ಸಿಗರೇಟು, ಮದ್ಯ ಇನ್ನುಮುಂದೆ ಹೆಚ್ಚಾಗಿದ್ದು ಗೊತ್ತಾಗಲ್ಲ!
ಥತ್ತೇರಿಕೆ... ಈಗ ರಾಜ್ಯ ಬಜೆಟ್ ಸಹ ಮಂಡನೆ ಮಾಡಿದ್ದು ಆಯ್ತು, ನಮ್ಮ ಮುಖ್ಯಮಂತ್ರಿಗಳು ರಾಹುಕಾಲದಲ್ಲೇ ಬಜೆಟ್ ಮಂಡನೆ ಮಾಡ್ಬುಟ್ರು. ಅದಕ್ಕೆ ವಿಧಾನಸಭೆಯಲ್ಲೇ 2 ಸಾರಿ ಕರೆಂಟ್ ಹೋತ್ತು..!
ನಾಗರಾಜನಿಗೆ ಈ ಬಾರಿಯ ರಾಜ್ಯ ಬಜೆಟ್ ಸಹ ಸಂತಸ ತಂದಿಲ್ಲ. ಇದು ಸಹ ಜನವಿರೋಧಿ ಬಜೆಟ್ ಅಂತಾನೆ ಬೈದುಕೊಳ್ಳುತ್ತಿದ್ದ. ವಿಶ್ವ ನಿದ್ರೆ ದಿನ ನಿದ್ರೆ ಬರುವಷ್ಟು ಉದ್ದಕ್ಕೆ ಭಾಗ್ಯದ ಯೋಜನೆಗಳಿಗೆ ಹೆಸರಾದ ಸಿದ್ದಣ್ಣನಿಂದ ಈ ಬಾರಿ ಕತ್ತಲ ಭಾಗ್ಯ ಸಿಗಲಿದೆಯೇ? ಎಂಬ ಪ್ರಶ್ನೆ ನಾಗರಾಜನಿಗೆ ಕಾಡಲು ಆರಂಭಿಸಿತ್ತು. [ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]
ಸಿಎಂ ಭಾಷಣ ಮಂಡನೆ ಮಾಡುತ್ತಿರುವಾಗಲೇ ಎರಡು ಸಾರಿ ಕರೆಂಟ್ ಹಾರಿಹೋಗಿತ್ತು. ಇದು ಮುಂದಿನ ವಿದ್ಯುತ್ ಅಭಾವದ ಸೂಚನೆ ಎನ್ನೋದು ನಾಗರಾಜನ ಸಮರ್ಥನೆ.
ಕೇಂದ್ರ ಸರ್ಕಾರ ಮೊನ್ನೆ ಮೊನ್ನೆ ಲೀಟರ್ ಪೆಟ್ರೋಲ್ ಗೆ 3 ರು. ಏರಿಕೆ ಮಾಡಿದೆ. ಈಗ ರಾಜ್ಯ ಸರ್ಕಾರ ತೈಲದ ಮೇಲಿನ ತೆರಿಗೆ ಏರಿಕೆ ಮಾಡಿದ್ದರಿಂದ ಲೀಟರ್ ಪೆಟ್ರೋಲ್ ಕರ್ನಾಟಕದಲ್ಲಿ 1.89 ರು. ದುಬಾರಿಯಾಗಲಿದೆ. ಕೇಂದ್ರ ಸರ್ಕಾರ ದರ ಪರಿಷ್ಕರಣೆ ಮಾಡಿದ್ರೆ ಕಡಿಮೆ ಆಗಬಹುದು. ಆದರೆ ರಾಜ್ಯದ ತೆರಿಗೆ ನೀತಿ ಇನ್ನು ಮುಂದೆ ಶಾಶ್ವತ ಅಂತೆಲ್ಲಾ ನಾಗರಾಜ ತಿಳ್ಕೊಂಡಿದ್ದ.["ಜೇಬಿಗೆ ಬೆಂಕಿ ಇಟ್ರು.. ಪ್ರೀತಿಗೂ ಕೊಳ್ಳಿ ಇಟ್ರು..!]
ಈ ಬಜೆಟ್ ಅಥವಾ ಬಜೆಟ್ ಮಂಡನೆಗೂ ಮುನ್ನವೇ ದೊಡ್ಡದಾಗಿ ಹೇಳಿಬಿಡಬೇಕು. ಈ ಬಾರಿ ಸಿಗರೇಟು, ಮದ್ಯದ ಮೇಲೆ ತೆರಿಗೆ ಹೆಚ್ಚು ಮಾಡುತ್ತೇವೆ ಅಥವಾ "ಪ್ರತಿ ಬಜೆಟ್ ನಲ್ಲೂ ಸಿಗರೇಟ್ ಮತ್ತು ಮದ್ಯದ ಮೇಲೆ ತೆರಿಗೆ ಹೆಚ್ಚಳ ಕಡ್ಡಾಯ" ಎಂದು ಒಂದು ಶಾಸನ ಮಾಡಿ ಇಟ್ಟುಬಿಡಬೇಕು. ಪ್ರತಿ ಬಾರಿ ಏರಿಕೆ ಅಂಥ ಹೇಳಿ ನಮ್ಮ ಹೊಟ್ಟೆ ಉರಿಸೋ ಬದಲು ಹೇಳದೆನೆ ಇದ್ದಿದ್ದರೆ ಒಳ್ಳೆಯದಿತ್ತು.
ಇನ್ನೇನು ಮಾಡಲಿಕ್ಕಾಗುತ್ತೆ.. ಕುಡಿಯವನು ಕುಡಿಬೇಕು, ಸೇದುವವನು ಸೇದಬೇಕು... ಬಜೆಟ್ ನಲ್ಲಿ ಏರಿಕೆ ಮಾಡಿದ್ರು ಅಂಥ ಬಿಟ್ಟಾಕಲಿಕ್ಕಾಗುತ್ತಾ? ಬೆಳಗ್ಗೆಯಿಂದ ಬಜೆಟ್ ಅಂಥ ಟಿವಿ ಮುಂದೆ ಕುಳಿತ ಪರಿಣಾಮ ಧಮ್ ಹೊಡೆಯಲು ಆಗಿಲ್ಲ ಅನ್ನುತ್ತ ಬೀಡಾ ಅಂಗಡಿ ಕಡೆ ನಾಗರಾಜ ಹೆಜ್ಜೆ ಹಾಕಿದ.