ಬದಲಾದ ರಾಜಕೀಯ: ಯಡಿಯೂರಪ್ಪ ವಿರುದ್ದ ಈಶ್ವರಪ್ಪ ಬಣದ ಮೇಲುಗೈ!
ಉಪಚುನಾವಣೆಯ ಸೋಲು, ತನ್ನ ಬೆಂಬಲಿಗರಿಗೆ ಮಾತ್ರ ಮಣೆಹಾಕುತ್ತಿದ್ದಾರೆ ಎನ್ನುವ ಪಕ್ಷದೊಳಗಿನ ಕೂಗು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತದ್ದಂತೇ, ಬಿಎಸ್ವೈ ಈಶ್ವರಪ್ಪನವರ ಜೊತೆಗೆ ಗುರುತಿಸಿಕೊಂಡಿದ್ದ ಪ್ರಮುಖರ ಜೊತೆ ಮೃದುಧೋರಣೆ?
ರಾಯಣ್ಣ ಬ್ರಿಗೇಡ್ ವಿಚಾರವನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ವಾಕ್ಸಮರ ತಾರಕಕ್ಕೇರಿದ್ದಾಗ, ಇಬ್ಬರನ್ನೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ದೆಹಲಿಗೆ ಕರೆಸಿಕೊಂಡು ಈಶ್ವರಪ್ಪನವರಿಗೆ ಒಬಿಸಿ ಮೋರ್ಚಾದ ನೇತೃತ್ವ ವಹಿಸುವಂತೆ ಸೂಚಿಸಿದ್ದರು.
ಇಬ್ಬರ ನಡುವಿನ ಮೇಲಾಟದಲ್ಲಿ ಈಶ್ವರಪ್ಪನವರಿಗೆ ಸಿಕ್ಕ ಮೊದಲ ಮುನ್ನಡೆ ಇದು ಎಂದೇ ಅಂದು ವ್ಯಾಖ್ಯಾನಿಸಲಾಗಿತ್ತು. ಇದಾದ ನಂತರ ಸ್ವಲ್ಪದಿನ ಸುಮ್ಮನಿದ್ದ ಇಬ್ಬರೂ ಮತ್ತದೇ ಟ್ರ್ಯಾಕಿಗೆ ಮರಳಿದ್ದರು. ಜೊತೆಜೊತೆಗೆ, ಯಡಿಯೂರಪ್ಪ ಉಪಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರೆ, ಈಶ್ವರಪ್ಪ ರಾಜ್ಯ ಸುತ್ತುತ್ತಾ ಬ್ರಿಗೇಡ್ ಕೆಲಸವನ್ನೂ ಮುಂದುವರಿಸಿಕೊಂಡು ಹೋಗಿದ್ದರು. (ಬಿಎಸ್ ವೈ ವಿರುದ್ಧ ಬಿಜೆಪಿ ಅತೃಪ್ತರ ಶಕ್ತಿ ಪ್ರದರ್ಶನ)
ಪಕ್ಷಕ್ಕೆ ಎನ್ನುವುದಕ್ಕಿಂತೆ ಹೆಚ್ಚಾಗಿ ಯಡಿಯೂರಪ್ಪನವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆಯಲ್ಲಿ ಬಿಜೆಪಿ ಸೋತಾಗ, ಪಕ್ಷದೊಳಗೆ ತನಗಾದವರು ಮುಸಿಮುಸಿ ನಗದೇ ಇರುತ್ತಾರಾ ಎನ್ನುವುದು ಯಡಿಯೂರಪ್ಪನವರಿಗೆ ಅರ್ಥವಾಗದ ರಾಜಕೀಯವೇನೂ ಅಲ್ಲ. ಆದರೂ, ಗೆದ್ದೇ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾದಲ್ಲಿದ್ದ ಬಿಎಸ್ವೈಗೆ ಉಪಚುನಾವಣೆಯ ಸೋಲು ಮತ್ತೊಂದು ಹಿನ್ನಡೆಯಾಗಿತ್ತು.
ಉಪಚುನಾವಣೆಯ ಸೋಲು, ಬಿಎಸ್ವೈ ತನ್ನ ಬೆಂಬಲಿಗರಿಗೆ ಮಾತ್ರ ಮಣೆಹಾಕುತ್ತಿದ್ದಾರೆ ಎನ್ನುವ ಪಕ್ಷದೊಳಗಿನ ಕೂಗು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತದ್ದಂತೇ ಎಚ್ಚೆತ್ತುಕೊಂಡ ಯಡಿಯೂರಪ್ಪ, ಈಶ್ವರಪ್ಪನವರ ಜೊತೆಗೆ ಗುರುತಿಸಿಕೊಂಡಿದ್ದ ಪ್ರಮುಖರ ಜೊತೆ ಮೃದುಧೋರಣೆ ತಾಳಲಾರಂಭಿಸಿದರು.
