ಸರ್ಕಾರದಿಂದಲೇ ನಾರಾಯಣ ಗುರು ಜಯಂತಿ ಆಚರಣೆ
ಬೆಂಗಳೂರು, ಆಗಸ್ಟ್ 24 : ಕರ್ನಾಟಕ ಸರ್ಕಾರದ ವತಿಯಿಂದಲೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಸೆಪ್ಟೆಂಬರ್ 16ರಂದು ನಾರಾಯಣ ಗುರುಗಳ 162ನೇ ಜಯಂತಿಯನ್ನು ಆಚರಿಸಲಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ. 'ಪ್ರತಿ ವರ್ಷ ಸರ್ಕಾರದ ವತಿಯಿಂದಲೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಣೆ ಮಾಡಲಾಗುವುದು' ಎಂದು ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.[ಸೆ.25ರಂದು ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ]
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಮುಖ್ಯಮಂತ್ರಿಗಳು, ಈ ವರ್ಷ ಸೆ. 16ರಂದು ನಾರಾಯಣ ಗುರುಗಳ 162ನೇ ಜಯಂತಿಯನ್ನು ಆಚರಣೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ.
ನಾರಾಯಣ ಗುರುಗಳು ಯಾರು? : ಕೇರಳದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರುಗಳು ಸಮಾಜಕ ಸುಧಾರಕರಾಗಿ ಉದಯಿಸಿದರು. ತಮ್ಮ ಸಂಪೂರ್ಣ ಜೀವನವನ್ನು ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಮುಡಿಪಾಗಿಟ್ಟರು.[ನಾರಾಯಣ ಗುರುಗಳ ಬಗ್ಗೆ ಓದಿ]
ನಾರಾಯಣ ಗುರುಗಳು ಜಗತ್ತಿನಲ್ಲಿರುವುದು 'ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು' ಎಂದ ತತ್ವವನ್ನು ಪ್ರತಿಪಾದಿಸಿದರು. ಸಂಸ್ಕೃತ ಭಾಷಾ ಪಂಡಿತರಾಗಿದ್ದ ಅವರು, 'ದೇಶಸೇವೆಯೇ ಈಶ ಸೇವೆಯೆಂದು' ಬೋಧನೆ ಮಾಡಿದರು.