ಬಿಎಸ್ ಯಡಿಯೂರಪ್ಪ ರಾಜ್ಯ ರಾಜಕಾರಣಕ್ಕೆ ಮರಳಿದರೆ?
ತುಮಕೂರು, ಸೆಪ್ಟೆಂಬರ್.04: ಸಂಸದರಾಗಿ ಆಯ್ಕೆಯಾಗಿ ತೆರಳಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಮತ್ತೆ ಕ್ರೀಯಾಶೀಲರಾಗಿದ್ದಾರೆಯೇ. ಬಿಎಸ್ ವೈ ನೇತೃತ್ವದಲ್ಲಿ ನಡೆಯುತ್ತಿರುವ ರೈತ ಚೈತನ್ಯ ಯಾತ್ರೆ ಇದಕ್ಕೆ ಹೌದು ಎಂಬ ಉತ್ತರ ನೀಡುತ್ತದೆ.
ಇತ್ತ ರಾಜಧಾನಿ ಬೆಂಗಳೂರಲ್ಲಿ ಬಿಬಿಎಂಪಿ ಗದ್ದುಗೆ ರಾಜಕಾರಣ ಜೋರಾಗಿದ್ದರೆ ಅತ್ತ ಮಾಜಿ ಮುಖ್ಯಮಂತ್ರಿ, ಸಂಸದ ಬಿ. ಎಸ್ . ಯಡಿಯೂರಪ್ಪ ರೈತರಿಗೆ ಸಾಂತ್ವನ ಹೇಳುತ್ತಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರೈತ ಚೈತನ್ಯ ಯಾತ್ರೆ ವಿವಿಧ ಜಿಲ್ಲೆಗಳನ್ನು ಸುತ್ತುಹಾಕುತ್ತಿದೆ.
ತುಮಕೂರಿನ ಸಿದ್ಧಗಂಗಾ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಿಎಸ್ ವೈ ಹೆಬ್ಬೂರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ನಡೆದ ಸಮಾವೇಶಕ್ಕೂ ಸಾವಿರಾರು ಜನ ಆಗಮಿಸಿದ್ದರು.[70ರ ಹರೆಯದ ಯಡಿಯೂರಪ್ಪ ಅಸೆಂಬ್ಲಿಯಲ್ಲಿ ಏನಾದ್ರೂ ಇದ್ದಿದ್ದರೆ!]
ಕಾಂಗ್ರೆಸ್ ಪಕ್ಷ ಮತ್ತು ಆಡಳಿತದ ಮೇಲೆ ವಾಗ್ದಾಳಿ ಮಾಡಿದ ಯಡಿಯೂರಪ್ಪ, ರಾಜ್ಯ ಸರ್ಕಾರ ರೈತರ ಹಿತವನ್ನು ಸಂಪೂರ್ಣವಾಗಿ ಕಡೆಗಳಿಸಿದೆ ಎಂದು ಆರೋಪಿಸಿದರು. ಮಾಜಿ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯ ಸರ್ಕಾರದ ಅನ್ನಭಾಗ್ಯ ಅಕ್ಕಿ ತಮಿಳುನಾಡು ಪಾಲಾಗುತ್ತಿದೆ. ಕಾಣದ ಮಾರ್ಗದಲ್ಲಿ ಅಕ್ಕಿ ತಮಿಳುನಾಡು ಸೇರುತ್ತಿದ್ದು ಯೋಜನೆ ಹಳ್ಳ ಹಿಡಿದಿದೆ ಎಂದು ಆರೋಪಿಸಿದರು.
ಮತ್ತೆ ಮುಖ್ಯಮಂತ್ರಿ
ಯಡಿಯೂರಪ್ಪ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಸಹ ಶೀಘ್ರವೇ ನಿರ್ಮಾಣವಾಗಲಿದೆ ಎಂದು ಸಮಾವೇಶದಲ್ಲಿದ್ದ ಬಿಜೆಪಿ ನಾಯಕರು ಹೇಳಿದರು. ಜನರು ಸಹ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಡಗಿದ್ದು ವಿಶೇಷ.
ರಾಜ್ಯ ರಾಜಕಾರಣಕ್ಕೆ ಬಿಎಸ್ವೈ ವಾಪಸ್!
ಯಡಿಯೂರಪ್ಪ ಅವರ ಶಕ್ತಿ ದಿಕ್ಕು ತಪ್ಪುತ್ತಿರುವ ಕರ್ನಾಟಕಕ್ಕೆ ಬೇಕಾಗಿದೆ. ಯಾತ್ರೆ ಮೂಲಕ ನೊಂದ ರೈತರಿಗೆ ಸಾಂತ್ವನ ಹೇಳಲಾಗುತ್ತಿದ್ದು ಪರಿಹಾರಕ್ಕೆ ಸರ್ಕಾರವನ್ನು ಆಗ್ರಹಿಸಲಾಗುತ್ತಿದೆ ಎಂದು ಸಂಸದ ಶ್ರೀರಾಮಲು ಹೇಳಿದರು.
ಸಾಲಮನ್ನಾ ಮಾಡಿ
ರೈತರು ಮಳೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು ಮೊದಲು ಸಾಲ ಮನ್ನಾ ಮಾಡಿ. ಬಜೆಟ್ ನಲ್ಲಿ ಘೋಷಿಸಿದ್ದ ಕೃಷಿ ಯೋಜನೆಗಳನ್ನು ಮೊದಲು ಅನುಷ್ಠಾನ ಮಾಡಿ ಎಂದು ಬಿಎಸ್ ವೈ ಆಗ್ರಹಿಸಿದರು.
ಮಹದಾಯಿಗೆ ಬದ್ಧ
ಮಹದಾಯಿ ಯೋಜನೆಗೆ ಎಂದಿಗೂ ನಮ್ಮ ಬೆಂಬಲವಿದೆ. ಪ್ರಧಾನಿ ನರೇಂದ್ರ ಮೋದಿ ಕಳಸಾ ಬಂಡೂರಿಗೆ ಸಂಬಂಧಿಸಿದ ಎಲ್ಲ ರಾಜ್ಯದ ಮುಖ್ಯ ಮಂತ್ರಿಗಳ ಸಭೆ ಕರೆದು ಸಮಸ್ಯೆ ಪರಿಸಹರಿಸಿಕೊಳ್ಳುವಂತೆ ಸರಳ ಸೂತ್ರ ಮುಂದಿಟ್ಟಿದ್ದಾರೆ ಎಂದು ಬಿಎಸ್ ವೈ ಹೇಳಿದರು.
ಕತ್ತಲೇ ಕರ್ನಾಟಕ
ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ. ವಿದ್ಯುತ್ ಅಭಾವವಿರುವುದು ನಿಜ. ಸಮಸ್ಯೆ ಉದ್ಭವವಾಗುವುದಕ್ಕೆ ಮುನ್ನವೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ರೈತರ ನೆರವಿಗೆ ಧಾವಿಸುವ ಬದಲು ಸರ್ಕಾರ ರಾಜಕಾರಣ ಮಾಡುವುದರಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.