ಸಂಪುಟ ವಿಸ್ತರಣೆ: ಬಲವಿಲ್ಲದ ಹೈಕಮಾಂಡ್ ಮುಂದೆ ಗೆದ್ದ ಸಿಎಂ ಸಿದ್ದು
ಬಹುನಿರೀಕ್ಷಿತ ಸಿದ್ದರಾಮಯ್ಯ ಸರಕಾರದ ಸಂಪುಟ ವಿಸ್ತರಣೆ ಅಲ್ಲಲ್ಲಿ ಪ್ರತಿಭಟನೆಯ ನಡುವೆ ಮುಕ್ತಾಯಗೊಂಡಿದೆ. ಅಪಸ್ವರ ಏನೇ ಇದ್ದರೂ, ಸಿದ್ದರಾಮಯ್ಯ ತಾವು ಬಯಸಿದ್ದನ್ನೇ ಸಾಧಿಸಿ ತೋರಿಸಿ, ಸದ್ಯಕ್ಕೆ ಮೇಲುಗೈ ಸಾಧಿಸಿದ್ದಾರೆ.
ಹಿರಿಯ ಕಾಂಗ್ರೆಸ್ಸಿಗರ ಮತ್ತು ಮೂಲ ಕಾಂಗ್ರೆಸ್ಸಿಗರ ಎಷ್ಟೇ ಒತ್ತಡವಿದ್ದರೂ, ತಾವು ರೆಡಿ ಮಾಡಿಕೊಂಡು ಹೋಗಿದ್ದ ಪಟ್ಟಿಗೆ ಹೈಕಮಾಂಡ್ ಬಳಿ ಸಹಿ ಹಾಕಿಸಿಕೊಂಡು ಬಂದು ಸಿದ್ದರಾಮಯ್ಯ ತಮ್ಮ ಖದರ್ ತೋರಿಸಿದ್ದಾರೆ. (ಸಿದ್ದು ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ)
ಮೂಲ ಕಾಂಗ್ರೆಸ್ಸಿಗನಲ್ಲ ಎನ್ನುವ ಪಕ್ಷದೊಳಗಿನ ಅಪಸ್ವರಕ್ಕೆ ರಾಜಕೀಯ ಮಾಡಲು 'ತಂತ್ರಗಾರಿಕೆ' ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟ ಸಿದ್ದರಾಮಯ್ಯ, ತಮ್ಮ ವಿರುದ್ದ ಹೈಕಮಾಂಡ್ ಅಂಗಣದಲ್ಲಿ ಅಸಮಾಧಾನ ತೋರಿದ್ದ ಎಲ್ಲರಿಗೂ ಈ ಮೂಲಕ ಸಂದೇಶ ರವಾನಿಸಿದ್ದಾರೆ.
ಸಾಲು ಸಾಲು ಸೋಲಿನಿಂದ ಹೈರಾಣವಾಗಿ ಸದ್ಯಕ್ಕೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗದ ಹೈಕಮಾಂಡ್ ಮುಂದೆ ಸಂಪುಟ ವಿಸ್ತರಣೆ ಎನ್ನುವುದು 'ಮುಖ್ಯಮಂತ್ರಿಯ ಪರಮಾಧಿಕಾರ' ಎನ್ನುವುದನ್ನು ಮನವರಿಕೆ ಮಾಡಿಕೊಡುವಲ್ಲಿ ಸಿದ್ದು ಯಶಸ್ವಿಯಾಗಿದ್ದಾರೆ.
ತಮ್ಮ ಪಟ್ಟಿಯ ಜೊತೆಗೆ ಇನ್ನೂ ಮೂವರನ್ನು ಕೈಬಿಡುವ ಅಧಿಕಾರವನ್ನು ಹೈಕಮಾಂಡ್ ನಿಂದ ಪಡೆದುಕೊಂಡು ಬಂದು, ಸಂಪುಟ ಪುನಾರಚನೆ ಹೆಸರಿನಲ್ಲಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವವನ್ನು ಸದ್ಯಕ್ಕೆ ತಡೆಗಟ್ಟಿದ್ದಾರೆ. (ಅಂಬಿ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್)
ಸಂಪುಟ ಪುನಾರಚನೆ ನಡೆಸಿ, ಆಡಳಿತ ಯಂತ್ರ ಚುರುಕುಗೊಳಿಸಿ, ರಾಜ್ಯದ ಜನರಲ್ಲಿ ಸರಕಾರ ಕ್ರಿಯಾಶೀಲವಾಗಿದೆಯೆಂದು ತೋರಿಸಿಕೊಡುತ್ತೇನೆ. ನಮ್ಮ ಪಟ್ಟಿಗೆ ಸಹಿ ಹಾಕಿ, ಮುಂದಿನ ಚುನಾವಣೆಯಲ್ಲಿ ಪಕ್ಷ ಮತ್ತೆ ಗೆಲ್ಲುವಂತೆ ಮಾಡುತ್ತೇನೆಂದು ಹೈಕಮಾಂಡಿಗೆ ಸಿದ್ದು ಮನವರಿಕೆ ಮಾಡಿಕೊಟ್ಟು ಬಯಸಿದ್ದನ್ನು ಸಾಧಿಸಿದ್ದಾರೆ.