ಈಶ್ವರಪ್ಪನವರ ಜೊತೆಯಿರುವ ಗೊಂದಲಕ್ಕೆ ಯಡಿಯೂರಪ್ಪ ತೆರೆ ಎಳೆಯಲು ಪ್ರಯತ್ನಿಸಿದರೂ, ಪಕ್ಷದಲ್ಲಿನ ಅವರ ಏಕಪಕ್ಷೀಯ ತೀರ್ಮಾನದ ವಿರುದ್ದ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತ ಪಡಿಸುತ್ತಿರುವ ಈಶ್ವರಪ್ಪ, ಗುರುವಾರ (ಏ 27) 'ಸಂಘಟನೆ ಉಳಿಸಿ' ಎನ್ನುವ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಮುಂದೆ ಓದಿ
ಬಿಎಸ್ವೈ, ಈಶ್ವರಪ್ಪ ಮನಸ್ತಾಪ
ಈಶ್ವರಪ್ಪನವರನ್ನು ಓಲೈಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟ ಯಡಿಯೂರಪ್ಪ, ರಾಯಣ್ಣ ಬ್ರಿಗೇಡ್ ನೊಂದಿಗೆ ಗುರುತಿಸಿಕೊಂಡಿರುವ ಮತ್ತು ತನ್ನ ವಿರುದ್ದ ತಿರುಗಿಬಿದ್ದಿರುವ ನಾಯಕರುಗಳಲ್ಲಿ ಮಂಚೂಣಿಯಲ್ಲಿರುವ ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ತುಮಕೂರಿನ ನಂದೀಶ್ ಅವರಿಗೆ ನೀಡಿದ್ದ ನೋಟಿಸ್ ಹಿಂದಕ್ಕೆ ಪಡೆದಿದ್ದರು.
ವೆಂಕಟೇಶಮೂರ್ತಿ ಅಮಾನತು ರದ್ದು
ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರಿನ ಮಾಜಿ ಮೇಯರ್ ಮತ್ತು ಯಡಿಯೂರಪ್ಪ ಕಾರ್ಯಶೈಲಿಯ ವಿರುದ್ದ ತಿರುಗಿಬಿದ್ದಿರುವ ಮತ್ತೊಬ್ಬ ನಾಯಕ ವೆಂಕಟೇಶಮೂರ್ತಿ ಅವರ ಅಮಾನತನ್ನು ಯಡಿಯೊರಪ್ಪ ರದ್ದು ಮಾಡಿದ್ದರು. ಜೊತೆಗೆ, ಈಶ್ವರಪ್ಪನವರ ಮತ್ತೊಂದು ಬೇಡಿಕೆಯಾಗಿದ್ದ ಐದು ಜಿಲ್ಲಾ ಘಟಕದ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದರು.
ಸಂಘಟನೆ ಉಳಿಸಿ ಸಮಾವೇಶ
ಇವೆಲ್ಲದರ ನಡುವೆ ಈಶ್ವರಪ್ಪ ತಮ್ಮ ಆಪ್ತರ ಮೂಲಕ ' ಸಂಘಟನೆ ಉಳಿಸಿ' ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದಾರೆ. ನಮ್ಮ ಕೋರಿಕೆಯನ್ನು ಮನ್ನಿಸದೇ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡು ಪಕ್ಷವನ್ನು ದುರ್ಬಲಗೊಳಿಸುತ್ತಿರುವ ಹಿನ್ನಲೆಯಲ್ಲಿ ಈ ಸಮಾವೇಶ ನಡೆಸಲಾಗುತ್ತಿದೆ ಎಂದು ಈಶ್ವರಪ್ಪ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಅತೃಪ್ತರು
ಅತೃಪ್ತರ ಸಭೆಯಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎನ್ನುವ ಎಚ್ಚರಿಕೆಗೆ ಡೋಂಟ್ ಕೇರ್ ಅಂದಿರುವ ಈಶ್ವರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಭಾನುಪ್ರಕಾಶ್, ನಿರ್ಮಲ್ ಕುಮಾರ್ ಸುರಾನ, ಸೊಗಡು ಶಿವಣ್ಣ ಮುಂತಾದ ನಾಯಕರು ಸಭೆ ನಡೆಸಲು ಮುಂದಾಗಿದ್ದಾರೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ಪುಟ್ಟಸ್ವಾಮಿ ಎಚ್ಚರಿಕೆ ನೀಡಿದ್ದರು.
ಪ್ರಲ್ಹಾದ್ ಜೋಷಿ, ಸೊಗಡು ಶಿವಣ್ಣ ಭೇಟಿ
ಈ ಎಲ್ಲಾ ವಿದ್ಯಮಾನಗಳ ನಡುವೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಮತ್ತು ಸಂಸದ ಪ್ರಲ್ಹಾದ್ ಜೋಷಿ, ತುಮಕೂರಿನಲ್ಲಿ ಸೊಗಡು ಶಿವಣ್ಣ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಪಕ್ಷದಲ್ಲಿ ತಮಗಾಗುತ್ತಿರುವ ನೋವನ್ನು ಶಿವಣ್ಣ ತೋಡಿಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ.
ಅಮಿತ್ ಶಾ ಭೇಟಿಯಾಗಲಿರುವ ಬಿಎಸ್ವೈ
ಈಶ್ವರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರ ಪತ್ರಿಕಾ ಹೇಳಿಕೆ, ವಿಡಿಯೋ ತುಣುಕು ಸೇರಿದಂತೆ ಸಾಧ್ಯವಾದ ಎಲ್ಲಾ ದಾಖಲೆಗಳನ್ನು ಸೇರಿಸಿ ಈ ವಾರಾಂತ್ಯದದಲ್ಲಿ ಯಡಿಯೂರಪ್ಪ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ.