ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಸಂದರ್ಶನ
ಬೆಂಗಳೂರು, ಏ. 17: ಸದಾ ವಿಭಿನ್ನ ಬಗೆಯ ಹೋರಾಟದ ಮೂಲಕ ಸರ್ಕಾರದ ಮೇಲೆ ಛಾಟಿ ಬೀಸುತ್ತ ಗಮನ ಸೆಳೆಯುವ ವಾಟಾಳ್ ನಾಗರಾಜ್ ಶನಿವಾರದ ಬಂದ್ ಕುರಿತಂತೆ ಒನ್ಇಂಡಿಯಾದೊಂದಿಗೆ ಮಾತನಾಡಿದ್ದಾರೆ. ಬಹು ನಿರೀಕ್ಷಿತ ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ ತೆಗೆದಿದ್ದು ರಾಜ್ಯ ಸರ್ಕಾರ ಒಂದು ತಿಂಗಳೊಳಗಾಗಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಬೇಕು ಎಂದು ಆಗ್ರಹಿಸಿ ಬಂದ್ ನಡೆಸಲಾಗುತ್ತಿದೆ.[ಬಂದ್ ಗೆ 500 ಸಂಘಟನೆಗಳ ಬಲ]
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸುಮಾರು 900 ಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿವೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಒನ್ಇಂಡಿಯಾ ಅವರೊಂದಿಗೆ ನಡೆಸಿದ ಫಟಾಫಟ್ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಕರ್ನಾಟಕ ಬಂದ್ ಯಾಕಾಗಿ?
ಯೋಜನೆ ಸಾಕಾರಕ್ಕೆ ಒತ್ತಡ ತರಲು ಬಂದ್ ಅನಿವಾರ್ಯ. ಇದು ಪಕ್ಷಾತೀತ ಹೋರಾಟ. ಆಟೋ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಚಿತ್ರೋದ್ಯಮ ಎಲ್ಲರೂ ಬೆಂಬಲ ನೀಡಿದ್ದಾರೆ. ಸರ್ಕಾರದ ಗಮನ ಸೆಳೆಯಲು ಬಂದ್ ಮಾಡಲೇಬೇಕಿದೆ.
ಬಂದ್ ಆಚರಣೆ ಹೇಗೆ?
ಬೆಂಗಳೂರಿನ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಮೆರವಣಿಗೆ ನಡೆಸಲಾಗಿವುದು. ನಂತರ ಮುಖ್ಯಮಂತ್ರಿಗಳಿಗೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಗುವುದು. ಮುಖ್ಯಮಂತ್ರಿ ಸ್ಪಂದನೆಯ ನಂತರ ಮುಂದಿನ ಹೋರಾಟದ ರೂಪುರೇಷೆ ಸಿದ್ಧವಾಗಲಿದೆ.
ಜನರಿಗೆ ತೊಂದರೆ ಆಗುವುದಿಲ್ಲವೇ?
ಇಲ್ಲ. ಆಂಬುಲೆನ್ಸ್, ವೈದ್ಯಕೀಯ ಸೇವೆ, ಮೂಲ ಸೌಲಭ್ಯಗಳಿಗೆ ನಾವು ತೊಂದರೆ ಮಾಡಲ್ಲ. ಬಂದ್ ಶಾಂತಿಯುತವಾಗಿರಲಿದೆ. ವಾಮ,ರಾಜ ನಗರದಿಂದ ಕಲಬುರಗಿ ವರೆಗೆ ಎಲ್ಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು ಯಶಸ್ವಿಯಾಗಲಿದೆ.
ಜನರಿಗೆ ಏನು ಹೇಳುತ್ತೀರಿ?
ಯಾವ ಕಾರಣಕ್ಕೂ ಕಾನೂನು ಮುರಿಯುವಂಥ ಕೆಲಸ ಮಾಡಬೇಡಿ. ನಮ್ಮ ಆಗ್ರಹ ಶಾಂತಿಯುತವಾಗಿರಲಿ. ಜನರಿಗೆ ತೊಂದರೆ ಕೊಡುವಂಥ ಕೆಲಸ ಮಾಡಬೇಡಿ. ಸ್ವಯಂ ಪ್ರೇರಿತ ಬೆಂಬಲ ವ್ಯಕ್ತವಾಗಿರುವುದರಿಂದ ಯಾವುದೇ ಗೊಂದಲ ಉಂಟಾಗಿಲ್ಲ.
ಬಂದ್ ಗೆ ಯಾರದ್ದಾದರೂ ವಿರೋಧ ಇದೆಯೇ?
ಸಾಸಿವೆ ಕಾಳಿನಷ್ಟು ವಿರೋಧ ವ್ಯಕ್ತವಾಗಿಲ್ಲ. ರಾಜ್ಯದ, ಕನ್ನಡದ ಪರ ಹೋರಾಟಕ್ಕೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಒತ್ತಡ ತರುವುದು ನಮ್ಮ ಉದ್ದೇಶ ವಿನಃ ಜನರಿಗೆ ತೊಂದರೆ ನೀಡುವುದಲ್ಲ.