ಕರ್ನಾಟಕದಲ್ಲಿ ರೆವೆನ್ಯೂ ಸ್ಟಾಂಪ್ ಬಳಕೆ ಪುನರಾರಂಭ
ಬೆಂಗಳೂರು, ನ 22: ರೆವಿನ್ಯೂ ಸ್ಟ್ಯಾಂಪ್ ವಿಚಾರದಲ್ಲಿರುವ ಗೊಂದಲಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ. ರೆವಿನ್ಯೂ ಸ್ಟ್ಯಾಂಪ್ ಮೇಲಿನ ನಿಷೇಧ ವಾಪಸ್ ಪಡೆಯಲು ರಾಜ್ಯ ಸರಕಾರ ನಿರ್ಧರಿಸಿದೆ.
ನಿಷೇಧ ವಾಪಸ್ ಕುರಿತಂತೆ ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು. 1, 2 ಮತ್ತು 5 ರೂಪಾಯಿ ಮುಖಬೆಲೆಯ ಸ್ಟ್ಯಾಂಪ್ ಗಳನ್ನು ಮರುಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ಅಬ್ದುಲ್ ಕರೀಂಲಾಲ್ ತೆಲಗಿ ಸೃಷ್ಟಿಸಿದ್ದ ಬಹುಕೋಟಿ ಮೌಲ್ಯದ ಛಾಪಾಕಾಗದ ಹಗರಣದ ನಂತರ ರೆವಿನ್ಯೂ ಸ್ಟ್ಯಾಂಪ್ ಬಳಕೆಯನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು.
ಈ ಬಗ್ಗೆ ಸ್ಪಷ್ಟೀಕರಣ ನೀಡಿ ಮಾತನಾಡುತ್ತಿದ್ದ ಸಚಿವರು, ರಾಜ್ಯ ಸರಕಾರ ರೆವಿನ್ಯೂ ಸ್ಟ್ಯಾಂಪ್ ನಿಷೇಧಿಸಿದ್ದರೂ, ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ರಾಜ್ಯ ಸರಕಾರದ ಅಧೀನದ ಕಂದಾಯ ಇಲಾಖೆಯ ವ್ಯವಹಾರಗಳಲ್ಲಿ ಈ ಪದ್ದತಿ ಚಾಲ್ತಿಯಲ್ಲಿದ್ದವು ಎಂದಿದ್ದಾರೆ.
ಇದರಿಂದಾಗಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನಿಗದಿತ ಬೆಲೆಗಿಂತ ಐದು ಪಟ್ಟು ಅಥವಾ ಹತ್ತು ಪಟ್ಟು ಹೆಚ್ಚು ದರದಲ್ಲಿ ರೆವಿನ್ಯೂ ಸ್ಟ್ಯಾಂಪ್ ಗಳು ಮಾರಾಟವಾಗುತ್ತಿದ್ದವು.
ಹಾಗಾಗಿ, ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧರಿಸಲಾಗಿದೆ. ನಿಷೇಧ ಹಿಂದಕ್ಕೆ ಪಡೆಯುವ ಆದೇಶವನ್ನು ಸದ್ಯದಲ್ಲೇ ಹೊರಡಿಸಲಾಗುವುದು ಎಂದು ಸಚಿವ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ರೆವಿನ್ಯೂ ಸ್ಟ್ಯಾಂಪ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎಂದು ಆರೋಪಿಸಿ, ಎಸ್ ವಿ ದೇಸಾಯಿ ಎನ್ನುವವರು ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ವಘೇಲಾ ಮತ್ತು ನ್ಯಾ ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ, ರಾಜ್ಯದಲ್ಲಿ ರೆವಿನ್ಯೂ ಸ್ಟ್ಯಾಂಪ್ ಬಳಕೆ ನಿಷೇಧಕ್ಕೆ ಕಾರಣಗಳೇನು ಎಂದು ಆರ್ ಟಿ ಐ ಕಾಯ್ದೆ ಅನ್ವಯ ಮಾಹಿತಿ ಪಡೆದುಕೊಳ್ಳಲು ಅರ್ಜಿದಾರರಿಗೆ ಸೂಚಿಸಿದ್ದರು.