ಸಿದ್ದು ಸಂಪುಟದ ಜಿಲ್ಲಾ ಉಸ್ತುವಾರಿ ಸಚಿವರು ಅದಲು ಬದಲು
ಬೆಂಗಳೂರು, ನ.11: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಚಿವರ ಖಾತೆ ಹಂಚಿಕೆ, ಸಚಿವರಿಗೆ ಆಡಳಿತ ಕೇಂದ್ರ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಕಾರ್ಯ ಪೂರ್ಣಗೊಂಡ ಬಳಿಕ ಕೆಲ ಸಚಿವರ ಜಿಲ್ಲಾ ಉಸ್ತುವಾರಿ ಖಾತೆಗಳು ಅದಲು ಬದಲಾಗಿದೆ.
ಮುಂದಿನ ಸ್ವಾತಂತ್ರೋತ್ಸವದಂದು ಅಯಾ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕೃತ ನಾಯಕರ ಪಟ್ಟಿ ಹೊರ ಬಿದ್ದಿದೆ. ತಮಗೆ ಸಿಕ್ಕಿರುವ ಜಿಲ್ಲೆಗಳ ಬಗ್ಗೆ ಯಾವುದೇ ಕ್ಯಾಬಿನೆಟ್ ಸಚಿವರು ಖ್ಯಾತೆ ತೆಗೆದಿರುವ ಸುದ್ದಿ ಬಂದಿಲ್ಲ.
ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರನ್ನು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಸಂಪುಟ ವಿಸ್ತರಣೆಯಲ್ಲಿ ಪರಮೇಶ್ವರ್ಗೆ ಗೃಹ ಖಾತೆ ವರ್ಗಾವಣೆಯಾಗಿದ್ದರಿಂದ ಕೆಜೆ ಜಾರ್ಜ್ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲಾಗಿತ್ತು. ಅದರೊಂದಿಗೆ ಬೆಂಗಳೂರು ಉಸ್ತುವಾರಿಯನ್ನು ವಹಿಸಲಾಗಿದೆ.
ಜಾರ್ಜ್ ಅವರಿಗೆ ಹೆಚ್ಚುವರಿಯಾಗಿದ್ದ ಕೊಡಗು ಜಿಲ್ಲಾ ಉಸ್ತುವಾರಿಯನ್ನು ಹಿಂಪಡೆಯಲಾಗಿದೆ. ಕೊಡಗಿನಲ್ಲಿ ನಡೆದ ಘರ್ಷಣೆ ಇದಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ಗುಂಡೂರಾವ್ ಅವರಿಗೆ ಅವರ ತಂದೆಯ ಊರಿನ ಜವಾಬ್ದಾರಿ (ಮಾಜಿ ಮುಖ್ಯಮಂತ್ರಿ ಅವರು ಗುಂಡೂರಾವ್ ಅವರು ಕುಶಾಲನಗರದವರು) ನೀಡಲಾಗಿದೆ.
ಕೋಲಾರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉಸ್ತುವಾರಿ ಸಚಿವರಾಗಿದ್ದರು. ಈಗ ಅವರಿಂದ ಈ ಜವಾಬ್ದಾರಿಯನ್ನು ಹಿಂಪಡೆದು ರಾಮಲಿಂಗಾರೆಡ್ಡಿ ಅವರಿಗೆ ವಹಿಸಲಾಗಿದೆ.