ಪರಿಸರ ಸ್ನೇಹಿಯಾದ ಸರ್ಕಾರ, ಪ್ಲಾಸ್ಟಿಕ್ ಬಳಕೆ ನಿಷೇಧ
ಬೆಂಗಳೂರು, ಮಾ. 04: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊನೆಗೂ ದಿಟ್ಟ ಹೆಜ್ಜೆ ಇಟ್ಟಿದೆ. ರಾಜ್ಯದೆಲ್ಲೆಡೆ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪ್ಲಾಸ್ಟಿಕ್ ನಿಷೇಧಿಸುವ ಅಂತಿಮ ಕರಡು ಅಧಿಸೂಚನೆಗೆ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಅನುಮೋದನೆ ಸಿಕ್ಕಿದೆ. ಹೀಗಾಗಿ ಇನ್ಮುಂದೆ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ, ವಿತರಣೆ ಹಾಗೂ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. [ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸಚಿವ ಸಂಪುಟದ ಒಪ್ಪಿಗೆ]
40 ಮೈಕ್ರಾನ್ಗಿಂತ ತೆಳುವಾದ ಎಲ್ಲ ಬಗೆಯ ಪ್ಲಾಸ್ಟಿಕ್ ಉತ್ಪನ್ನ ಹಾಗೂ ಥರ್ಮಕೋಲ್, ಮೈಕೋ ಬೀಡ್ಸ್ ಬಳಸಿ ತಯಾರಿಸುವ ವಸ್ತುಗಳನ್ನು ನಿಷೇಧಿಸಲಾಗಿದೆ. 40 ಮೈಕ್ರಾನ್ಗಿಂತ ತೆಳುವಾದ ಪ್ಲಾಸ್ಟಿಕ್ ಪುನರ್ ಬಳಕೆ(recycle) ಮಾಡಲು ಆಗುವುದಿಲ್ಲ. ಮಣ್ಣಿನಲ್ಲಿ ಕೊಳೆಯುವುದಿಲ್ಲ, ಸುಟ್ಟರೆ ರಾಸಾಯನಿಕಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಈ ಪ್ಲಾಸ್ಟಿಕ್, ಬೆಂಗಳೂರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಹೆಚ್ಚಿಸಿದೆ. [ಬೆಂಗಳೂರಲ್ಲಿ ಎಲ್ಲಾ ಬಗೆಯ ಪ್ಲಾಸ್ಟಿಕ್ ಕೈ ಚೀಲ ನಿಷೇಧ]
40 ಮೈಕ್ರಾನ್ಗಿಂತ ತೆಳುವಾದ ಕ್ಯಾರಿ ಬ್ಯಾಗ್, ಊಟದ ಮೇಜಿನ ಮೇಲೆ ಬಳಸುವ ಪ್ಲಾಸ್ಟಿಕ್ ಸೀಟು, ಥರ್ವಕೋಲ್ ಪ್ಲೇಟ್, ನೀರಿನ ಲೋಟ, ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಗೆ ನಿಷೇಧ ಹೇರಲಾಗಿದೆ. ಆದರೆ, 40 ಮೈಕ್ರಾನ್ಗಿಂತ ದಪ್ಪವಾಗಿರುವ ಹಾಲಿನ ಪ್ಯಾಕೆಟ್, ಆರೋಗ್ಯ ಇಲಾಖೆಯ ಸಿರಿಂಜ್, ನರ್ಸರಿಗಳಲ್ಲಿ ಸಸಿ ಬೆಳೆಸಲು ಬಳಸುವ ಪ್ಲಾಸ್ಟಿಕ್ ಚೀಲಗಳಿಗೆ ವಿನಾಯಿತಿ ನೀಡಲಾಗಿದೆ.
ಮುಂದೇನು?: ಶಾಪಿಂಗ್ ಮಾಲ್ ಗಳಲ್ಲಿ ಬಟ್ಟೆ ಅಥವಾ ಪೇಪರ್ ಬ್ಯಾಗ್ ಬಳಸಬೇಕಾಗುತ್ತದೆ. ಆದರೆ, ಮಟನ್ ಶಾಪ್ ಗಳಲ್ಲಿ ಬದಲಿ ವ್ಯವಸ್ಥೆ ಬಗ್ಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಭಾನುವಾರದ ಸ್ಪೆಷಲ್ ಗ್ರಾಹಕರಿಗೆ ಯಾವುದರಲ್ಲಿ ಮಾಂಸ ಹಾಕಿಕೊಡುವುದು ಎಂಬುದು ಸದ್ಯದ ಪ್ರಶ್ನೆ.