ರಾಜ್ಯಕ್ಕೆ 319 ಮೆಗಾವ್ಯಾಟ್ ವಿದ್ಯುತ್ ನೀಡಲು ಕೇಂದ್ರದ ಒಪ್ಪಿಗೆ
ನವದೆಹಲಿ, ಫೆಬ್ರವರಿ, 26: ಕೇಂದ್ರ ಇಂಧನ ಸಚಿವರಾದ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿರುವ ರಾಜ್ಯ ಬಿಜೆಪಿ ಸಂಸದರ ನಿಯೋಗ ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವರು ರಾಜ್ಯಕ್ಕೆ 319 ಮೆಗಾವ್ಯಾಟ್ ವಿದ್ಯುತ್ತನ್ನು ಪೂರೈಸಲು ಒಪ್ಪಿದ್ದಾರೆ.
ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ ಸದಾನಂದ ಗೌಡ ಮತ್ತು ರಾಜ್ಯದ ಸಂಸದರಾದ ಪ್ರಹ್ಲಾದ ಜೋಷಿ, ಪ್ರತಾಪ್ ಸಿಂಹ, ಭಗವಂತ ಖೂಬಾ ಅವರನ್ನು ಒಳಗೊಂಡ ನಿಯೋಗವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಶುಕ್ರವಾರ ಬೆಳಗ್ಗೆ ಮನವಿ ಸಲ್ಲಿಕೆ ಮಾಡಿತು.[ಕರ್ನಾಟಕಕ್ಕೆ ಬೇಸಿಗೆ ಬಿಸಿ ಜೊತೆಗೆ ಲೋಡ್ ಶೆಡ್ಡಿಂಗ್ ಹೊರೆ]
ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಪರಿಣಾಮ ವಿದ್ಯುತ್ ಕೊರತೆ ಕಂಡುಬಂದಿದೆ. ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆ ತೀವ್ರವಾಗಿರುವುದು ಅಭಿವೃದ್ಧಿಗೆ ಹೊಡೆತವನ್ನು ಉಂಟುಮಾಡುತ್ತಿದೆ ಮತ್ತು ರೈತರಿಗೆ, ಕೈಗಾರಿಕೆಗಳಿಗೆ ಆಗುತ್ತಿರುವ ಸಮಸ್ಯೆ ಆಗುತ್ತಿದೆ ಎಂದು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.
ಬೇಸಿಗೆ ಆರಂಭವಾಗುತ್ತಿದೆ ಜತೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹತ್ತಿರವಾಗುತ್ತಿವೆ. ರಾಜ್ಯಕ್ಕೆ 500 ಮೆಗಾ ವ್ಯಾಟ್ ವಿದ್ಯುತ್ ಅಗತ್ಯವಿದ್ದು ಇದನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಮನವಿ ಮಾಡಲಾಯಿತು.[ಸೌರಶಕ್ತಿಯಿಂದ ಮನೆ ಬೆಳಗಿಸಿದ ಮೈಸೂರಿನ 'ಭಕ್ತವತ್ಸಲ']
ಮನವಿಗೆ ಸ್ಪಂದಿಸಿದ ಮಾನ್ಯ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಸ್ತುತ ಶೇಖರಣೆಯಲ್ಲಿರುವ ವಿದ್ಯುತ್ ಪ್ರಮಾಣವನ್ನು ಪರಿಶೀಲಿಸಿ, ಅದರ ಅನ್ವಯ ಕೂಡಲೇ ರಾಜ್ಯಕ್ಕೆ 319 ಮೆಗಾವ್ಯಾಟ್ ವಿದ್ಯುತ್ತನ್ನು ಪೂರೈಸಲು ಒಪ್ಪಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.