ಸಾರಿಗೆ ನೌಕರರ ಬೇಡಿಕೆ ಸಾಧುವಲ್ಲ ಅಂದ್ರು ಸಚಿವ ಜಯಚಂದ್ರ
ಬೆಂಗಳೂರು, ಜುಲೈ 27 : 'ಸಾರಿಗೆ ನಿಗಮಗಳ ನೌಕರರಿಗೆ ಶೇ 10ರಷ್ಟು ವೇತನ ಹೆಚ್ಚಳ ಮಾಡಿದರೆ ಸಂಸ್ಥೆಗಳಿಗೆ 1,550 ಕೋಟಿ ರೂ.ಹೆಚ್ಚವರಿ ಹೊರೆ ಬೀಳಲಿದೆ. ಕಾರ್ಮಿಕ ಸಂಘಟನೆಗಳು ಇಟ್ಟಿರುವ ಬೇಡಿಕೆ ಸಾಧುವಲ್ಲ' ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಮಂಗಳವಾರ ಸಂಜೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, 'ಕಳೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ಶೇ 8 ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಗಿತ್ತು' ಎಂದು ಹೇಳಿದರು.[ಕೈದಿಗಳ ಬಿಡುಗಡೆಗೆ ಹೊಸ ಮಾರ್ಗಸೂಚಿ]
'ಮುಷ್ಕರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವಿವಿಧ ಕಾರ್ಮಿಕ ಸಂಘಟನೆಗಳ ಜೊತೆ ನಡೆಸಿದ ಮಾತುಕತೆಯಲ್ಲಿ ತಮ್ಮ ವಿವೇಚನೆಗೆ ಅನುಗುಣವಾಗಿ ಶೇ 10 ರಷ್ಟು ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿದ್ದಾರೆ. ರಸ್ತೆ ಸಾರಿಗೆ ಸಂಸ್ಥೆಗಳು ಲಾಭದಾಯಕವಾಗಿಲ್ಲ ಎಂಬ ಅಂಶವನ್ನು ಸಾರಿಗೆ ಸಚಿವರು ಸಂಪುಟ ಸಭೆಯಲ್ಲಿ ವಿವರಿಸಿದ್ದಾರೆ. ನೌಕರರು ಇಟ್ಟಿರುವ ಬೇಡಿಕೆಯಂತೆ ಪರಿಷ್ಕರಣೆ ಸಾಧ್ಯವೇ ಇಲ್ಲ' ಎಂದು ತಿಳಿಸಿದರು.[ಸಾರಿಗೆ ಮುಷ್ಕರ ಕೈ ಬಿಡಲು ಕರೆ ನೀಡಿದ ರಾಮಲಿಂಗಾ ರೆಡ್ಡಿ]
'ಸಾರ್ವಜನಿಕರ ಹಿತ ದೃಷ್ಠಿಯಿಂದ ನೌಕರರು ಮುಷ್ಕರ ಕೈ ಬಿಟ್ಟು ಕೆಲಸಕ್ಕೆ ಹಾಜರಾಗಬೇಕು. ಮುಖ್ಯಮಂತ್ರಿ ಸೇರಿದಂತೆ ಸಂಪುಟದಲ್ಲಿನ ಎಲ್ಲಾ ಸಚಿವರು ಕಾರ್ಮಿಕರಿಗೆ ಈ ಕುರಿತು ಮನವಿ ಮಾಡುತ್ತಿದ್ದೇವೆ' ಎಂದು ಜಯಚಂದ್ರ ಹೇಳಿದರು.
ಸಿರಿಗಂಧ ಯೋಜನೆಯಡಿ ಸಾಬೂನು, ಟೂತ್ ಪೇಸ್ಟ್ ಕಿಟ್
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳು, ಆಶ್ರಮ ಶಾಲೆಗಳು, ಮೆಟ್ರಿಕ್-ಪೂರ್ವ ನಿಲಯಗಳ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಹಾಗೂ ಸಿರಿಗಂಧ ಯೋಜನೆಗಳಡಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯಿಂದ 8.23 ಕೋಟಿ ರೂ ವೆಚ್ಚದಲ್ಲಿ ಸಾಬೂನು, ಟೂತ್ ಪೇಸ್ಟ್ ಹಾಗೂ ಕೊಬ್ಬರಿ ಎಣ್ಣೆ ಒಳಗೊಂಡ ಕಿಟ್ ಗಳನ್ನು ಸರಬರಾಜು ಮಾಡಲು ಒಪ್ಪಿಗೆ ನೀಡಲಾಗಿದೆ.
