ಭೀಕರ ಬರ, ಜನರ ಸುಲಿಗೆ ಮಾಡುತ್ತಿರುವ ಟ್ಯಾಂಕರ್ ಮಾಫಿಯಾ
ಬೆಂಗಳೂರು, ಏಪ್ರಿಲ್ 15 : ರಾಜ್ಯದಲ್ಲಿನ ರಣ ಬಿಸಿಲು ಜನರ ನೆತ್ತಿ ಸುಡುತ್ತಿದ್ದರೆ, ಟ್ಯಾಂಕರ್ ಮಾಫಿಯಾ ಜನರ ಜೇಬು ಸುಡುತ್ತಿದೆ. ಬೆಂಗಳೂರು ನಗರದ ಹೊರವಲಯ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಟ್ಯಾಂಕರ್ ಮಾಫಿಯಾ ನೀರು ಸರಬರಾಜು ಮಾಡುವ ನೆಪದಲ್ಲಿ ಜನರನ್ನು ಸುಲಿಗೆ ಮಾಡುತ್ತಿದೆ.
ಪ್ರತಿದಿನ 50 ರಿಂದ 100 ರೂ.ಗಳ ಹಣ ಸಂಪಾದಿಸುವ ಬಡ ಜನರಿಂದ ಟ್ಯಾಂಕರ್ ಮಾಫಿಯಾ ಒಂದು ಬಿಂದಿಗೆ ನೀರಿಗೆ 10 ರೂ. ಪಡೆಯುತ್ತಿದೆ. ಈ ಮಾಫಿಯಾ ಹಗಲಿರುಳು ಕೆಲಸ ಮಾಡುತ್ತಿದ್ದು, ಸರ್ಕಾರಕ್ಕೆ ಇದರ ಬಗ್ಗೆ ತಿಳಿದಿದ್ದರೂ ಮೌನಕ್ಕೆ ಶರಣಾಗಿದೆ. [ಬರ ಪರಿಸ್ಥಿತಿ ವೀಕ್ಷಣೆಗೆ ಹೊರಟ ಮುಖ್ಯಮಂತ್ರಿಗಳು]
ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲ ಎದುರಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ನಿಗದಿಯಾಗಿದ್ದ ವಿವಾಹಗಳನ್ನು ಮುಂದೂಡಿ, ಕುಡಿಯುವ ನೀರನ್ನು ಅರಸಿಕೊಂಡು ಜನರು ಗುಳೆ ಹೋಗುತ್ತಿದ್ದಾರೆ. [ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ]
ಸುಮಾರು 3,469 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸರ್ಕಾರ 817 ಹಳ್ಳಿಗಳ ಸಮಸ್ಯೆಗಳನ್ನು ಮಾತ್ರ ನಿವಾರಿಸುತ್ತಿದೆ. ಮುಂಗಾರು ಮಳೆ ಆರಂಭವಾಗಿ ಸರಿಯಾಗಿ ಮಳೆ ಸುರಿಯುವ ತನಕ ಕುಡಿಯುವ ನೀರಿನ ಪರಿಸ್ಥಿತಿ ಇನ್ನೂ ಭೀಕರವಾಗಲಿದೆ. [ಉತ್ತರ ಕರ್ನಾಟಕದಲ್ಲಿ 62 ತಾಲೂಕುಗಳಲ್ಲಿ ಬರ]
ದರ ನಿಗದಿಗೆ ಮಾನದಂಡವೇ ಇಲ್ಲ : ಟ್ಯಾಂಕರ್ ಮಾಫಿಯಾಕ್ಕೆ ದರ ನಿಗದಿ ಮಾಡಲು ಯಾವುದೇ ಮಾನದಂಡಗಳಿಲ್ಲ. ಹನಿ ನೀರಿಗಾಗಿ ಪರದಾಡುವ ಜನರ ಕಷ್ಟವೇ ಇವರ ಸುಲಿಗೆಯ ಮಾನದಂಡ. ನಿತ್ಯ 100 ರೂ. ಸಂಪಾದನೆ ಮಾಡುವ ಬಡ ಕೂಲಿ ಕಾರ್ಮಿಕ ಒಂದು ಕೊಡ ಕುಡಿಯುವ ನೀರಿಗೆ 10 ರೂ. ನೀಡಬೇಕು. [ಕುಡಿಯಾಕ್ ತೊಟ್ ನೀರಿಲ್ಲ, ಮುಂದ್ ಕತಿ ಹೆಂಗ್ರೀಪಾ..!]
ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಎಂ. ಮಾರುತಿ ಅವರು, 'ಟ್ಯಾಂಕರ್ಗಳನ್ನು ನಿಯಂತ್ರಣ ಮಾಡಲು ಯಾವುದೇ ವ್ಯವಸ್ಥೆಗಳಿಲ್ಲ. ನೀರಿಗೆ ಬೇಡಿಕೆ ಹೆಚ್ಚಾದಂತೆ ಹೆಚ್ಚು ಹಣ ನೀಡಿ ಖರೀದಿ ಮಾಡುವುದು ನಡೆಯುತ್ತಿದೆ. ಬಡವರು 10 ರೂ. ಕೊಟ್ಟು. ನೀರು ಖರೀದಿ ಮಾಡುವುದು ಕಷ್ಟ' ಎಂದು ಹೇಳುತ್ತಾರೆ. [ಎರಡೇ ಎರಡು ಬಕೆಟ್ ನೀರುಳಿಸಲು ಸಾಧ್ಯವೆ? ಪ್ರಯತ್ನಿಸಿ]
ಈ ಬಾರಿಯ ಮುಂಗಾರು ಉತ್ತಮವಾಗಿರಲಿದ್ದು, ಜೂನ್ನಲ್ಲಿ ದೇಶಾದ್ಯಂತ ಹೆಚ್ಚು ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಬೇಗ ಮಳೆ ಬರಲಿ ಎಂದು ಪ್ರಾರ್ಥಿಸುವುದು ಬಿಟ್ಟು ಬೇರೆ ಆಯ್ಕೆಗಳು ಜನರ ಮುಂದಿಲ್ಲ.