'ಬಂದ್' ವಾರದಲ್ಲಿ ರಾಜ್ಯಕ್ಕಾದ ನಷ್ಟ ತುಂಬುವವರು ಯಾರು?
ಬೆಂಗಳೂರು, ಆಗಸ್ಟ್, 01: ಕಳೆದ ವಾರವನ್ನು ಕರ್ನಾಟಕದ ಬಂದ್ ವಾರ ಎಂದೇ ಕರೆಯಬಹುದು. ವಾರದ ಆರಂಭದಲ್ಲಿ ಕೆಎಸ್ ಆರ್ ಟಿಸಿ ನೌಕರರ ಮುಷ್ಕರ, ವಾರದ ಅಂತ್ಯದಲ್ಲಿ ಕಳಸಾ ಬಂಡೂರಿ ಹೋರಾಟ.
ಬಂದ್ ಮಾಡಿ ನೀರಿಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದು ಸರಿಯೇ. ಆದರೆ ಈ ಬಂದ್ ನಿಂದ ಆದ ನಷ್ಟವನ್ನು ಲೆಕ್ಕಹಾಕಿದರೆ ಒಂದು ಕ್ಷಣ ಮೌನ ತಾಳಬೇಕಾಗುತ್ತದೆ. ಬಂದ್ ನಿಂದ ಲಾಭವಾಗಿದ್ದು ನಮ್ಮ ಮೆಟ್ರೋಕ್ಕೆ ಮಾತ್ರ! ಆದರೆ ಮಂಗಳವಾರ (26) ರಂದು ಪಡೆದುಕೊಂಡ ಲಾಭವನ್ನು ಮೆಟ್ರೋ ಶನಿವಾರ ಕಳೆದುಕೊಂಡಿದೆ.[ರಾಜಧಾನಿ ಬೆಂಗಳೂರಲ್ಲಿ ಕರ್ನಾಟಕ ಬಂದ್ ಬಿಸಿ ಹೇಗಿತ್ತು?]
ಜುಲೈ ಕೊನೆ ವಾರದಲ್ಲಿ ಕರ್ನಾಟಕಕ್ಕೆ 8 ಸಾವಿರದಿಂದ 9 ಸಾವಿರ ಕೋಟಿ ರು. ನಷ್ಟವಾಗಿದೆ. ಬಂದ್ ಕಾರಣಕ್ಕೆ ಬಸ್ ಗಳಿಗೆ ಕಲ್ಲು ತೂರಿದ್ದು, ಸಾರ್ವಜನಿಕ ಆಸ್ತಿ ಹಾನಿ ಲೆಕ್ಕ ಇನ್ನು ಸಿಗಬೇಕಿದೆ.
ರಾಜ್ಯಕ್ಕಾದ ನಷ್ಟ
ಪ್ರತಿದಿನ ಸಾವಿರದಿಂದ ಒಂದೂವರೆ ಸಾವಿರ ಕೋಟಿ ರು. ನಷ್ಟವಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ ಮತ್ತು ಬೆಂಗಳೂರು ನಗರದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಬೆಂಗಳೂರಿನ ಪಾಲು ದೊಡ್ಡದು
ನಷ್ಟ ಮಾಡಿಕೊಂಡಿದ್ದರಲ್ಲಿ ರಾಜಧಾನಿ ಬೆಂಗಳೂರಿನ ಪಾಲೇ ದೊಡ್ಡದು. ಬೆಂಗಳೂರಿಗೆ ಪ್ರತಿದಿನ 600 ರಿಂದ 800 ಕೋಟಿ ರು. ನಷ್ಟವಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.
ಮಳೆ ತಂದ ಸಂಕಷ್ಟ
ರಾಜ್ಯದಲ್ಲಿ ಒಂದೆಡೆ ಮುಷ್ಕರ ಮತ್ತು ಬಂದ್ ಬಿಸಿ ಏರಿದ್ದರೆ ಇನ್ನೊಂದು ಕಡೆ ಮಳೆ ಜನರಿಗೆ ಸಂಕಷ್ಟ ತಂದಿಟ್ಟಿತ್ತು. ಬೆಂಗಳೂರಲ್ಲಿ ಮಳೆ ಇನ್ನಿಲ್ಲದ ಕಾಟ ನೀಡಿತ್ತು.
ನಿಲ್ದಾಣದಲ್ಲಿ ನಿಂತ ಕೆಎಸ್ ಆರ್ ಟಿಸಿ
ಮುಷ್ಕರದ ಕಾರಣಕ್ಕೆ ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಮತ್ತೆ ಶನಿವಾರ ಕರ್ನಾಟಕ ಬಂದ್ ಕಾರಣಕ್ಕೆ ಬಸ್ ಗಳು ಸಂಚಾರ ನಡೆಸಲಿಲ್ಲ.