ಕಾರಿನಲ್ಲಿ ಕೆಂಪುದೀಪ ತೆಗೆದ್ರೆ ಬಡತನ ಹೋಗುತ್ತಾ: ಸಚಿವ ಖಾದರ್ ಗೆ 5 ಪ್ರಶ್ನೆ
ಗೂಟದ ಕಾರಿನಲ್ಲಿ ಕೆಂಪುದೀಪ ತೆಗೆದ ಮಾತ್ರಕ್ಕೆ ಬಡತನ ನಿರ್ಮೂಲನೆ ಆಗುತ್ತದೆಯೇ ಎನ್ನುವ ಸಚಿವ ಯು ಟಿ ಖಾದರ್ ಅವರಿಗೆ ಒಂದೈದು ಪ್ರಶ್ನೆಗಳು.
ಮೇ ಒಂದರಿಂದ ಅನ್ವಯವಾಗುವಂತೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಲೋಕಸಭಾ ಸ್ಪೀಕರ್, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಬೇರೆ ಯಾರೂ ಗೂಟದ ಕಾರನ್ನು (ಕೆಂಪು ದೀಪದ ವಾಹನ) ಬಳಸುವಂತಿಲ್ಲ ಎಂದು ಕೇಂದ್ರ ಸರಕಾರ ಆದೇಶ ಹೊರಡಿಸಿರುವುದು ಗೊತ್ತೇ ಇದೆ.
ಬಿಜೆಪಿ ಸರಕಾರವಿರುವ ರಾಜ್ಯಗಳು ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದರೆ, ಉಳಿದ ಕೆಲವು ರಾಜ್ಯಗಳಲ್ಲಿ ಉದಾಹರಣೆಗೆ ಬಿಹಾರ, ಕರ್ನಾಟಕ ಮುಂತಾದೆಡೆ ಕೇಂದ್ರ ಸರಕಾರದ ನಿರ್ಧಾರಕ್ಕೆ ಒಕ್ಕೂರಿಲಿನ ಬೆಂಬಲವಂತೂ ಸಿಗಲಿಲ್ಲ. [ಅಯ್ಯಪ್ಪ ಮಾಲಾಧಾರಿಗಳಿಗೆ ಆಪತ್ಬಾಂಧವರಾದ ಖಾದರ್]
ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ಸಚಿವ ಮತ್ತು ಸರಳ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ಯು ಟಿ ಖಾದರ್, ಕೇಂದ್ರದ ನಿರ್ಧಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿ ಸರಕಾರೀ ಕಾರು ಬಳವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.. ಹಾಗಂತ ಸುದ್ದಿ!!
ಕೆಂಪುದೀಪ ನನ್ನ ತಲೆ ಮೇಲೆ ಇದೆಯಾ, ನನಗೆ ಅದು ರಾಜ್ಯ ಸರಕಾರ ಕೊಟ್ಟಿರುವ ಕಾರು. ಕೆಂಪುದೀಪವನ್ನು ಬೇಕಿದ್ದರೆ ಸರಕಾರವೇ ತೆಗೆಯಲಿ ಎಂದು ಖಾದರ್ ಪ್ರತಿಕ್ರಿಯಿಸಿದ್ದರು.
ಇಷ್ಟೇ ಅಲ್ಲದೆ ಕಾರಿನಲ್ಲಿ ಕೆಂಪುದೀಪ ತೆಗೆದ ಮಾತ್ರಕ್ಕೆ ಬಡವರು ಶ್ರೀಮಂತರಾಗುತ್ತಾರಾ? ಬಡತನ ನಿರ್ಮೂಲನೆ ಆಗುತ್ತದೆ ಅಂದರೆ ಕೆಂಪುದೀಪವನ್ನು ಈಗಲೇ ತೆಗೆಸುತ್ತೇನೆ. ಸರಕಾರವೇ ಕೆಂಪುದೀಪ ತೆಗೆಯುವ ತನಕ ನನ್ನ ಸ್ವಂತ ಕಾರನ್ನು ಬಳಸುತ್ತೇನೆ ಎನ್ನುವ ನಿರ್ಧಾರಕ್ಕೆ ಸಚಿವ ಖಾದರ್ ಬಂದಿದ್ದಾರೆ. ಸಚಿವ ಖಾದರ್ ಅವರಿಗೆ ಒಂದೈದು ಪ್ರಶ್ನೆಗಳು
ಬಡತನ ಮುಕ್ತ
ಕಾರಿನಲ್ಲಿ ಕೆಂಪುದೀಪ ತೆಗೆದ ಮಾತ್ರಕ್ಕೆ ಬಡತನ ನಿರ್ಮೂಲನೆ ಆಗುವುದಿಲ್ಲ ಎನ್ನುವುದು ಒಪ್ಪಿಕೊಳ್ಳುವ ಮಾತಾದರೂ, ಸ್ವಾತಂತ್ರ್ಯಾನಂತರ ಬಹುತೇಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ನವರು ಕೆಂಪುದೀಪ ಬಳಸುತ್ತಿದ್ದರೂ, ಬಡತನ ಯಾಕೆ ನಿರ್ಮೂಲನೆಯಾಗಿಲ್ಲ. ಬಡತನ ನಿರ್ಮೂಲನೆಗೂ, ಕೆಂಪುದೀಪಕ್ಕೂ ಒಂದಕ್ಕೊಂದು ತಾಳೆಹಾಕುವುದು ಸರಿಯೇ?
