ಕರ್ನಾಟಕದ ಮಂಗಳವಾರದ ತುಣುಕು ಸುದ್ದಿ
ಬೆಂಗಳೂರು, ನ. 25 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 3 ಗಂಟೆ : ಸೋಮವಾರ ಆಸಿಡ್ ದಾಳಿಯಿಂದ ಗಾಯಗೊಂಡಿರುವ ಗೌರಿಬಿದನೂರಿನ ಮಂಚೇನಹಳ್ಳಿ ಹೋಬಳಿಯ ಹಳೇ ಬುದ್ಧಿವಂತನಹಳ್ಳಿ ಗ್ರಾಮದ ವಾಸಿ ಲಕ್ಷ್ಮಮ್ಮ (41) ಅವರನ್ನು ಇಂದು ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಭೇಟಿ ಮಾಡಿ, ಒಂದು ಲಕ್ಷ ರೂ.ಗ ಪರಿಹಾರವನ್ನು ವಿತರಣೆ ಮಾಡಿದ್ದಾರೆ.
ಸಮಯ 2 ಗಂಟೆ : ತೀರ್ಥಹಳ್ಳಿಯ ಶಾಲಾ ಬಾಲಕಿ ನಂದಿತಾ ಸಾವಿನ ಪ್ರಕರಣದ ಕುರಿತ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಹಿರಂಗಗೊಂಡಿದ್ದು, ಆಕೆಯ ದೇಹದಲ್ಲಿ ಇಲಿ ಪಾಶಣದ ಅಂಶ ಪತ್ತೆಯಾಗಿದೆ.
ಸಮಯ 1 ಗಂಟೆ : ಕೇರಳದಲ್ಲಿ ಹಕ್ಕಿಜ್ವರ ಆರಂಭವಾಗಿರುವುದರಿಂದ ಪಶುಸಂಗೋಪನ ಸಚಿವ ಟಿ.ಬಿ. ಜಯಚಂದ್ರ ಅವರು ಮಂಗಳವಾರ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಸಮಯ 12 ಗಂಟೆ : ಬೆಂಗಳೂರಿನಲ್ಲಿ 'ಕಿಸ್ ಆಫ್ ಲವ್' ಆಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ
ಸಮಯ 11 ಗಂಟೆ : ನಿಗಮ-ಮಂಡಳಿ ನೇಮಕಾತಿ ಪಟ್ಟಿ ಬಹಿರಂಗಗೊಂಡ ಬಳಿಕ ಕಾಂಗ್ರೆಸ್ನಲ್ಲಿ ಹುಟ್ಟಿಕೊಂಡ ಭಿನ್ನಮತಕ್ಕೆ ಶಮನಕ್ಕೆ ನಾಯಕರು ಮುಂದಾಗಿದ್ದು, ಮಂಗಳವಾರ ಶಿವಕುಮಾರ್ ಶೆಟ್ಟಿ ಅವರ ನೇಮಕವನ್ನು ಅಮಾನತುಗೊಳಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಸಮಯ 10 ಗಂಟೆ : ಮಲ್ಪೆಯಲ್ಲಿನ ಕರಾವಳಿ ಕಾವಲು ಪಡೆ ಕಟ್ಟಡ ಹಾಗೂ ವಸತಿಗೃಹ ಉದ್ಘಾಟನೆಗೆ ಆಗಮಿಸಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ ಘಟನೆ ಮಂಗಳವಾರ ನಡೆದಿದೆ. ನೂರಾರು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ , ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಸಮಯ 9 ಗಂಟೆ : ಗೌರಿಬಿದನೂರಿನ ಮಂಚೇನಹಳ್ಳಿ ಹೋಬಳಿಯ ಹಳೇ ಬುದ್ಧಿವಂತನಹಳ್ಳಿ ಗ್ರಾಮದ ವಾಸಿ ಲಕ್ಷ್ಮಮ್ಮ (41) ಎಂಬುವವರ ಮೇಲೆ ಸೋಮವಾರ ಆಸಿಡ್ ದಾಳಿ ನಡೆಸಲಾಗಿತ್ತು. ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ಗೌರಿಬಿದನೂರು ಆಸ್ಪತ್ರೆಗೆ ಭೇಟಿ ನೀಡಿದ್ದು, ಲಕ್ಷ್ಮಮ್ಮ ಆರೋಗ್ಯ ವಿಚಾರಿಸಿದ್ದಾರೆ.
ಸಮಯ 8 ಗಂಟೆ : ಎಟಿಎಂ ದರೋಡೆ ಮಾಡಲು ಅಡ್ಡಿಪಡಿಸಿದ ಸೆಕ್ಯುರಿಟಿ ಗಾರ್ಡ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಗಂಗಮ್ಮನ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಚ್ಡಿಎಫ್ಸಿ ಬ್ಯಾಂಕ್ ಭದ್ರತಾ ಸಿಬ್ಬಂದಿ ಐಯಣ್ಣ ಅವರ ತಲೆಗೆ ರಾಡ್ನಿಂದ ಮುಂಜಾನೆ 2 ಗಂಟೆ ಸುಮಾರಿಗೆ ಹಲ್ಲೆ ಮಾಡಲಾಗಿದೆ. ಅಕ್ಕ-ಪಕ್ಕದ ಎಟಿಎಂಗಳಲ್ಲಿದ್ದ ಭದ್ರತಾ ಸಿಬ್ಬಂದಿ ಆಗಮಿಸಿದ್ದನ್ನು ಕಂಡು ದರೋಡೆಕೋರರು ಪರಾರಿಯಾಗಿದ್ದಾರೆ.
ಸಮಯ 7.30 ಗಂಟೆ : ಬೆಂಗಳೂರಿನಿಂದ ಶಿಕಾರಿಪುರಕ್ಕೆ ಹೊರಟಿದ್ದ ಖಾಸಗಿ ಬಸ್ ತರೀಕೆರೆಯ ಕಟ್ಟೆ ಹೊಳೆ ಬಳಿ ಉರುಳಿಬಿದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಶಿಕಾರಿಪುರ ಮತ್ತು ಸೊರಬ ಮೂಲದವರು ಎಂದು ಗುರುತಿಸಲಾಗಿದೆ.