ಮುಖ್ಯಮಂತ್ರಿಗಳ ಈ ನಿರ್ಧಾರದಿಂದ ಅತ್ಯಾಚಾರ ನಿಲ್ಲುತ್ತಾ?
ಮಕ್ಕಳು ಮುದುಕಿಯರು ಅನ್ನದೇ ರಕ್ಕಸರಂತೆ ಎರಗುತ್ತಿರುವ ಕಾಮಪಿಶಾಚಿಗಳ ಪೈಶಾಚಿಕ ಕೃತ್ಯಕ್ಕೆ ಮಾನವ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ವಯಸ್ಸಲ್ಲದ ವಯಸ್ಸಿನವರ ಮೇಲೆ ನಡೆಯುತ್ತಿರುವ ಈ ಅತ್ಯಾಚಾರ ಪ್ರಕರಣಗಳಿಂದ ಸಮಾಜದಲ್ಲಿ ಆತಂಕ ಮನೆ ಮಾಡಿದೆ. ಯಾವ ಪತ್ರಿಕೆ ತಿರುವಿದರೂ, ಯಾವ ವಾರ್ತಾ ಚಾನೆಲ್ ಬದಲಾಯಿಸಿದರೂ, ಅತ್ಯಾಚಾರ ಮಾನಭಂಗದ ಸುದ್ದಿ.
ಅತ್ಯಾಚಾರಿಗಳನ್ನು ಬುಡಸಮೇತ ಮಟ್ಟ ಹಾಕಲು ನಮ್ಮ ದೇಶದಲ್ಲಿರದ ಬಲಾಢ್ಯ ಕಾನೂನು ವ್ಯವಸ್ಥೆ, ರಾಜಕೀಯ ಮೇಲಾಟ, ಹಣಬಲದ ದರ್ಪಗಾರಿಕೆಯ ನಡುವೆ 'ಇದು ಸಾಧ್ಯವೇ' ಎನ್ನುವುದು ಎಲ್ಲರಿಗೆ ಕಾಡುತ್ತಿರುವ ಪ್ರಶ್ನೆಯಾಗಿದೆ.
ಅತ್ಯಾಚಾರ ವಿಷಯ ಬಿಟ್ಟು ನಿಮಗೆ ಕೇಳಲು ಬೇರೇನೂ ಪ್ರಶ್ನೆಯೇ ಇಲ್ಲವೇ ಎಂದು ಮಾಧ್ಯಮದವರ ಮೇಲೆ ಗರಂ ಆಗಿದ್ದ ಮುಖ್ಯಮಂತ್ರಿಗಳು, ರಾಜ್ಯದ ಶಾಲೆಗಳಲ್ಲಿ ನಡೆಯುತ್ತಿರುವ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ತಡೆಗಾಗಿ ವಿಶೇಷ ಪಡೆಯೊಂದನ್ನು ರಚಿಸಲು ಮುಂದಾಗಿದ್ದಾರೆ.
ಅಲ್ಲದೇ, ಐದನೇ ತರಗತಿಯವರೆಗಿನ ಬಾಲಕಿಯರ ಶಾಲೆಗಳಲ್ಲಿ ಪುರುಷ ಶಿಕ್ಷಕರು ಅಥವಾ ಪುರುಷ ಸಿಬ್ಬಂದಿಗಳನ್ನು ನೇಮಿಸದೇ ಇರುವ ನಿರ್ಧಾರಕ್ಕೂ ಬಂದಿದ್ದಾರೆ. ಸರಕಾರದ ಈ ಮಹತ್ವದ ನಿರ್ಧಾರಗಳ ನಡುವೆ ಸಾರ್ವಜನಿಕರಿಗೆ ಕಾಡುವ ಪ್ರಶ್ನೆಯೇನಂದರೆ ಇದರಿಂದ ಅತ್ಯಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವೇ ಎನ್ನುವುದು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸುವಲ್ಲಿ ಪ್ರಮುಖ ಅಂಗವಾಗಿರುವ ನಮ್ಮ ರಾಜಕೀಯ ವ್ಯವಸ್ಥೆ ಈ ವಿಚಾರದಲ್ಲಿ ಮೊದಲು ಸರಿ ಹೋಗಬೇಕಿದೆ. ಅತ್ಯಾಚಾರದ ಪ್ರಕರಣಗಳನ್ನು ರಾಜಕೀಯ ಲಾಭಕ್ಕೆ ತೆಗೆದುಕೊಳ್ಳುವ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸುವ ಕಾನೂನು ಬರಬೇಕಾಗಿದೆ.
ಉದಾಹರಣೆಗೆ, ಅಪ್ರಾಪ್ತೆಯರಾದ ಧರ್ಮಸ್ಥಳದ ಸೌಜನ್ಯ, ತೀರ್ಥಹಳ್ಳಿಯ ನಂದಿತಾ ಲೈಂಗಿಕ ಶೋಷಣೆಯ ಪ್ರಕರಣಗಳಲ್ಲಿ ನಡೆದದ್ದು ಏನು? ನಡೆದದ್ದು ರಾಜಕೀಯ ಮೇಲಾಟ, ರಾಜಕೀಯ ಇಚ್ಚಾಶಕ್ತಿ, ರಾಜಕಾರಣಿಗಳ ಹುಚ್ಚಾಟದ ಹೇಳಿಕೆಗಳು.
