ಅಂಗೀಕಾರವಾದ ಈ ವಿಧೇಯಕ, ಪರಿಸರಕ್ಕೆ ಎಷ್ಟು ಮಾರಕ?
ಬೆಂಗಳೂರು, ಜುಲೈ, 19: ಕರ್ನಾಟಕ ವಿಧಾಸಭೆಯಲ್ಲಿ ಚರ್ಚೆಯನ್ನೇ ಮಾಡದೇ ನಗರಾಭಿವೃದ್ಧಿಗೆ ಸಂಬಂಧಿಸಿದ ವಿಧೇಯಕವೊಂದನ್ನು ಅಂಗೀಕಾರ ಮಾಡಲಾಗಿದೆ. ಯಾವುದೋ ವಿಧೇಯಕವಾಗಿದ್ದರೆ ಸುಮ್ಮನೆ ಕೂರಬಹುದಿತ್ತು. ಆದರೆ ಸರ್ಕಾರ ಮಂಡನೆ ಮಾಡಿರುವ ವಿಧೇಯಕ ನಗರೀಕರಣದ ದುರಂತ ಕತೆ ಹೇಳುತ್ತದೆ.
ಉದ್ಯಾನವನ ಮತ್ತು ಸಾಮಾಜಿಕ ಅರಣ್ಯಕ್ಕೆ ಮೀಸಲಿಟ್ಟ ಜಾಗಗಳನ್ನು ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕ 2016ಕ್ಕೆ (ಅರ್ಬನ್ ಡೆವಲಪ್ ಮೆಂಟ್ ಅಥಾರಿಟಿ ಬಿಲ್ ) ವಿಧಾನಸಭೆ ಒಪ್ಪಿಗೆ ನೀಡಿದೆ.[12 ದಿನ ಮೊದಲೇ ಅಧಿವೇಶನ ಮುಕ್ತಾಯ]
ಉದ್ಯಾನ ಮತ್ತು ಮೈದಾನಗಳಿಗೆ ಮೀಸಲಿಟ್ಟ ಜಾಗದಲ್ಲಿ ಕಡಿತವಾಗಲಿದೆ. ಶೇ. 15 ಇದ್ದ ಮೀಸಲು ಪ್ರಮಾಣ ಶೇ. 10 ಕ್ಕೆ ಇಳಿಯಲಿದೆ. ಎಂಕೆ ಗಣಪತಿ ಆತ್ಮಹತ್ಯೆ ಕಾರಣಕ್ಕೆ ವಿಧಾನಸಭೆಯಲ್ಲಿ ಬೇರೆ ಯಾವ ವಿಧೆಯಕದ ಬಗ್ಗೆಯೂ ಸಮರ್ಪಕ ಚರ್ಚೆ ನಡೆಯಲೇ ಇಲ್ಲ.[ಒಂದು ದಿನದ ಕಲಾಪಕ್ಕೆ ಲಕ್ಷ-ಲಕ್ಷ ವೆಚ್ಚ, ಚರ್ಚೆ ಶೂನ್ಯ]
ಈಗಲೇ ಮಹಾನಗರಗಳಲ್ಲಿ ಉದ್ಯಾನಗಳು, ಕೆರೆಗಳು ಅಕ್ರಮ ಒತ್ತುವರಿದಾರರ ಪಾಲಾಗಿದೆ. ರಾಜಕಾಲುವೆಯನ್ನು ಬಿಟ್ಟಿಲ್ಲ. ಈ ಕಾನೂನು ಜಾರಿಯಾದ ಮೇಲೆ ನೀವು ಮುಂಜಾನೆ ವಾಕಿಂಗ್ ತೆರಳಲು ಬೇರೆ ಜಾಗ ನೋಡಿಕೊಳ್ಳಬೇಕಾಗುತ್ತದೆ.