ಕಾಂಗ್ರೆಸ್ಸಿಗರಿಗೆ ಕಲಾಪಕ್ಕಿಂತ ರಾಹುಲ್ ಗಾಂಧಿ ಪೋಗ್ರಾಂ ಮುಖ್ಯವಾಯ್ತು
ನಮ್ಮ ಕಷ್ಟ ನಷ್ಟದ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಎಂದು ಆಯ್ಕೆ ಮಾಡಿದ ಜನಪ್ರತಿನಿಧಿಗಳು ಹೈಕಮಾಂಡ್ ನಾಯಕನನ್ನು ನೋಡಲು ಕಲಾಪಕ್ಕೆ ಚಕ್ಕರ್ ಹಾಕಿದ್ದಾರೆ.
ಬೆಂಗಳೂರು, ಜೂನ್ 12: 'ಆಡಳಿತ ಪಕ್ಷ ಕಾಂಗ್ರೆಸ್ಸಿನ ಶಾಸಕರಿಗೆ ಬಹುಮುಖ್ಯ ಕಾರ್ಯಕ್ರಮವಿದೆ. ಹೀಗಾಗಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪ ಮುಂದೂಡಲಾಗಿದೆ'. 'ನ್ಯಾಷನಲ್ ಹೆರಾಲ್ಡ್' ಮರುಹುಟ್ಟು ನೀಡುವ ಕಾರ್ಯಕ್ರಮಕ್ಕಾಗಿ ಸದನದ ಕಲಾಪಕ್ಕೆ ಕಾಂಗ್ರೆಸ್ ನಾಯಕರು ಮಾಸ್ ಬಂಕ್ ಮಾಡಿದ್ದಾರೆ.
ಜನ ಸಾಮಾನ್ಯರ ಕಷ್ಟ ನಷ್ಟದ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಎಂದು ಆಯ್ಕೆ ಮಾಡಿ ವಿಧಾನ ಸೌಧಕ್ಕೆ ಕಳಿಸಿದರೆ, ನಮ್ಮ ಜನಪ್ರತಿನಿಧಿಗಳು ಹೈಕಮಾಂಡ್ ನಾಯಕನನ್ನು ನೋಡಲು ಕಲಾಪಕ್ಕೆ ಚಕ್ಕರ್ ಹಾಕಿದ್ದಾರೆ. ಮೊದಲೇ ಹಾಜರಾತಿ ಡಲ್ ಹೊಡೆಯುತ್ತಿದೆ. ಹಾಜರಾತಿ ಹೆಚ್ಚಿಸಲು ತಂತ್ರಜ್ಞಾನ ಬಳಸಿ, ಕಟ್ಟುನಿಟ್ಟಿನ ಕ್ರಮ ಜರುಗಿಸಿದರೂ ಕಾಂಗ್ರೆಸ್ಸಿಗರು ಅಧಿಕೃತವಾಗಿ ಚಕ್ಕರ್ ಹಾಕಿದ್ದಾರೆ.
ಬೆಂಗಳೂರಿನಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಮರುಚಾಲನೆ
ಆಡಳಿತ ಪಕ್ಷ ಕಾಂಗ್ರೆಸ್ಸಿನ ಮನವಿ ಮೇರೆಗೆ ಮೇಲ್ಮನೆ ಕಲಾಪವನ್ನು ಮುಂದೂಡಲಾಗಿದೆ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಕಟಿಸಿದ್ದಾರೆ. ಪಕ್ಷದ ಸದಸ್ಯರೆಲ್ಲರೂ ಆ ಕಾರ್ಯಕ್ರಮಕ್ಕೆ ತೆರಳುತ್ತಿರುವುದಾಗಿ ಮುಖ್ಯ ಸಚೇತಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿರುವುದಾಗಿ ಸಭಾಪತಿ ಪ್ರಕಟಿಸಿದರು.
ಡಾ.ರಾಜ್ ನಿವಾಸಕ್ಕಿಂದು ರಾಹುಲ್ ಗಾಂಧಿ ಭೇಟಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಿದ್ದು, ನೆಹರೂ ಕಾಲದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮರು ಹುಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟದ ಸದಸ್ಯರು ಹಾಗೂ ಶಾಸಕರು ಪಾಲ್ಗೊಂಡಿದ್ದಾರೆ. ಈ ಕಾರಣಕ್ಕೆ ಅಧಿವೇಶನದ ಕಲಾಪವನ್ನೇ ಮುಂದೂಡಲಾಗಿದೆ. ಅದರೆ, ಜೂನ್ 21ರ ತನಕ ಕಲಾಪ ನಡೆಯಲಿದ್ದು, ಈ ದಿನದ ನಷ್ಟವನ್ನು ಮತ್ತೊಂದು ದಿನ ಕಲಾಪದಲ್ಲಿ ತುಂಬಲಾಗುವುದು ಎಂದು ಕಾಂಗ್ರೆಸ್ಸಿಗರು ಸಮಜಾಯಿಷಿ ನೀಡಿದ್ದಾರೆ.
ವಿಧಾನಪರಿಷತ್ ನಲ್ಲಿ ಇಂದು ಸಾಲಮನ್ನಾ ಬಗ್ಗೆ ಚರ್ಚೆ ಆರಂಭವಾಗಿತ್ತು. ಆದರೆ, ಆಡಳಿತ ಪಕ್ಷದ ಸದಸ್ಯರು ಮಾಸ್ ಬಂಕ್ ಮಾಡಿದ್ದರಿಂದ ವಿಧಿ ಇಲ್ಲದೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಖಾಸಗಿ ಕಾರ್ಯಕ್ರಮಕ್ಕಾಗಿ ನಾಡಿನ ಎಲ್ಲಾ ವರ್ಗದ ಜನರ ಪ್ರತಿನಿಧಿಗಳು ಈ ರೀತಿ ಸದನಕ್ಕೆ ಚಕ್ಕರ್ ಹಾಕುವುದು ಎಷ್ಟು ಸರಿ?