ಲಾಟರಿ ಹಗರಣ ತನಿಖೆಯಿಂದ ಸಿಬಿಐ ಹಿಂದಕ್ಕೆ?
ಬೆಂಗಳೂರು, ಜು. 05: ಲಾಟರಿ ಹಗರಣದ ತನಿಖೆ ಕೈಗೆತ್ತಿಕೊಳ್ಳಲು ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆಕೆಲ ಅಡಚಣೆಗಳು ಎದುರಾಗಿವೆ. ಸಿಬಿಐ ಅಧಿಕಾರಿಗಳಿಗೆ ಎಲ್ಲಿಂದ ತನಿಖೆ ಆರಂಭ ಮಾಡಬೇಕು ಎಂಬುದು ತಲೆನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ 2007ರಲ್ಲೇ ಲಾಟರಿ ನಿಷೇಧವಾಗಿದ್ದು, ಅಂದಿನಿಂದಲೇ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಸಿಬಿಐಗೆ ಮಾಡಿದ್ದ ಶಿಫಾರಸಿನಲ್ಲಿ ಹೇಳಿತ್ತು. ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಯು ಇನ್ನೂ ಕೇಂದ್ರ ಗೃಹ ಸಚಿವಾಲಯದ ಮಟ್ಟದಲ್ಲೇ ಇದೆ. ಪ್ರಕರಣ ಸುದೀರ್ಘ ಅವಧಿಯಿಂದ ಕೂಡಿರುವುದರಿಂದ ತನಿಖೆ ನಡೆಸಲು ಸಿಬಿಐ ನಿರಾಕರಿಸಿದೆ ಎಂದು ಹೇಳಲಾಗಿದೆ. [ಒಂದಂಕಿ ಲಾಟರಿ ಹಗರಣ, ಸಿಬಿಐ ತನಿಖೆ ಎಲ್ಲಿಗೆ ಬಂತು?]
ಕಡಿಮೆ ಅವಧಿಯ ಪ್ರಕರಣಗಳನ್ನು ಮಾತ್ರ ಸಿಬಿಐ ಸಾಮಾನ್ಯವಾಗಿ ತನಿಖೆಗೆ ಎತ್ತಿಕೊಳ್ಳುತ್ತದೆ. ಎಂಟು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರಕರಣ ತನಿಖೆ ನಡೆಸಲು ಸಾಕಷ್ಟು ಸಮಯ ಹಿಡಿಯುವುದರಿಂದ ಸಿಬಿಐ ಹಿಂದಕ್ಕೆ ಸರಿಯುವ ಸಾಧ್ಯತೆ ಹೆಚ್ಚಾಗಿದೆ.[ಲಾಟರಿ ಹಗರಣ ಕಿಂಗ್ ಪಿನ್ ಪುತ್ರ ಬಿಜೆಪಿಗೆ ಸೇರ್ಪಡೆ]
ಒಂದಕಿ ಲಾಟರಿ ಹಗರಣದಲ್ಲಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದು ಸರ್ಕಾರಕ್ಕೆ ಮುಜುಗರ ತಂದಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಕೂಗು ರಾಜ್ಯಾದ್ಯಂತ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಗೆ ಶಿಫಾರಸು ಮಾಡಿತ್ತು.