಲಿಲ್ಲ. ರಾತ್ರಿ ಬೆಡ್ ಮೇಲಿಂದ ಬಿದ್ದು ಮಗು ಮೃತಪಟ್ಟಿದ್ದು, ಇದಕ್ಕೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮಗುವಿನ ಪೋಷಕರು ಬಸವನಗರ ಪೊಲೀಸರಿಗೆ ದೂರು ನೀಡಿದ್ದಾರೆ.