ಸಂಪುಟ ಪುನಾರಚನೆಯ ವಿಚಾರದಲ್ಲಿ ಏನೇ ಅಸಮಾಧಾನವಿದ್ದರೂ, ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ ಐದು ಹಕ್ಕಿಯನ್ನು ಹೊಡೆಯುವ ಮೂಲಕ ಅಪ್ರತಿಮ ರಾಜಕೀಯ ನಡೆಯಿಟ್ಟಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...
ರಮೇಶ್ ಕುಮಾರ್, ಕಾಗೋಡು, ಬಸವರಾಜ ರಾಯರೆಡ್ಡಿ
ಪಕ್ಷದೊಳಗಿದ್ದು ಸಿದ್ದರಾಮಯ್ಯ ಸರಕಾರದ ಕಾರ್ಯವೈಖರಿಯನ್ನು ಟೀಕಿಸುತ್ತಿದ್ದ ಈ ಮೂವರು ಹಿರಿಯ ಕಾಂಗ್ರೆಸ್ ಮುಖಂಡರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಸಿದ್ದರಾಮಯ್ಯ ಮೂವರ ಬಾಯಿಯನ್ನು ಮುಚ್ಚಿಸಿದಂತಾಗಿದೆ.
ಮಲ್ಲಿಕಾರ್ಜುನ ಖರ್ಗೆ
ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡದಿರುವುದು ಕಾಂಗ್ರೆಸ್ ನಲ್ಲಿ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಆದರೆ, ಮಲ್ಲಿಕಾರ್ಜುನ ಖರ್ಗೆ ಪುತ್ರ, ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆಗೆ ಸಚಿವ ಸ್ಥಾನ ನೀಡಿದ್ದಾರೆ. ಆ ಮೂಲಕ, ಪುತ್ರ ವ್ಯಾಮೋಹದಿಂದ ಖರ್ಗೆ ತಮ್ಮ ಬೆಂಬಲಿಗರನ್ನು ಕೈಬಿಟ್ಟರು ಎನ್ನುವ ಆರೋಪಕ್ಕೆ ಸಿಲುಕುವಂತೆ ಮಾಡಿದ್ದಾರೆ.
ಮೂಲ ಕಾಂಗ್ರೆಸ್ಸಿಗರು
ಸಿದ್ದರಾಮಯ್ಯ ಸಿಎಂ ಆದ ನಂತರ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಕೂಗು ಇಂದು ನಿನ್ನೆಯದಲ್ಲ. ಭಾನುವಾರ (ಜೂ 19) ನಡೆದ ಸಂಪುಟ ವಿಸ್ತರಣೆರಲ್ಲಿ ಪ್ರಮಾಣವಚನ ಸ್ವೀಕರಿಸಿದವರು ಬಹುತೇಕರು ಮೂಲ ಕಾಂಗ್ರೆಸ್ಸಿಗರು. ಆ ಮೂಲಕ ಆಂತರಿಕ ಆರೋಪಕ್ಕೂ ಸಿದ್ದು ಉತ್ತರಿಸಿದ್ದಾರೆ.
ಮಹಾದೇವ ಪ್ರಸಾದ್ ಮತ್ತು ಎಚ್ ಸಿ ಮಹಾದೇವಪ್ಪ
ತಮ್ಮ ಪರಮಾಪ್ತರಾದ ಮಹಾದೇವ ಪ್ರಸಾದ್ ಮತ್ತು ಮಹಾದೇವಪ್ಪ ಅವರನ್ನು ಎಷ್ಟೇ ಒತ್ತಡ ಬಂದರೂ ಸಂಪುಟದಲ್ಲಿ ಉಳಿಸಿಕೊಳ್ಳುವ ಮೂಲಕ, ತಾವು ನಡೆದಿದ್ದೇ ದಾರಿ ಎಂದು ಪಕ್ಷದೊಳಗಿನ ತನ್ನ ವಿರೋಧಿಗಳಿಗೆ ಸಿದ್ದರಾಮಯ್ಯ ಸಂದೇಶ ರವಾನಿಸಿದ್ದಾರೆ.
ಎಸ್ ಟಿ ಸೋಮಶೇಖರ್ ಅಂಡ್ ಕೋ
ನಾವು ಮೂಲ ಕಾಂಗ್ರೆಸ್ಸಿಗರು, ನಮಗೂ ಸಚಿವ ಸ್ಥಾನ ಸಿಗಬೇಕೆಂದು ಹೈಕಮಾಂಡ್ ಅಂಗಣದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದ ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ ನಾಯ್ಡು ಸೇರಿದಂತೆ ಪಕ್ಷದ ಮುಖಂಡರ ಒತ್ತಡಕ್ಕೆ ಸೊಪ್ಪು ಹಾಕದೇ ಎಸ್ ಎಂ ಕೃಷ್ಣ, ಖರ್ಗೆ, ಮೊಯ್ಲಿ, ಮುನಿಯಪ್ಪ ಮುಂತಾದ ಹಿರಿಯ ಮುಖಂಡರಿಗೂ ಸಿದ್ದು ಸೈಡ್ ಹೊಡೆದಿದ್ದಾರೆ.