ಪಕ್ಷದ ಹಿರಿಯ ಮುಖಂಡರು
ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಚಿವ ಸಂಪುಟದ ಹಿರಿಯ ಸದಸ್ಯರಾದ ಡಾ. ಪರಮೇಶ್ವರ್, ಟಿ ಬಿ ಜಯಚಂದ್ರ ಮುಂತಾದ ಸಚಿವರು ತಾವೇ ಖುದ್ದಾಗಿ ನಿಂತು ಕೆಂಪುದೀಪ ತೆಗೆಸಿದ್ದಾಗ, ನಿಮ್ಮ ಕಾರಿನಿಂದ ದೀಪ ತೆಗೆಯಲು ಅದ್ಯಾವ ಶಕ್ತಿ ನಿಮ್ಮನ್ನು ತಡೆಯುತ್ತಿದೆ?
ಕೆಂಪುದೀಪ ತೆಗೆಯುವ ವಿಚಾರದಲ್ಲಿ ಅನಾವಶ್ಯಕ ಗೊಂದಲ ಯಾಕೆ?
ಕೆಂಪುದೀಪ ತೆಗೆಯುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದ್ದು, ವಿಐಪಿ ಸಂಸ್ಕೃತಿಯನ್ನು ತೊಡೆದು ಹಾಕಲು ಎಂದು ಪ್ರಧಾನಿ ಮೋದಿ ಅತ್ಯಂತ ಸ್ಪಷ್ಟವಾಗಿ ಹೇಳಿದ್ದರೂ, ಜೊತೆಗೆ ನೀವು ಸರಳ ವ್ಯಕ್ತಿತ್ವದವರಾಗಿದ್ದರೂ, ಕೆಂಪುದೀಪ ತೆಗೆಯುವ ವಿಚಾರದಲ್ಲಿ ಅನಾವಶ್ಯಕ ಗೊಂದಲ ನಿಮ್ಮಿಂದ ಯಾಕೆ ಸೃಷ್ಟಿಯಾಗುತ್ತಿದೆ?
ಕೇಂದ್ರ ಸರಕಾರದ ಆದೇಶ
ಬೇಕಾದರೆ ಕೇಂದ್ರ ಸರಕಾರ ಈ ಕಾನೂನನ್ನು ಪಾಲಿಸಲಿ, ನಮಗೆ ಹೇಳಲು ಇವರ್ಯಾರು? ನಮಗೆ ಬೇಕಾದ ಕಾನೂನನ್ನು ನಾವೇ ರೂಪಿಸಿಕೊಳ್ಳುತ್ತೇವೆ ಎನ್ನುವುದು ನಿಮ್ಮ ನಿಲುವೇ?
ಕೇಂದ್ರದಲ್ಲಿ ಯುಪಿಎ ಸರಕಾರವಿದ್ದರೆ
ಒಂದು ವೇಳೆ ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಯುಪಿಎ ಸರಕಾರ ಈ ಕೆಂಪುದೀಪ ತೆಗೆಯುವ ಕಾನೂನು ಜಾರಿಗೆ ತಂದಿದ್ದರೆ, ನಿಮ್ಮಿಂದ ಇಂತಹ ಹೇಳಿಕೆಗಳು ಬರುತ್ತಿತ್ತೇ?