ಶನಿವಾರ ಕರ್ನಾಟಕ ಬಂದ್, ವಾಟಾಳ್ ನಾಗರಾಜ್ ಸಂದರ್ಶನ
ಬೆಂಗಳೂರು, ಜುಲೈ 29 : 'ಮಹದಾಯಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ಜುಲೈ 30ರಂದು ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್ಗೆ ಸಾವಿರಕ್ಕೂ ಅಧಿಕ ಸಂಘಟನೆಗಳ ಬೆಂಬಲ ಸಿಕ್ಕಿದೆ. ಚಾಮರಾಜನರದಿಂದ ಬೀದರ್ ತನಕ ಎಲ್ಲಾ ಜಿಲ್ಲೆಗಳಲ್ಲಿ ಬಂದ್ ನಡೆಸಲಾಗುತ್ತದೆ' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ಒನ್ ಇಂಡಿಯಾ ಕನ್ನಡದೊಂದಿಗೆ ಶುಕ್ರವಾರ ಮಾತನಾಡಿದ ವಾಟಾಳ್ ನಾಗರಾಜ್ ಅವರು, 'ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರು, ಆಟೋ ಚಾಲಕರು, ಲಾರಿ ಮಾಲೀಕರ ಸಂಘ ಬಂದ್ಗೆ ಬೆಂಬಲ ನೀಡಿವೆ. ಚಿತ್ರೋದ್ಯಮದವರು ಬೆಂಬಲ ಸೂಚಿಸಿದ್ದು, ಅಖಂಡ ಕರ್ನಾಟಕ ಬಂದ್ಗೆ ಜನರು ಬೆಂಬಲ ನೀಡಬೇಕು' ಎಂದು ಮನವಿ ಮಾಡಿದರು.[ಸಾಮಾನ್ಯ ನಾಗರಿಕನಿಗೆ ಸಂಕಷ್ಟ ತಂದಿಟ್ಟ ಮುಷ್ಕರಗಳು]
'ಸುಮಾರು 1,250 ಸಂಘಟನೆಗಳು ಶನಿವಾರದ ಬಂದ್ಗೆ ಬೆಂಬಲ ಕೊಟ್ಟಿವೆ. ಬೆಂಗಳೂರಿನಲ್ಲಿ ಕನ್ನಡ ಪರ ಒಕ್ಕೂಟದ ಸದಸ್ಯರಿಂದ 1 ಲಕ್ಷ ಜನರನ್ನು ಸೇರಿಸಿ ಟೌನ್ಹಾಲ್ನಿಂದ ಸ್ವಾತಂತ್ರ ಉದ್ಯಾನದ ತನಕ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ' ಎಂದರು.[ಮಹಾದಾಯಿ ಹೋರಾಟದ ಚಿತ್ರಗಳು]
'ಶನಿವಾರದ ಬಂದ್ ಮುಗಿದ ಬಳಿಕ ಕನ್ನಡ ಪರ ಸಂಘಟನೆಗಳ ಮುಖಂಡರು ಹುಬ್ಬಳ್ಳಿ-ಧಾರವಾಡ, ಗದಗಕ್ಕೆ ಭೇಟಿ ನೀಡಲಿದ್ದೇವೆ. ಅಲ್ಲಿನ ರೈತರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದೇವೆ. ಪೊಲೀಸರು ಬಂಧಿಸಿ ಜೈಲಿನಲ್ಲಿಇಟ್ಟಿರುವ ರೈತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಿದ್ದೇವೆ' ಎಂದು ಹೇಳಿದರು....
1,250 ಸಂಘಟನೆಗಳ ಬೆಂಬಲ
'ಜುಲೈ 30ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ 1,250 ಸಂಘಟನೆಗಳು ಬೆಂಬಲ ಕೊಟ್ಟಿವೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘ, ಹೋಟೆಲ್ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘ, ಬಿಬಿಎಂಪಿ ನೌಕರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ), ಚಿತ್ರೋದ್ಯಮ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಕೊಟ್ಟಿವೆ' ಎಂದು ವಾಟಾಳ್ ನಾಗರಾಜ್ ಹೇಳಿದರು.
ಜನರು ಬೆಂಬಲ ನೀಡಲು ವಾಟಾಳ್ ಕರೆ
'ಕರ್ನಾಟಕದ ಹಿತರಕ್ಷಣೆಗಾಗಿ ಈ ಬಂದ್ ಕರೆ ನೀಡಲಾಗಿದೆ. ಕರ್ನಾಟಕದ ಜನರು ಈ ಬಂದ್ಗೆ ಬೆಂಬಲ ನೀಡಬೇಕು. ಸಾರಿಗೆ ಸಂಚಾರ ಸ್ಥಗಿತಗೊಳ್ಳುವುದರಿಂದ ಜನರು ದೂರ ಪ್ರಯಾಣ ಮಾಡಬಾರದು. ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಬೆಂಬಲ ನೀಡಬೇಕು. ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಕ್ಕೆ ನಮ್ಮ ಶಕ್ತಿ ತೋರಿಸಬೇಕು' ಎಂದು ವಾಟಾಳ್ ಕರೆ ನೀಡಿದರು.
1 ಲಕ್ಷ ಜನರಿಂದ ಬೃಹತ್ ಪ್ರತಿಭಟನೆ
'ವಿವಿಧ ಕನ್ನಡ ಪರ ಸಂಘಟನೆಗಳ ಸದಸ್ಯರ ಜೊತೆ ನಾನು ಬೆಂಬಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತೇವೆ. ಟೌನ್ಹಾಲ್ನಿಂದ ಫ್ರೀಡಂಪಾರ್ಕ್ ತನಕ ಈ ಪ್ರತಿಭಟನಾ ಜಾಥಾ ನಡೆಯಲಿದ್ದು, ಸುಮಾರು 1 ಲಕ್ಷ ಜನರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ವಾಟಾಳ್ ನಾಗರಾಜ್ ಹೇಳಿದರು.
ಯಾವುದಕ್ಕೆ ವಿನಾಯಿತಿ?
'ಶನಿವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ. ಹಾಲು, ಮೆಡಿಕಲ್ ಶಾಪ್, ಆಸ್ಪತ್ರೆ, ಆಂಬ್ಯುಲೆನ್ಸ್, ಮಾಧ್ಯಮಗಳಿಗೆ ಮಾತ್ರ ಬಂದ್ನಿಂದ ವಿನಾಯಿತಿ ನೀಡಲಾಗಿದೆ' ಎಂದು ವಾಟಾಳ್ ನಾಗರಾಜ್ ಹೇಳಿದರು.
ಪ್ರತಿಭಟನೆ ನಡೆಸುವವರು
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ), ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಐಟಿಯುಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಬರಾವ್, ಕರ್ನಾಟಕ ರಕ್ಷಣಾ ವೇದಿಕೆ ಆಟೋ ಚಾಲಕರ ಸಂಘ (ಪ್ರವೀಣ್ ಶೆಟ್ಟಿ ಬಣ) ಮುಂತಾದವರು.