65 ಟಿಎಂಸಿಯಲ್ಲಿ 50 ಟಿಎಂಸಿ ಕೊಟ್ಟರೆ ಉಳಿಯುವುದೆಷ್ಟು!?
ಬೆಂಗಳೂರು, ಆಗಸ್ಟ್, 22: ಸಾಲ ಮಾಡಿ ಕೈ ಖಾಲಿ ಮಾಡಿ ಕುಳಿತುಕೊಂಡವನ ಬಳಿ ಬಂದು ಸಾಲ ಕೇಳಿದರೆ ಹೇಗಿರುತ್ತದೆ? ಹೌದು ಸೋಮವಾರ ತಮಿಳುನಾಡು ಅಂಥದ್ದೊಂದು ಕೆಲಸ ಮಾಡಿದೆ.
ಮಳೆ ಕೊರತೆಯಿಂದ ಈ ಬಾರಿ ಕಾವೇರಿ ಕೊಳ್ಳದ ಯಾವ ಜಲಾಶಯಗಳು ಭರ್ತಿಯಾಗಿಲ್ಲ. ನಮ್ಮ ಬಳಿಯೇ ನೀರಿನ ಸಂಗ್ರಹ ಇಲ್ಲದೇ ರೈತರ ಕೃಷಿ ಕಾರ್ಯಕ್ಕೆ ನೀರು ನೀಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತುಕೊಂಡಿರುವಾಗ ತಮಿಳುನಾಡು ಬರೋಬ್ಬರಿ 50.52 ಟಿಎಂಸಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.[ಕಾವೇರಿ ನೀರಿಗೆ ಸುಪ್ರೀಂನಲ್ಲಿ ತಮಿಳುನಾಡು ಕ್ಯಾತೆ]
ಹಾಗಾದರೆ ಈ ಬಾರಿ ನಿಜಕ್ಕೂ ಕಾವೇರಿ ಕೊಳ್ಳದಲ್ಲಿ ಎಷ್ಟು ನೀರಿದೆ? ತಮಿಳುನಾಡು ಕೇಳಿದ್ದು ಎಷ್ಟು? ಇದು ನ್ಯಾಯವೇ? ಉತ್ತರ ನೀವೇ ಹೇಳಿ...
ಮಳೆ ಇಲ್ಲ
ಕಾವೇರಿ ಕೊಳ್ಳದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದ ಮಳೆ ಬಿದ್ದಿಲ್ಲ. ಈಗಾಗಲೇ ಆಗಸ್ಟ್ ಅಂತ್ಯ ಸಮೀಪಿಸಿದ್ದು ಇನ್ನು ಮಳೆಯಾಗುವುದು ಅನುಮಾನವೇ? ಹಾಗಾಗಿ ಕರ್ನಾಟಕ ಮತ್ತು ತಮಿಳುನಾಡು ಈ ಬಾರಿ ಮತ್ತೆ ನೀರಿಗೆ ಹೋರಾಟ ಮಾಡುವುದರಲ್ಲಿ ಅನುಮಾನ ಇಲ್ಲ.
ಎಷ್ಟು ನೀರಿದೆ?
ಪ್ರಸ್ತುತ ಕೆಆರ್ಎಸ್ನಲ್ಲಿ 96.90 ಅಡಿ ನೀರಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ! ಅಂದರೆ 20.48 ಟಿಎಂಸಿ ನೀರಿದೆ. ಕಳೆದ ವರ್ಷ ಇದೆ ವೇಳೆಗೆ ಜಲಾಶಯದಲ್ಲಿ 29.20 ಟಿಎಂಸಿ ನೀರಿತ್ತು.
ಒಟ್ಟು ಲೆಕ್ಕ
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಾದ ಕೆಆರ್ ಎಸ್-20.48 ಟಿಎಂಸಿ, ಕಬಿನಿ-15.27 ಟಿಎಂಸಿ, ಹೇಮಾವತಿ-21.55 ಟಿಎಂಸಿ ಮತ್ತು ಹಾರಂಗಿಯಲ್ಲಿ 7.85 ಟಿಎಂಸಿ ನೀರಿದೆ. ಅಂದರೆ ಒಟ್ಟು 65.15 ಟಿಎಂಸಿ ನೀರಿನ ಶೇಖರಣೆ ಇದೆ.
ತಮಿಳುನಾಡು ಕೇಳಿದ್ದು 50.52 ಟಿಎಂಸಿ!
ಕರ್ನಾಟಕದ ಬಳಿ ಇರುವುದೇ 65.15 ಟಿಎಂಸಿ ನೀರು ಅದರಲ್ಲಿ ತಮಿಳುನಾಡು ಕೇಳಿರುವುದು 50.52 ಟಿಎಂಸಿ! ಕಾವೇರಿ ಕೊಳ್ಳದಲ್ಲಿ ಇನ್ನು ಭಾರೀ ಮಳೆಯಾಗುವ ನಿರೀಕ್ಷೆ ಸಹ ಇಲ್ಲವಾಗಿದೆ.
ಆಗಸ್ಟ್ 30ರ ತನಕ ಮಾತ್ರ ನೀರು
ಕೆಆರ್ಎಸ್ ಜಲಾಶಯದಿಂದ ಕೃಷಿ ಚಟುವಟಿಕೆಗಳಿಗೆ ಆಗಸ್ಟ್ 30ರ ತನಕ ಮಾತ್ರ ನೀರು ಪೂರೈಸಲಾಗುತ್ತದೆ. ಬೆಂಗಳೂರಿನಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೃಷ್ಣರಾಜ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಆಗಸ್ಟ್ 30ರ ತನಕ ನೀರು ಪೂರೈಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು.