ಕರ್ನಾಟಕ ಕಾಂಗ್ರೆಸ್ ಬಿಕ್ಕಟ್ಟು, ಬುಧವಾರದ ಬೆಳವಣಿಗೆಗಳು
ಬೆಂಗಳೂರು, ಜೂನ್ 22 : ಸಚಿವ ಸಂಪುಟ ಪುನಾರಚನೆ ನಂತರ ಕರ್ನಾಟಕ ಕಾಂಗ್ರೆಸ್ನಲ್ಲಿ ಎದ್ದಿರುವ ಅಸಮಾಧಾನ ಶಮನಗೊಂಡಿಲ್ಲ. ಸಚಿವ ಸ್ಥಾನ ಕೈತಪ್ಪಿರುವ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದು, ನಾಯಕತ್ವ ಬದಲಾವಣೆಗೆ ಪರೋಕ್ಷ ಒತ್ತಡ ಕೇಳಿಬರುತ್ತಿದೆ.
ಮಾಜಿ ಸಚಿವರಾದ ಅಂಬರೀಶ್, ವಿ.ಶ್ರೀನಿವಾಸ ಪ್ರಸಾದ್, ಖಮರುಲ್ಲಾ ಇಸ್ಲಾಂ, ಶಾಸಕರಾದ ಡಾ. ಎ.ಬಿ. ಮಾಲಕರೆಡ್ಡಿ, ಎಸ್.ಟಿ. ಸೋಮಶೇಖರ್ ಮುಂತಾದವರು ಬುಧವಾರ ಸರಣಿ ಸಭೆಗಳನ್ನು ನಡೆಸಿದರು. ಮುಖ್ಯಮಂತ್ರಿಗಳ ಜೊತೆಗಿನ ಸಂಧಾನ ಸಭೆಯ ಆಯ್ಕೆಯನ್ನು ಎಲ್ಲಾ ನಾಯಕರು ಪಕ್ಕಕ್ಕೆ ಸರಿಸಿದ್ದಾರೆ. [ರಾಜಕೀಯ ಪತನ: ಅಂಬರೀಶ್ ಗೆ ಮುಳುವಾದ 5 ಅಂಶಗಳು]
ಅಂಬರೀಶ್ ಅವರ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿನ ಫ್ಲಾಟ್ ಇಂದು ಹಲವು ಸಭೆಗಳಿಗೆ ಸಾಕ್ಷಿಯಾಯಿತು. ಬೆಂಗಳೂರಿಗೆ ಆಗಮಿಸಿರುವ ಶ್ರೀನಿವಾಸ ಪ್ರಸಾದ್ ಅವರು ಸಿದ್ದರಾಮಯ್ಯ ಹೊರತು ಪಡಿಸಿ ಹಲವು ನಾಯಕರ ಜೊತೆ ಸರಣಿ ಸಭೆಗಳನ್ನು ನಡೆಸಿದರು. [ಬಳಸಿ ಬಿಸಾಡೋಕೆ ನಾನೇನು ಚಪ್ಲೀನಾ : ಶಾಲುಸುತ್ತಿ ಬಾರಿಸಿದ ಅಂಬಿ]
ಮಾಧ್ಯಮಗಳ ಜೊತೆ ಮಾತನಾಡಿರುವ ಶ್ರೀನಿವಾಸ ಪ್ರಸಾದ್ ಅವರು, 'ನಾಯಕತ್ವ ಬದಲಾವಣೆ ಬಗ್ಗೆ ಪದೇ ಪದೇ ಹೇಳುವುದಕ್ಕಾಗುವುದಿಲ್ಲ. ನೀವೇ ಅರ್ಥ ಮಾಡಿಕೊಳ್ಳಿ. ಅಸಮಾಧಾನ ಇರುವವರೆಲ್ಲ ಒಟ್ಟಿಗೆ ಸೇರಿಕೊಂಡಿದ್ದೇವೆ. ಆದರೆ, ಮುಂದೇನು ಮಾಡಬೇಕು ಎಂಬುದರ ಬಗ್ಗೆ ತೀರ್ಮಾನವಾಗಿಲ್ಲ' ಎಂದು ಹೇಳಿದರು. ಇಂದಿನ ಬೆಳವಣಿಗೆಗಳ ಮಾಹಿತಿ ಚಿತ್ರಗಳಲ್ಲಿದೆ.....
ಅಂಬರೀಶ್ ನಿವಾಸದಲ್ಲಿ ಹಲವು ಸಭೆ
ಬೆಂಗಳೂರಿನಲ್ಲಿರುವ ಮಾಜಿ ಸಚಿವ ಅಂಬರೀಶ್ ನಿವಾಸದಲ್ಲಿ ಹಲವು ಸಭೆಗಳು ಇಂದು ನಡೆದವು. ಅಂಬರೀಶ್ ಜೊತೆ ಮಾತುಕತೆ ನಡೆಸಲಿ ಸಿದ್ದರಾಮಯ್ಯ ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಮಹದೇವಪ್ಪ ಅವರನ್ನು ಕಳಿಸಲು ಮುಂದಾಗಿದ್ದರು. ಆದರೆ, ಅಂಬರೀಶ್ ಸಂಧಾನಕಾರರಿಗೆ ಬಾಗಿಲು ತೆರೆಯುವುದಿಲ್ಲ ಎಂಬ ಸಂದೇಶ ನೀಡಿದರು. ನಂತರ ಶ್ರೀನಿವಾಸ ಪ್ರಸಾದ್ ಅವರು ಅಂಬರೀಶ್ ನಿವಾಸಕ್ಕೆ ಭೇಟಿ ನೀಡಿ ಸಭೆ ನಡೆಸಿದರು. ಹಿರಿಯ ನಾಯಕ ಜಾಫರ್ ಷರೀಫ್ ಅವರು ಸಂಜೆ ಅಂಬರೀಶ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸುತ್ತಿದ್ದಾರೆ.
'ಎಲ್ಲದಕ್ಕೂ ಟೈಮ್ ಇದೆ ಕಾದು ನೋಡಿ'
ಅಂಬರೀಶ್ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಶ್ರೀನಿವಾಸ ಪ್ರಸಾದ್ ಅವರು, 'ನಮ್ಮದು ಬಂಡಾಯ ಅಲ್ಲ, ವ್ಯಕ್ತಿಗಿಂತ ಪಕ್ಷವೇ ಮುಖ್ಯ. ಅಂಬರೀಶ್ ಅವರ ಜತೆಗೆ ಎಲ್ಲ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಸಿದ್ದೇವೆ. ಎಲ್ಲದಕ್ಕೂ ಟೈಮ್ ಇದೆ ಕಾದು ನೋಡಿ' ಎಂದರು.
ಆಸ್ಕರ್ ಫರ್ನಾಂಡೀಸ್ ಮಾತುಕತೆ
ಶ್ರೀನಿವಾಸ ಪ್ರಸಾದ್ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಆಸ್ಕರ್ ಫರ್ನಾಂಡೀಸ್ ಅವರು, 'ಪಕ್ಷಕ್ಕೆ ಧಕ್ಕೆಯಾಗುವ ಕೆಲಸ ಮಾಡಲ್ಲ ಎಂದು ಶ್ರೀನಿವಾಸ ಪ್ರಸಾದ್ ಭರವಸೆ ನೀಡಿದ್ದಾರೆ. ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ' ಎಂದರು. ಅಂಬರೀಶ್ ಜೊತೆ ಮಾತುಕತೆ ನಡೆಸುತ್ತೀರಾ? ಎಂದು ಕೇಳಿದ ಪ್ರಶ್ನೆಗೆ 'ಸದ್ಯ ಮಾತುಕತೆ ನಡೆಸುತ್ತಿಲ್ಲ' ಎಂದರು.
ಮಾಲೀಕಯ್ಯ ಗುತ್ತೇದಾರ್ ರಾಜೀನಾಮೆ?
ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಅಫ್ಜಲ್ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಸ್ಟೇಷನ್ ಗಾಣಗಾಪುರ ಗ್ರಾಮದಲ್ಲಿ ಬೆಂಬಲಿಗರ ಸಭೆ ನಡೆಸಿದ ಅವರು, 'ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ' ಎಂದು ಹೇಳಿದರು. ಜೂನ್ 20ರಂದು ಅವರು ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಂಬರೀಶ್ - ಜಾಫರ್ ಷರೀಫ್ ಮಾತುಕತೆ
ಸಂಜೆ ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್ ಅವರು ಅಂಬರೀಶ್ ಭೇಟಿಯಾಗಿ ಮಾತುಕತೆ ನಡೆಸಿದರು. ಸಿದ್ದರಾಮಯ್ಯ ಅವರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಾಫರ್ ಷರೀಫ್ ಅವರು 'ಯಾರನ್ನೂ ಕೇಳದೆ ಸಂಪುಟ ಪುನಾರಚನೆ ಮಾಡಿದ್ದು ತಪ್ಪು. ರಾಜ್ಯಕ್ಕೆ ಸಿದ್ದರಾಮಯ್ಯ ಮುಖ್ಯವಲ್ಲ, ಕಾಂಗ್ರೆಸ್ ಪಕ್ಷ ಮುಖ್ಯ. ಈ ಕುರಿತು ಹೈಕಮಾಂಡ್ ನಾಯಕರ ಜೊತೆ ಚರ್ಚಿಸುತ್ತೇನೆ' ಎಂದು ಹೇಳಿದರು.