'ಎತ್ತಿನಹೊಳೆ ಯೋಜನೆ ವಿರೋಧಕ್ಕೆ ಅರ್ಥವಿಲ್ಲ'
ಹುಬ್ಬಳ್ಳಿ, ಮೇ. 18 : ಒಂದೆಡೆ ಎತ್ತಿನಹೊಳೆ ಯೋಜನೆ ವಿರೋಧಿಸಿ ಕರೆ ನೀಡಲಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಗುರುವಾರ ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಿದ್ದು ಉತ್ತಮ ಬೆಂಬಲ ಸಿಗುತ್ತಿದೆ.
ಆದರೆ ಎತ್ತಿನಹೊಳೆ ಲಾಭ ಮತ್ತು ನಷ್ಟಗಳ ಬಗ್ಗೆ ಕರ್ನಾಟಕ ನೀರಾವರಿ ವೇದಿಕೆ ಅಧ್ಯಕ್ಷ ಡಾ.ಮಧು ಸೀತಪ್ಪ ಒನ್ ಇಂಡಿಯಾದೊಂದಿಗೆ ಮಾತನಾಡಿದ್ದಾರೆ. ಬಂದ್ ಮಾಡುವುದರಿಂದ ಯಾವುದೇ ಲಾಭವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.[ಚಿತ್ರಗಳು : ದಕ್ಷಿಣ ಕನ್ನಡ ಬಂದ್ಗೆ ಭಾರೀ ಬೆಂಬಲ]
ನೀರನ್ನು ನೇತ್ರಾವತಿ ಯಿಂದ ಬಯಲುಸೀಮೆಗೆ ಕೊಡುವುದಿಲ್ಲ ಎಂದು ಹೋರಾಟಗಾರರು ನಿಲುವು ತೆಗೆದುಕೊಂಡಲ್ಲಿ ಅದನ್ನು ಕರ್ನಾಟಕ ನೀರಾವರಿ ವೇದಿಕೆ ಸಂಪೂರ್ಣವಾಗಿ ವಿರೋಧಿಸುತ್ತದೆ. ಎತ್ತಿನಹೊಳೆ ಯೋಜನೆಯನ್ನು ವೈಜ್ಞಾನಿಕವಾಗಿ ಪರಿವರ್ತಿಸಿದರೆ ಬಯಲುಸೀಮೆಗೆ ಮಳೆಗಾಲದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬಹುದು. ಈಗಿರುವ ಯೋಜನೆಯಿಂದ ಬಯಲುಸೀಮೆಗೆ ಕೇವಲ 7 ಟಿಎಂಸಿ ನೀರನ್ನು ಮಾತ್ರ ನೀಡಬಹುದು ಎಂದರು. [ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]
ಬಯಲುಸೀಮೆ ನೀರಾವರಿ ಮಂಡಳಿಯ ಬದಲು ದಕ್ಷಿಣ ಕನ್ನಡ ಜಿಲ್ಲೆಯ ಹೋರಾಟಗಾರರ ಬೇಡಿಕೆಯಾದ ನೇತ್ರಾವತಿ ನದಿ ನಿಗಮ ಸ್ಥಾಪನೆಗೆ ನಮಗೆ ಯಾವುದೇ ವಿರೋಧವಿಲ್ಲ. ಒಂದು ಟಿಎಂಸಿ ಸಾಮರ್ಥ್ಯದಲ್ಲಿ ಬೆಟ್ಟ ಕುಮರಿ ಜಲಾಶಯ ನಿರ್ಮಿಸಿದಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿ ಎರಡು ಭಾಗದ ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬಹುದು.
ನದಿಯ ಸ್ವಾಭಾವಿಕ ಹರಿವು ಹಾಗೂ ಉಪ್ಪಿನಾಂಶಕ್ಕೆ ಯಾವುದೇ ಧಕ್ಕೆ ಬರದಂತೆ ಯೋಜನೆಯನ್ನು ಪರಿವರ್ತಿಸಬಹುದು. ಇದಲ್ಲದೇ ಪಶ್ಚಿಮಘಟ್ಟಗಳಲ್ಲಾಗುವ ಮರಗಳ್ಳತನ, ಅಕ್ರಮ ಒತ್ತುವರಿ, ಬೆಂಕಿ ಅನಾಹುತವನ್ನು ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳವಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.
ಪಶ್ಚಿಮ ಘಟ್ಟಗಳ ಜೀವ ವೈವಿಧ್ಯಮಯತೆಯನ್ನು ಕಾಪಾಡಲು ಖಾಸಗಿ ಕಾಫಿ ಹಾಗೂ ಅಡಿಕೆ ಎಸ್ಟೇಟುಗಳನ್ನು ಸರ್ಕಾರ ಭೂಸ್ವಾಧೀನ ಮಾಡಿ ಅರಣ್ಯ ಇಲಾಖೆಗೆ ವರ್ಗಾಯಿಸಲು ಬೇಕು ಹಾಗೂ Bio diversity research centre ನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಬೇಕು. ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಪ್ರತಿ ವರ್ಷ ರಾಜ್ಯದ ಬಜೆಟನಲ್ಲಿ ಸಾವಿರ ಕೋಟಿ ರೂ. ಗಳನ್ನು ಮುಡಿಪಾಗಿಡಬೇಕು ಎಂದು ಕರ್ನಾಟಕ ನೀರಾವರಿ ವೇದಿಕೆ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.
ಒಂದು ವೇಳೆ ಹೋರಾಟಗಾರರು ಒಂದು ಹನಿ ನೀರು ನೀಡಲ್ಲ ಎಂದು ನಿಲುವು ತೆಗೆದುಕೊಂಡಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಜನ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುಂಡ್ಯಾ ಜಲವಿದ್ಯುತ್ ಯೋಜನೆಗೆ ಒಪ್ಪಿಗೆ ಕೊಡಲಿ, ಬಯಲುಸೀಮೆಗೆ ಇದೇ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಬೇಕಾಗುವ ನೀರನ್ನು ಲಿಂಗನಮಕ್ಕಿ(ಶರಾವತಿ)ಯಿಂದ ಸರ್ಕಾರ ಪೂರೈಸಲಿ ಎಂಬ ಒತ್ತಾಯವನ್ನು ಮುಂದೆ ಇಟ್ಟಿದ್ದಾರೆ.
ಎತ್ತಿನಹೊಳೆ ಯೋಜನೆಯನ್ನು ವೈಜ್ಞಾನಿಕವಾಗಿ ಪರಿವರ್ತಿಸಿ ಎರಡೂ ಭಾಗಕ್ಕೆ ಕುಡಿಯುವ ನೀರಿನ ಯೋಜನೆ ಅಥವಾ ಗುಂಡ್ಯಾ ಜಲವಿದ್ಯುಯತ್ ಯೋಜನೆಗೆ ದಕ್ಷಿಣ ಕನ್ನಡ ದ ಹೋರಾಟಗಾರರು ನಿಲುವು ತೆಗೆದುಕೊಂಡಲ್ಲಿ ಎರಡೂ ಭಾಗದ ಜನ ಈ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.