ಕೆನೆ-ಭರಿತ ಹಾಲು ವಿತರಣೆ
ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ಇತರೆ ಮಕ್ಕಳಿಗೆ ನೀಡುತ್ತಿರುವಂತೆಯೇ ರಾಜ್ಯದ 39 ಲಕ್ಷ ಅಂಗನವಾಡಿ ಮಕ್ಕಳಿಗೂ ವಾರಕ್ಕೆ ಮೂರು ದಿನ 150 ಮಿಲಿ ಲೀಟರ್ ಕೆನೆ-ಭರಿತ ಹಾಲು ವಿತರಿಸಲು ಒಪ್ಪಿಗೆ ನೀಡಲಾಗಿದೆ. ಈ ಯೋಜನೆಗೆ 42.5 ಕೋಟಿ ರೂ ವೆಚ್ಚವಾಗಲಿದೆ. ಈ ತೀರ್ಮಾನದಿಂದ ಅಂಗನವಾಡಿ ಮಕ್ಕಳನ್ನೊಳಗೊಂಡಂತೆ 1 ರಿಂದ 10ನೇ ತರಗತಿಯ 1.08 ಕೋಟಿ ಮಕ್ಕಳಿಗೆ ಕೆನೆ-ಭರಿತ ಹಾಲು ದೊರೆಯಲಿದೆ.
ಸೌರ ವಿದ್ಯುತ್ ಉತ್ಪಾದನೆ
ಕರ್ನಾಟಕ ರಾಜ್ಯ ಉಗ್ರಾಣ ನಿಗಮದ 182 ಉಗ್ರಾಣಗಳ ಮೇಲ್ಛಾವಣಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸೌರ ವಿದ್ಯುತ್ ಪ್ಯಾನೆಲ್ಗಳನ್ನು ಅಳವಡಿಸಿ 162 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯಡಿ ಮೊದಲನೇ ಹಂತದಲ್ಲಿ 68 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.
89.34 ಎಕರೆ ಜಮೀನು ನೀಡಲು ಒಪ್ಪಿಗೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಹಿನ್ನೀರಿನಿಂದ ಬಾಧಿತವಾಗಿರುವ ತಮದಡಿ ಗ್ರಾಮದ ಪುನರ್ವಸತಿ ನಿರ್ಮಾಣಕ್ಕಾಗಿ ಹಳಿಂಗಳಿ ಗ್ರಾಮದಲ್ಲಿ 89.34 ಎಕರೆ ಜಮೀನನ್ನು ಕರ್ನಾಟಕ ನೀರಾವರಿ ನಿಗಮದಿಂದ ಉಚಿತವಾಗಿ ನೀಡಲು ಒಪ್ಪಿಗೆ ನೀಡಲಾಗಿದೆ.
ಇತರ ನಿರ್ಣಯಗಳು
* ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ವಿತರಿಸುವ ಐಯೋಡಿನ್ಯುಕ್ತ ಉಪ್ಪಿನೊಂದಿಗೆ ಕಬ್ಬಿಣಾಂಶಯುಕ್ತ ಉಪ್ಪು ಒದಗಿಸಲು ಒಪ್ಪಿಗೆ.
* ಶಿವಮೊಗ್ಗದಲ್ಲಿ ನೂತನ ಕಾರಾಗೃಹ ಕಟ್ಟಡ ಹಾಗೂ ಸಿಬ್ಬಂದಿಯ ವಸತಿ ಸಮುಚ್ಛಯವನ್ನು 79.76 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ
* ಸಂಸದೀಯ ವ್ಯವಹಾರಗಳ ಹಾಗೂ ಶಾಸನ ರಚನಾ ಇಲಾಖಾ ವ್ಯಾಪ್ತಿಯ ಭಾಷಾಂತರ ನಿರ್ದೇಶನಾಲಯದ ವೃಂದ ಹಾಗೂ ನೇಮಕಾತಿ ನಿಯಮಗಳು-2016 ಕರಡು ಅಧಿಸೂಚನೆಗೆ ಒಪ್ಪಿಗೆ.