ಹೇಳಿಕೆ ನೀಡುವ ಭರದಲ್ಲಿ ತಮ್ಮಮ್ಮ ಮನೆಯವರನ್ನೂ ಎಳೆದು ತಂದ ನಮ್ಮ ಕೆಲ ರಾಜಕಾರಣಿಗಳಿಗೆ ಪರಿಸ್ಥಿತಿಯಿಂದಾಗುವ ಲಾಭದ ಲೆಕ್ಕಾಚಾರ ಪ್ರಮುಖವಾಯಿತೇ ಹೊರತು, ಸಂತ್ರಸ್ತ ಕುಟುಂಬಗಳ ಕಣ್ಣೀರ ಕಥೆಯಲ್ಲ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಕ್ಕಿತಾ? ಅಂದು ಭೋರ್ಗರೆಯುತ್ತಿದ್ದ ರಾಜಕೀಯ ಅಲೆಗಳ ಶಕ್ತಿ ಇಂದು ಏನಾಯಿತು?
ರಾಜಕೀಯ ವ್ಯವಸ್ಥೆಯ ಜೊತೆಗೆ, ನಮ್ಮ ದೇಶದಲ್ಲಿ ಬ್ಲೂಫಿಲಂ ದಂಧೆಗಳಿಗೆ ಕಠಿಣ ಕಾನೂನು ಇಲ್ಲದೇ ಇರುವುದು. ಜಪಾನ್ ಮುಂತಾದ ರಾಷ್ಟ್ರಗಳಲ್ಲಿ ಬ್ಲೂಫಿಲಂಗೆ ನಿಷೇಧ ಹೇರಲಾಗಿದೆ. ನಮ್ಮ ದೇಶದಲ್ಲಿ ಇದಕ್ಕೆ ಕಣ್ಣೊರೆಸುವ ಕಾನೂನು ಮಾತ್ರವಿದೆ.
ಬ್ಲೂಫಿಲಂಗೆ ನಿಷೇಧ ಹೇರಿದರೆ ಅತ್ಯಾಚಾರ ಪ್ರಕರಣಗಳು ಸಂಪೂರ್ಣ ಹತೋಟಿಗೆ ಬರಬಹುದು ಎನ್ನಲಾಗದಿದ್ದರೂ, ಯುವಪೀಳಿಗೆಗಳು ಇದರಿಂದ ಇನ್ನೂ ಹೆಚ್ಚು ಉತ್ತೇಜನಗೊಳ್ಳುವುದರಿಂದ ಮತ್ತು ಆಕರ್ಷಿತರಾಗುವುದರಿಂದ ತಪ್ಪಿಸಬಹುದಾಗಿದೆ.
ಅರಬ್ ರಾಷ್ಟ್ರಗಳಲ್ಲಿ ಹೆಂಗಸರನ್ನು ಬೇರೆ ದೃಷ್ಟಿಯಿಂದ ನೋಡಿದ್ದು ಸಾಬೀತಾದರೆ ಕಣ್ಣು ಕಿತ್ತಾಕುತ್ತಾರೆ, ಇನ್ನು ಅತ್ಯಾಚಾರ ಮಾಡಿದ್ದು ಸಾಬೀತಾದಾರೆ ಆ ಭಾಗವನ್ನೇ ಕಿತ್ತು ಹಾಕುತ್ತಾರೆ. ಹಾಗಾಗಿ ಅರಬ್ ರಾಷ್ಟ್ರಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗುವುದು ಬಹಳ ಅಪರೂಪ. (ಅತ್ಯಾಚಾರದ ರಾಜಧಾನಿಯಾಗುತ್ತಿದೆಯೇ ಬೆಂಗಳೂರು)
ಅರಬ್ ರಾಷ್ಟ್ರಗಳಲ್ಲಿನ ಈ ಕಾನೂನನ್ನು ಭಲೇ.. ಭಲೇ.. ಎನ್ನುವವರು ನಮ್ಮ ದೇಶದಲ್ಲಿ ಇಂತಹ ಕಾನೂನು ಜಾರಿಯಾಗ ಬೇಕೆಂದು ಒತ್ತಾಯಿಸಿದರೆ ವಿರೋಧಿಸುತ್ತಿರುವುದು ಮಾತ್ರ ಹಾಸ್ಯಾಸ್ಪದ.
ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಹೊಡೆದು ಸಾಯಿಸಬೇಕು, ಜೀವಾವಧಿ ಶಿಕ್ಷೆ ನೀಡಬೇಕು, ಗಲ್ಲು ಶಿಕ್ಷೆ ನೀಡಬೇಕೆಂದು ಸಾರ್ವಜನಿಕವಾಗಿ ಮತ್ತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಕೂಗು.
ಅತ್ಯಾಚಾರಿಗಳನ್ನು ಬುಡಸಮೇತ ಮಟ್ಟ ಹಾಕುವ ಕಾನೂನು ನಮ್ಮ ದೇಶದಲ್ಲಿ ಜಾರಿಯಾಗಲಿ, ಜೊತೆಗೆ ಇದರಿಂದ ಅಮಾಯಕರು ಬಲಿಯಾಗದೇ ಇರಲಿ, ನಾಗರಿಕ ಸಮಾಜದಲ್ಲಿ ನೆಮ್ಮದಿಯಿಂದ ಇರುವಂತಾಗಲಿ..